ಲಾಠಿ ರುಚಿ ತೋರಿಸಿದ ಕರ್ನಾಟಕ ಪೊಲೀಸರ ವಿರುದ್ಧ ಪಿಐಎಲ್
ಬೆಂಗಳೂರು, ಮಾರ್ಚ್ 27: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶದೆಲ್ಲೆಡೆ 21 ದಿನಗಳ ಲಾಕ್ ಡೌನ್ ಆಚರಣೆಯಲ್ಲಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಕೂಡಾ ಸಿಆರ್ ಪಿಸಿ ಸೆಕ್ಷನ್ 144 ಜಾರಿಗೊಳಿಸಿ, ಸಾರ್ವಜನಿಕರ ಸಂಚಾರ ನಿಯಂತ್ರಿಸಲು ಯತ್ನಿಸಿದೆ.
ಆದರೆ, ಲಾಕ್ ಡೌನ್ ಸಂದರ್ಭದಲ್ಲಿ ಬಹುತೇಕ ರಾಜ್ಯದೆಲ್ಲೆಡೆ ಕರ್ಫ್ಯೂ ನಿಯಮ ಉಲ್ಲಂಘಿಸಲಾಗಿದೆ. ಅಗತ್ಯ ವಸ್ತು ಖರೀದಿ, ಹಬ್ಬದ ಶಾಪಿಂಗ್, ಹೊಸ ತೊಡಕು ಬಾಡೂಟಕ್ಕೆ ಮಾಂಸ, ಮೀನು ಎಂದು ಹೇಳಿ ಕಳೆದ ಎರಡು ದಿನದಿಂದ ಅನೇಕ ಮಂದಿ ಮಾರುಕಟ್ಟೆಗಳಿಗೆ ಮುಗಿಬೀಳುತ್ತಿದ್ದಾರೆ.
ಈ ಸಂದರ್ಭದಲ್ಲಿ ನಿಯಮ ಮೀರಿ ರಸ್ತೆಗಿಳಿದವರು ಸೇರಿದಂತೆ ಹಲವರಿಗೆ ಪೊಲೀಸರು ತಮ್ಮ ಭಾಷೆಯಲ್ಲಿ ಬುದ್ಧಿವಾದ ಹೇಳಿದ್ದಾರೆ. ಅನೇಕರಿಗೆ ಲಾಠಿ ರುಚಿ ತೋರಿಸಿದ್ದಾರೆ. ಪುಂಡುಪೋಕರಿಗಳಿಗೆ ರಸ್ತೆ ಮಧ್ಯೆ ಬಸ್ಕಿ ಹೊಡೆಸಿದ್ದಾರೆ. ಆದರೂ, ಜನ ಎಚ್ಚೆತ್ತುಕೊಂಡಿಲ್ಲ. ಈ ನಡುವೆ ಲಾಕ್ ಡೌನ್ ನಿಯಮ ಮೀರಿ ರಸ್ತೆಗಿಳಿದ ಜನರ ಮೇಲೆ ವಿನಾಕರಣ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪೊಲೀಸರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ.

ವಕೀಲ ಎನ್. ಪಿ ಅಮೃತೇಶ್ ಅವರು ರಾಜ್ಯ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ. ಪೊಲೀಸರಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಧಿಕಾರ ದುರ್ಬಳಕೆಯಾಗುತ್ತಿದೆ. ಅವಾಚ್ಯ ಶಬ್ದ ಬಳಸುತ್ತಿದ್ದಾರೆ. ಸಾರ್ವಜನಿಕರನ್ನು ಹೊಡೆಯುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ತರಲು ಹೋದವರು, ತರಕಾರಿ, ಸೊಪ್ಪು ಮಾರಾಟಗಾರರ ಮೇಲೂ ಹಲ್ಲೆಯಾಗಿದೆ, ಈ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ಕೂಡಲೇ ಪೊಲೀಸ್ ಇಲಾಖೆಗೆ ನ್ಯಾಯಾಲಯವು ಸೂಕ್ತ ನಿರ್ದೇಶನ ನೀಡಬೇಕು ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications