ಸರ್ಕಾರದಲ್ಲಿ ಹೇಗೆ ನಡೆಯುತ್ತೆ 40 ಪರ್ಸೆಂಟ್ ಕಮೀಷನ್ ವ್ಯವಹಾರ?: ಸಂತೋಷ್ ಆರೋಪದ ಸುತ್ತಮುತ್ತ
ಉಡುಪಿ, ಏಪ್ರಿಲ್ 12: ಕರ್ನಾಟಕದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉಡುಪಿಯ ಶಾಂಭವಿ ಲಾಡ್ಜ್ನ ರೂಮ್ ನಂಬರ್ 207ರಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿರುವುದು ತೀವ್ರ ಚರ್ಚೆ ಆಗುತ್ತಿದೆ. ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು ಎನ್ನುವ ಮಟ್ಟಕ್ಕೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.
Breaking: ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ
ಕಳೆದ ಮಾರ್ಚ್ ತಿಂಗಳಿನಲ್ಲಿ ಗುತ್ತಿಗೆದಾರ ಸಂತೋಷ್ ಮಾಡಿದ ಆರೋಪವೇನು?, ಆರೋಪ-ಪ್ರತ್ಯಾರೋಪದ ನಡುವೆ ಸಚಿವ ಈಶ್ವರಪ್ಪನವರು ಮಾನನಷ್ಟ ಮೊಕದ್ದಮೆ ಹೂಡಿದ್ದು ಯಾವಾಗ?, ಸಂತೋಷ್ ಹೇಳುವ ರೀತಿಯಲ್ಲಿ ಈ 40 ಪರ್ಸೆಂಟ್ ವ್ಯವಹಾರ ಹೇಗೆ ನಡೆಯುತ್ತದೆ?, ಕೇಂದ್ರದ ನಾಯಕರಿಗೆ ನೀಡಿದ ದೂರಿಗೆ ರಾಜ್ಯದ ಅಪರ ಕಾರ್ಯದರ್ಶಿಗಳು ನೀಡಿದ ಉತ್ತರ ಏನಾಗಿತ್ತು. ಹೀಗೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬೆನ್ನಲ್ಲೇ ಹುಟ್ಟಿಕೊಂಡಿರುವ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ.
ಹಿಂಡಲಗಾ ಗ್ರಾಮದಲ್ಲಿ ರಸ್ತೆ ಕಾಮಗಾರಿ ತುಂಡು ಗುತ್ತಿಗೆ
ಕಳೆದ ಬಾರಿ ಸೃಷ್ಟಿಯಾಗಿದ್ದ ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮದ ರಸ್ತೆಗಳೆಲ್ಲ ಹಾಳಾಗಿದ್ದವು. ಈ ರಸ್ತೆಗಳ ಅಭಿವೃದ್ಧಿಗೆ ತುಂಡು ಗುತ್ತಿಗೆಯನ್ನು ಪಡೆದು ಕಾಮಗಾರಿ ನಡೆಸಿದೆವು. 2021ರ ಫೆಬ್ರವರಿ 4ರ ವೇಳೆಗೆ ಎಲ್ಲ ರಸ್ತೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿದೆವು. ಅದರ ಒಟ್ಟು ಮೌಲ್ಯ ಸರಿಸುಮಾರು 4 ಕೋಟಿ ರೂಪಾಯಿ ಆಗಿತ್ತು. ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆಯುತ್ತಾ ಬಂದರೂ ಸರ್ಕಾರದಿಂದ ಹಣ ಬಿಡುಗಡೆ ಆಗಿರಲಿಲ್ಲ ಎಂದು ತಮ್ಮ ಕಾಮಗಾರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಳಂಬ ಧೋರಣೆ ಬಗ್ಗೆ ಸಂತೋಷ್ ಪಾಟೀಲ್ ದೂಷಿಸಿದ್ದರು.
ಕೆಲಸ ಆಗಬೇಕಾದರೆ ಕಮೀಷನ್ ತಲುಪಿಸುವುದು ಕಡ್ಡಾಯ
ನನ್ನ ಕೆಲವು ಸ್ನೇಹಿತರು ಕೂಡ ಕಾಮಗಾರಿಗಳನ್ನು ಮಾಡಿದ್ದು, ಅವರಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗಿತ್ತು. ಅಷ್ಟೇ ಏಕೆ ಒಂದು ತಿಂಗಳ ಹಿಂದೆ ಕಾಮಗಾರಿ ಆಗಿರುವ ಗುತ್ತಿಗೆದಾರರಿಗೆ ಹಣ ಸಿಕ್ಕಿದೆ. ಆದರೆ ನಾನು ಕಾರ್ಯವನ್ನು ಪೂರ್ಣಗೊಳಿಸಿ ಒಂದು ವರ್ಷ ಕಳೆದಿದ್ದರೂ ಸರ್ಕಾರದಿಂದ ಯಾವುದೇ ಹಣ ಬಿಡುಗಡೆ ಆಗಿಲ್ಲ. ಈ ಸಂಬಂಧ ಹಲವು ಬಾರಿ ಸಚಿವ ಕೆಎಸ್ ಈಶ್ವರಪ್ಪರನ್ನು ಭೇಟಿ ಮಾಡಿದರೂ, ಭರವಸೆ ಬಿಟ್ಟು ಬೇರೆ ಯಾವ ಕೆಲಸವೂ ಆಗುತ್ತಿರಲಿಲ್ಲ. ಇದರಿಂದ ರೋಸಿ ಹೋಗಿ ನನ್ನ ಸ್ನೇಹಿತರನ್ನು ವಿಚಾರಿಸಿದಾಗ ಅವರಿಗೆ ಮುಟ್ಟಬೇಕಾದ್ದು ಮುಟ್ಟಿದರೆ ಮಾತ್ರ ನಿಮ್ಮ ಕೆಲಸ ಆಗುತ್ತದೆ ಎಂಬ ಉತ್ತರ ಬಂದಿತ್ತು," ಎಂದು ಸಂತೋಷ್ ಪಾಟೀಲ್ ಆರೋಪಿಸಿದ್ದರು.
ಕಾಮಗಾರಿಗೆ ಸಾಲ ಮಾಡಿರುವಾಗ ಕಮೀಷನ್ ಹೇಗೆ ಕೊಡಲಿ?
"ನಾನು ಮಾಡಿರುವ ರಸ್ತೆ ಕಾಮಗಾರಿಯ ಒಟ್ಟು ಮೌಲ್ಯ 4 ಕೋಟಿ ರೂಪಾಯಿ ಆಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸಾಲ ಮಾಡಿದ್ದೇನೆ. ಹೀಗಿರುವಾಗ ಶೇ.40ರಷ್ಟು ಕಮೀಷನ್ ಕೇಳುತ್ತಿದ್ದರೆ, ಅದನ್ನು ಹೇಗೆ ಕೊಡಬೇಕು ಎಂಬ ಟೆನ್ಷನ್ ಶುರುವಾಯಿತು. ಮಾಡಿರುವ ಸಾಲಕ್ಕೆ ಇರುವುದನ್ನೂ ಕಳೆದುಕೊಳ್ಳುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನುವುದು ಸಂತೋಷ್ ಪಾಟೀಲ್ ಅವರು ಈ ಹಿಂದೆ ಹೇಳಿದ ಮಾತಾಗಿತ್ತು. ಹೀಗೆ ಮುಂದುವರಿದು ಮಾತನಾಡಿದ್ದ ಅವರು ಕಮೀಷನ್ ವ್ಯವಹಾರ ಯಾರ ಮೂಲಕ ನಡೆಯುತ್ತದೆ ಎಂಬುದನ್ನೂ ವಿವರಿಸಿದ್ದಾರೆ.
ಕಮೀಷನ್ ವ್ಯವಹಾರ ನಡೆಯುವುದು ಹೇಗೆ?
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೇರವಾಗಿ ಕೇಳುವುದಿಲ್ಲ. ಅವರ ನೇರವಾಗಿ ಕೇಳಿಯೂ ಇಲ್ಲ. ಅದಕ್ಕಾಗಿಯೇ ಅವರ ಆಪ್ತ ಸಹಾಯಕರು ಇರುತ್ತಾರೆ. ನೀವು ಇಂಥವರ ಬಳಿಗೆ ಹೋದ್ರೆ ಮಾತ್ರ ಕೆಲಸವಾಗುತ್ತದೆ ಎಂದು ಅವರೇ ಹೇಳುತ್ತಾರೆ. ಹೀಗೆ ಅಲೆದು ಅಲೆದುಕೊಂಡೇ ಸಾಕಷ್ಟು ಹಣವನ್ನು ಖರ್ಚು ಮಾಡಿ ಬಿಟ್ಟಿದ್ದೀನಿ. ಅವರ ಸಹಾಯಕರಾಗಿ ರಮೇಶ್, ಬಸವರಾಜ್, ಸುಧೀಂದ್ರ ಸೇರಿದಂತೆ ಇನ್ನೂ ನಾಲ್ಕೈದು ಜನ ಇದ್ದಾರೆ," ಎಂದು ಸಂತೋಷ್ ಪಾಟೀಲ್ ದೂಷಿಸಿದ್ದರು.
ದೆಹಲಿಯ ಮಟ್ಟದಲ್ಲೂ ಮನವಿ ಸಲ್ಲಿಕೆ
"ರಾಜ್ಯದಲ್ಲಿ ನಮ್ಮ ಕೆಲಸ ಸಾಧ್ಯವಿಲ್ಲ ಎಂಬುದು ತಿಳಿಯುತ್ತಿದ್ದಂತೆ ನಾವು ದೆಹಲಿಗೆ ಹೋದೆವು. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಮತ್ತು ಬಿಎಲ್ ಸಂತೋಷ್ ಅವರಿಗೂ ಮನವಿ ಸಲ್ಲಿಸಿದೆ. ಆರ್ಡಿಪಿಆರ್ ಸಚಿವರಿಂದಲೂ ಪ್ರತಿಕ್ರಿಯೆ ಬಂದಿದೆ. ಪ್ರಧಾನಿ ಭೇಟಿ ಸಾಧ್ಯವಾಗದ ಹಿನ್ನೆಲೆ ಈ-ಮೇಲ್ ಮೂಲಕ ಅವರಿಗೂ ದೂರು ನೀಡಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಈ-ಮೇಲ್ ಮೂಲಕ ಮಾಹಿತಿ ನೀಡಿದ್ದೆನು. ಆದರೆ ಯಾರಿಂದಲೂ ಪ್ರತಿಕ್ರಿಯೆ ಬಂದಿಲ್ಲ," ಎಂದು ಸಂತೋಷ್ ಪಾಟೀಲ್ ದೂರಿದ್ದರು.
ಸಂತೋಷ್ ಪಾಟೀಲ್ ಆರೋಪದ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ
ನಾಲ್ಕು ಕೋಟಿ ಕಾಮಗಾರಿಗೆ ಹಣ ಬಿಡುಗಡೆ ಮಾಡುವುದಕ್ಕೆ ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಕಮೀಷನ್ ಕೇಳುತ್ತಿದ್ದಾರೆ ಎಂದು ಸಂತೋಷ್ ಕೆ ಪಾಟೀಲ್ ಎಂಬ ವ್ಯಕ್ತಿಯು ಕೇಂದ್ರದ ಪಂಚಾಯತ್ ರಾಜ್ ಸಚಿವರಿಗೆ ಒಂದು ಪತ್ರವನ್ನು ಬರೆದಿದ್ದಾರೆ. ಆ ಪತ್ರಕ್ಕೆ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿಗಳು ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ.
"ರಾಜ್ಯದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಸಂತೋಷ್ ಪಾಟೀಲ್ ಉಲ್ಲೇಖಿಸಿ ಕಾಮಗಾರಿಗೆ ಅನುಮೋದನೆಯನ್ನು ಕೋರಿಲ್ಲ. ಸರ್ಕಾರವು ಯಾವುದೇ ಕಾಮಗಾರಿಯನ್ನು ಮಂಜೂರು ಮಾಡಿಲ್ಲ. ಈ ಕಾಮಗಾರಿ ಸಂಬಂಧ ಇಲಾಖೆಯು ಯಾವುದೇ ಕಾರ್ಯಾದೇಶವನ್ನು ನೀಡಿಲ್ಲ, ಆಡಳಿತಾತ್ಮಕ ಅನುಮೋದನೆಯನ್ನೂ ಸಹ ನೀಡಿಲ್ಲ ಎಂದು ಅಪರ ಮುಖ್ಯ ಕಾರ್ಯದರ್ಶಿಯವರು ಕೇಂದ್ರದ ಸಚಿವರಿಗೆ ಈ ಕುರಿತು ಸ್ಪಷ್ಟೀಕರಣವನ್ನು ನೀಡಿ ಪತ್ರವನ್ನು ಬರೆದಿದ್ದಾರೆ," ಎಂದು ಸಚಿವ ಕೆಎಸ್ ಈಶ್ವರಪ್ಪ ಈ ಹಿಂದೆ ಉಲ್ಲೇಖಿಸಿದ್ದರು.
ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಚಿವ ಕೆಎಸ್ ಈಶ್ವರಪ್ಪ
ಕಾಮಗಾರಿ ಅನುಮೋದನೆ ಆಗಿಲ್ಲ, ಕೆಲಸಕ್ಕೆ ಆದೇಶವನ್ನು ನೀಡಿಲ್ಲ. ಇದರ ಮಧ್ಯೆ ನಮಗೆ 4 ಕೋಟಿ ರೂಪಾಯಿ ಹಣ ನೀಡಬೇಕು ಎಂದು ಯಾವ ಲೆಕ್ಕದಲ್ಲಿ ಕೇಳುತ್ತಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಕೆಲಸವೇ ಆಗಿಲ್ಲ ಎಂದ ಮೇಲೆ ಕಮೀಷನ್ ಹೇಗೆ ಕೇಳುತ್ತಾರೆ ಎಂಬುದನ್ನು ಅವರೇ ಹೇಳಬೇಕು. ಶೇ.40ರಷ್ಟು ಕಮೀಷನ್ ಕೇಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಟಿವಿ ವಾಹಿನಿಗಳಲ್ಲಿ ಮಾರ್ಚ್ 9ರಂದು ನಾನು ನೋಡಿದೆ. ಮಾರ್ಚ್ 10ರಂದು ಅವರ ವಿರುದ್ಧ ನಾನು ಮಾನನಷ್ಟು ಮೊಕದ್ದಮೆಯನ್ನು ಹಾಕಿದೆ. ಮಾರ್ಚ್ 15ರಂದು ನ್ಯಾಯಾಲಯವು ಈ ಪ್ರಕರಣವನ್ನು ನೋಂದಣಿ ಮಾಡಿಕೊಂಡಿದೆ. ಮಾರ್ಚ್ 19ರಂದು ಹೇಳಿಕೆಯನ್ನು ತೆಗೆೆದುಕೊಳ್ಳಲಾಗಿದೆ.
ಸಂತೋಷ್ ಪಾಟೀಲ್ ವಾಟ್ಸಾಪ್ ಸಂದೇಶದಲ್ಲಿ ಇರುವುದೇನು?
"ನನ್ನ ಸಾವಿಗೆ ನೇರ ಕಾರಣ ಕೆಎಸ್ ಈಶ್ವರಪ್ಪ, ಸಚಿವರು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರ್ಕಾರ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿನೆ ಸರ್ಕಾರ ಎಂದರೆ ಮಾನ್ಯ ಪ್ರಧಾನಮಂತ್ರಿಗಳು ಮತ್ತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ ಎಸ್ ಯಡಿಯೂರಪ್ಪನವರು ಹಾಗೆ ಅವರಿವರೆಂನದೆ ಎಲ್ಲರೂ ಸಹಾಯಹಸ್ತ ನೀಡಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ಗೆಳೆಯರಾದ ಸಂತೋಷ್ ಮತ್ತು ಪ್ರಶಾಂತ್ ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡು ಬಂದಿರುತ್ತೇನೆ. ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ," ಎಂದು ಸಂತೋಷ್ ಪಾಟೀಲ್ ಮಾಡಿರುವ ವಾಟ್ಸಾಪ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.