ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯ ಮುಖ್ಯಾಂಶ
ಬೆಂಗಳೂರು, ಜನವರಿ 25 : ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ಸಮನ್ವಯ ಸಮಿತಿ ಸಭೆ ನಡೆಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಗಮವಾಗಿ ನಡೆಯಲು ಹಲವಾರು ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಪಾಲ್ಗೊಂಡಿದ್ದರು.

ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈಗಾಗಲೇ ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆಗೆ 4 ವಿಭಾಗಗಳಿಗೆ 4 ಸಚಿವರ ಪ್ರತ್ಯೇಕ ತಂಡ ರಚನೆ ಮಾಡಿದ್ದು, ಆ ಸಚಿವರುಗಳು ಪ್ರತಿ ಜಿಲ್ಲೆಗೂ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ, ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
ಸಭೆಯ ಮುಖ್ಯಾಂಶಗಳು
* ನಾವು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಅದೇ ರೀತಿ ಜಾನುವಾರುಗಳಿಗೆ ಮೇವು, ಉದ್ಯೋಗ ಸೃಷ್ಟಿ ಸಂಬಂಧ ಚರ್ಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
* ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಹಾಗೂ ಉಮೇಶ್ ಜಾದವ್ ಅವರಿಗೆ ನೀಡಿದ್ದ ನೋಟಿಸ್ಗೆ ಮೂವರು ಶಾಸಕರು ಈಗಾಗಲೇ ಉತ್ತರಿಸಿದ್ದಾರೆ. ಸಭೆಗೆ ಗೈರಾಗಿರುವುದಕ್ಕೆ ಕಾರಣ ಮತ್ತು ತಾವು ಪಕ್ಷಕ್ಕೆ ನಿಷ್ಠರೆಂಬುದನ್ನು ಅವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
* ನಿಗಮ ಮಂಡಳಿಗಳಿಗೆ ಅಧ್ಯಕ್ಷರುಗಳಾಗಿ ಆಯ್ಕೆಯಾದ ಶಾಸಕರಿಗೆ ಆದೇಶ ಪ್ರತಿಯನ್ನು ನೀಡಿರಲಿಲ್ಲ, ಆದಷ್ಟು ಬೇಗ ಅವರಿಗೆ ಆದೇಶ ಪ್ರತಿ ನೀಡುವ ಸಭೆಯಲ್ಲಿ ಚರ್ಚಿಸಲಾಯಿತು.
* ಮುಂದಿನ 3-4 ದಿನಗಳಲ್ಲಿ ಲೋಕಸಭೆ ಕ್ಷೇತ್ರ ಹಂಚಿಕೆ ಬಗ್ಗೆ ಮತ್ತೊಮ್ಮೆ ಸಭೆ ಸೇರಿ, ಚರ್ಚಿಸಿ, ಒಮ್ಮತದ ನಿರ್ಣಯ ಕೈಗೊಳ್ಳಲಾಗುತ್ತದೆ.
* ಬಡ್ತಿ ಮೀಸಲು ಸಂಬಂಧ ಚರ್ಚಿಸಲಾಗಿದ್ದು, ಎ.ಜಿ ವರದಿ ಆಧಾರಿಸಿ ಆದೇಶ ನೀಡುವಂತೆ ಸೂಚಿಸಲಾಗಿದೆ.
* ಸರ್ಕಾರ ಸುಭದ್ರವಾಗಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಆಡಳಿತ ನೀಡುವತ್ತ ಒಂದಾಗಿ ಕಾರ್ಯನಿರ್ವಹಿಸಲು ಮೈತ್ರಿ ಪಕ್ಷಗಳು ಬದ್ಧವಾಗಿವೆ.












Click it and Unblock the Notifications