ರಾಯಚೂರಿನಿಂದ ಸಿದ್ದರಾಮಯ್ಯರನ್ನು ಕಣಕ್ಕಿಳಿಸಲು ಕಾರ್ಯಕರ್ತರ ಒತ್ತಾಸೆ?
ರಾಯಚೂರು.ನ.20: ನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ 17 ಆಕಾಂಕ್ಷಿಗಳು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದು, ಕ್ಷೇತ್ರವೊಂದರಲ್ಲಿಯೇ ಕೆಪಿಸಿಸಿಗೆ 34 ಲಕ್ಷ ಠೇವಣಿ ಸಂಗ್ರಹವಾಗಿ ದಾಖಲೆ ಬರೆದಿದೆ. ತೀವ್ರ ಪೈಪೋಟಿಯ ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಏಕೆ ಸ್ಪರ್ಧಿಸಬಾರದು ಎಂಬ ಅಭಿಪ್ರಾಯ ಈಗ ಕೆಳ ಮಟ್ಟದಿಂದ ಬರುತ್ತಿವೆ.
ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಮತಾದರರೇ ಪ್ರಬಲವಾಗಿರುವ ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೇ, ಭಾರೀ ಅಂತರದಿಂದ ಗೆಲ್ಲಬಹುದು ಎನ್ನುವ ಲೆಕ್ಕಚಾರ ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರುತ್ತಿದೆ.
ರಾಯಚೂರು: ಕಾಂಗ್ರೆಸ್ನ ಹಾಲಿ ಶಾಸಕರಿಗೂ ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ
ಸಿದ್ದರಾಮಯ್ಯ ಅವರು ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲ ಕಾಂಗ್ರೆಸ್ ಮುಖಂಡರು ಮತ್ತು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ ಕೆಲ ಆಕಾಂಕ್ಷಿಗಳು ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲು ಜಿಲ್ಲಾ ಕಾಂಗ್ರೆಸ್ಸಿನಿಂದ ಆಹ್ವಾನಿಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಾಡುತ್ತಿದೆ ಮೂಲಸೌಕರ್ಯಗಳ ಕೊರತೆ
ರಾಜಕೀಯವಾಗಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ಹಾಗೂ ಕ್ಷೇತ್ರ ಅತ್ಯಂತ ಹಿಂದುಳಿದಿದೆ. ನಗರ ವಿಧಾನಸಭಾ ಕ್ಷೇತ್ರ ಜಿಲ್ಲಾ ಕೇಂದ್ರ ಸ್ಥಾನವಾಗಿದ್ದರೂ, ಮೂಲಭೂತ ಸೌಕರ್ಯ ಹೊಂದುವುದರಲ್ಲಿ ದೊಡ್ಡ ಗ್ರಾಮದಂತೆ ಅಥವಾ ಬೃಹತ್ ಸ್ಲಂ ಮಾದರಿಯಲ್ಲಿ ಇದೆ ಎನ್ನುವ ಅನೇಕ ಟೀಕೆಗಳು ಕೇಳಿ ಬರುತ್ತಿವೆ. 35 ವಾರ್ಡ್ ಮತ್ತು 14 ಗ್ರಾಮಗಳನ್ನು ಹೊಂದಿದ ಈ ಕ್ಷೇತ್ರ ತಾಲೂಕು, ಕೇಂದ್ರಗಳಲ್ಲಿರುವ ಅನೇಕ ಮೂಲಭೂತ ಸೌಕರ್ಯಗಳಿಗಿಂತಲೂ ಕಡೆಯಾಗಿದೆ ಎನ್ನುವುದು ಬಹುದೊಡ್ಡ ಅಸಮಾಧಾನವಾಗಿದೆ.
ವಿಹಾರಕ್ಕೆ ಸುಂದರ ತಾಣವಿಲ್ಲದೆ, ಮಕ್ಕಳು ಉಲ್ಲಾಸದಿಂದ ಕಾಲ ಕಳೆಯಲು ಸುಸಜ್ಜಿತ ಉದ್ಯಾನವನ ಸೌಕರ್ಯವಿಲ್ಲ, ರಿಂಗ್ ರಸ್ತೆಯಿಲ್ಲ, ಮೂಲ ಸೌಕರ್ಯದ ಸೌಲಭ್ಯಗಳಿಲ್ಲ. ಜನರಿಗಿಂತ ಅಧಿಕಾರಿ ಮತ್ತು ಗುತ್ತೇದಾರರಿಗೆ ಅನುಕೂಲವಾಗುವ ಕ್ಷೇತ್ರಗಳಲ್ಲಿ ಇಂದೊಂದಾಗಿದೆ ಎನ್ನುವ ನೂರಾರು ದೂರುಗಳಿವೆ. ಜಿಲ್ಲೆ ಮತ್ತು ಈ ಕ್ಷೇತ್ರದ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿಗೆ ಕೊರತೆ ಎನ್ನುವ ಅಪಾದನೆ ಸಾಮಾನ್ಯವಾಗಿ ಕೇಳಿ ಬರುತ್ತದೆ.
ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ ಸಿದ್ದರಾಮಯ್ಯ ಸ್ಪರ್ಧೆ?
ಏಮ್ಸ್ನಂತಹ ಪ್ರತಿಷ್ಠಿತ ಸಂಸ್ಥೆ, ಓಪೆಕ್ ಆಸ್ಪತ್ರೆಯ ಪೂರ್ಣ ಪ್ರಮಾಣದ ಆರಂಭ, ವಿಶ್ವವಿದ್ಯಾಲಯಗಳಿಗೆ ಅನುದಾನದ ಸೌಕರ್ಯಗಳಿಗಾಗಿ ಭಾರೀ ಸಂಪನ್ಮೂಲಕ್ಕೆ ರಾಜಕೀಯ ಪ್ರಾಬಲ್ಯ ಪ್ರಮುಖವಾಗಿ ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನಂತಹವರು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಈ ಕ್ಷೇತ್ರಕ್ಕೆ ಭಾರೀ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರ ಶುಕರುವಾಗಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು, ಒಗ್ಗಟ್ಟಿನಿಂದ ಸಿದ್ದರಾಮಯ್ಯ ಅವರನ್ನು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನಿಸಬಾರದೇಕೇ? ಎನ್ನುವ ಪ್ರಶ್ನೆ ಈಗ ಚರ್ಚೆಯ ಭಾಗವಾಗಿದೆ.
ರಾಯಚೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ, ಪಕ್ಷಕ್ಕೆ ಆನೆಬಲ!
ರಾಜ್ಯದ ಅನೇಕ ಜಿಲ್ಲೆಗಳಿಂದ ಅವರು ಸ್ಪರ್ಧಿಸುವಂತೆ ಆಹ್ವಾನಿಸಲಾಗುತ್ತಿದೆ. ಕೊಪ್ಪಳ, ಕುಷ್ಟಗಿ ಹೀಗೆ ಒಂದೊಂದು ಕ್ಷೇತ್ರದಿಂದ ಅವರನ್ನು ಸ್ಪರ್ಧಿಸಲು ಕೇಳಲಾಗುತ್ತಿದೆ. ಸಿದ್ದರಾಮಯ್ಯರಂತಹ ನಾಯಕರು ರಾಯಚೂರಿನಿಂದ ಸ್ಪರ್ಧಿಸಿದರೆ, ಒಂದೆಡೆ ಜಿಲ್ಲೆಗೆ ರಾಜಕೀಯ ಆನೆಬಲದೊಂದಿಗೆ ಅವರು ಅತಿ ಹೆಚ್ಚಿನ ಮತಗಳಿಂದ ಗೆಲ್ಲಲು ಸಾಧ್ಯ ಎನ್ನುವ ಲೆಕ್ಕಚಾರಗಳಿಂದ ಕಾಂಗ್ರೆಸ್ ಪಕ್ಷದ ಕೆಲವರದ್ದಾಗಿದೆ.
ರಾಯಚೂರಿನಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ತಳಹಂತದಲ್ಲಿ ಚರ್ಚೆ
ಕ್ಷೇತ್ರದಲ್ಲಿ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಮತದಾರರೇ, ಅತ್ಯಾಧಿಕ ಸಂಖ್ಯೆಯಲ್ಲಿರುವುದರಿಂದ ಸಿದ್ದರಾಮಯ್ಯನವರಿಗೆ ಭಾರೀ ಅನುಕೂಲವಾಗಲಿದೆ ಎನ್ನುವುದು ಲೆಕ್ಕಚಾರವಾಗಿದೆ.
ಆದರೆ, ಈ ಬಗ್ಗೆ ಇನ್ನೂವರೆಗೂ ಯಾರು ಸಹ ಅಧಿಕೃತವಾಗಿ ಸಿದ್ದರಾಮಯ್ಯ ಅವರು ಇಲ್ಲಿ ಸ್ಪರ್ಧಿಸಲಿ ಎನ್ನುವ ಹೇಳಿಕೆ ನೀಡಿಲ್ಲವಾದರೂ, ಚರ್ಚೆ ಮಾತ್ರ ಪಕ್ಷದ ಆಂತರಿಕ ವಲಯದಲ್ಲಿ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧಿಸಬೇಕು ಎನ್ನುವುದು ಅವರೇ ನಿರ್ಧರಿಸುವ ಅಂಶವಾಗಿದೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಪರಾಮರ್ಶೆಗಳನ್ನು ನಡೆಸಲಿದೆ. ಈಗಾಗಲೇ ಅನೇಕ ಜಿಲ್ಲೆಗಳಿಂದ ಅವರ ಸ್ಪರ್ಧೆಗೆ ಆಹ್ವಾನ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಜಿಲ್ಲೆಯಿಂದಲೂ ಅವರನ್ನು ಆಹ್ವಾನಿಸಲಿ ಎನ್ನುವ ಅಭಿಪ್ರಾಯ ಈಗ ತಳ ಹಂತದ ಕಾಂಗ್ರೆಸ್ ನಾಯಕರಿಂದ ಕೇಳಿ ಬರುತ್ತಿದೆ.