ಕಾಂಗ್ರೆಸ್ ಟಿಕೆಟ್ಗೆ ಅರ್ಜಿ; ಬರೋಬ್ಬರಿ 21.84 ಕೋಟಿ ರೂ. ಸಂಗ್ರಹ
ಬೆಂಗಳೂರು, ನವೆಂಬರ್ 24: 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳಿಂದ ಬರೋಬ್ಬರಿ 21.84 ಕೋಟಿ ಮೊತ್ತ ಸಂಗ್ರಹವಾಗಿದೆ. ಈ ಹಣವನ್ನು ಕೆಪಿಸಿಸಿ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡುವ ಉದ್ದೇಶವಿದೆ.
ಸಂಗ್ರಹವಾಗಿರುವ ಒಟ್ಟು ಮೊತ್ತವನ್ನು ಕೆಪಿಸಿಸಿ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲು ಉದ್ದೇಶಿಸಲಾಗಿದೆ. ಕೆಪಿಸಿಸಿ ಕಚೇರಿಯ ಹಿಂಭಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಆಗುತ್ತಿದೆ. ಹಣಕಾಸು ಕೊರತೆ ಕಾರಣದಿಂದ ಕಾಮಗಾರಿ ಕುಟುಂತ್ತಾ ಸಾಗುತ್ತಿತ್ತು. ಇದೀಗ ಈ ಮೊತ್ತವನ್ನು ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ಕೆಪಿಸಿಸಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ 2023 ವಿಧಾನಸಭೆ ಚುನಾವಣೆಗೆ ಒಟ್ಟು 1311 ಮಂದಿ ಆಕಾಂಕ್ಷಿಗಳು ಟಿಕೆಟ್ಗಾಗಿ ಅರ್ಜಿ ಪಡೆದುಕೊಂಡಿದ್ದಾರೆ. ಈ ಪೈಕಿ 1230 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಸಾಮಾನ್ಯ ವರ್ಗದಲ್ಲಿ 889 ಅರ್ಜಿಗಳು ಸಲ್ಲಿಕೆಯಾದರೆ, ಎಸ್ಟಿ, ಎಸ್ಸಿ ವರ್ಗದಿಂದ 341 ಅರ್ಜಿಗಳು ಬಂದಿವೆ.
ಇನ್ನೂ ಆರಂಭದಲ್ಲಿ ನವೆಂಬರ್ 1 ರಿಂದ 15 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಒಲವು ತೋರಿಸಿದ ಹಿನ್ನೆಲೆಯಲ್ಲಿ ನವೆಂಬರ್ 21 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ವಿಸ್ತರಣೆ ಮಾಡಲಾಯಿತು.
ಯಾರಿಂದ ಎಷ್ಟು ಸಂಗ್ರಹ; ಅರ್ಜಿ ಸಲ್ಲಿಕೆ ಮಾಡುವ ಸಾಮಾನ್ಯ ವರ್ಗದ ಆಕಾಂಕ್ಷಿಗಳು ಅರ್ಜಿ ಮೊತ್ತ 5 ಸಾವಿರದ ಜೊತೆಗೆ ಎರಡು ಲಕ್ಷದ ಡಿಡಿ ಸಲ್ಲಿಕೆ ಮಾಡಬೇಕಿತ್ತು. ಅದೇ ರೀತಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಆಕಾಂಕ್ಷಿಗಳಿಗೆ ಒಂದು ಲಕ್ಷ ರೂಪಾಯಿ ಮೊತ್ತ ನೀಡುವುದನ್ನು ನಿಗದಿ ಪಡಿಸಲಾಗಿತ್ತು. ಈ ಮೂಲಕ ಸಾಮಾನ್ಯ ವರ್ಗದ ಆಕಾಂಕ್ಷಿಗಳಿಂದ 17.78 ಕೋಟಿ ಹಾಗೂ ಎಸ್ಸಿ, ಎಸ್ಟಿ ಆಕಾಂಕ್ಷಿಗಳಿಂದ 3.41 ಕೋಟಿ ಮೊತ್ತ ಸಂಗ್ರಹವಾಗಿದೆ.
ಇನ್ನು ರಾಜ್ಯಾದ್ಯಂತ 21.84 ಕೋಟಿ ರೂ. ಸಂಗ್ರಹವಾಗಿದ್ದರೆ ಹಾವೇರಿ ಜಿಲ್ಲೆಯೊಂದರಿಂದಲೇ ಕೆಪಿಸಿಸಿಗೆ 1 ಕೋಟಿ ರೂ. ಮೊತ್ತ ಸಂದಾಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಿಂದ ಬರೋಬ್ಬರಿ 51 ಮಂದಿ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆರು ಕ್ಷೇತ್ರಗಳಿಂದ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವ ಜತೆಗೆ ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ 15 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಒಂದೇ ಕ್ಷೇತ್ರಕ್ಕೆ ಹಲವು ಅರ್ಜಿ ಸಲ್ಲಿಕೆ; ಇನ್ನು, ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸಲು ಒಂದೇ ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ವಿಜಯಪುರದ ತೇರದಾಳದಲ್ಲಿ ಸ್ಪರ್ಧಿಸಲು 7 ಜನ ಅರ್ಜಿ ಸಲ್ಲಿಸಿದ್ದರೆ, ಬಿ. ಎಸ್. ಯಡಿಯೂರಪ್ಪ ಅವರು ಸ್ಪರ್ಧಿಸಲ್ಲ ಎಂದಿರುವ ಶಿಕಾರಿಪುರದಲ್ಲಿ ಸ್ಪರ್ಧಿಸಲು 8 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು 11 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರ ಜೊತೆ ರಿಜ್ವಾನ್ ಅರ್ಷದ್ ಶಾಸಕರಾಗಿರುವ ಶಿವಾಜಿನಗರದಿಂದ ಸ್ಪರ್ಧೆ ಬಯಸಿ ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ಅರ್ಜಿ ಸಲ್ಲಿಸಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ನವೆಂಬರ್ 21 ಕಡೆಯ ದಿನವಾಗಿತ್ತು. ಅರ್ಜಿ ಶುಲ್ಕ 5 ಸಾವಿರ ರೂಪಾಯಿ ಎಂದು ನಿಗದಿಪಡಿಸಲಾಗಿತ್ತು. ಸಾಮಾನ್ಯ ವರ್ಗದ ಸದಸ್ಯರು ಅರ್ಜಿಯೊಂದಿಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ 2 ಲಕ್ಷ ರೂಪಾಯಿ ಪಾವತಿಸಬೇಕಾಗಿತ್ತು. ಎಸ್ಸಿ/ ಎಸ್ಟಿಗೆ ಸೇರಿದ ಅರ್ಜಿದಾರರಿಗೆ 1 ಲಕ್ಷ ಪಾವತಿಸುವಂತೆ ಸೂಚನೆಯಲ್ಲಿ ತಿಳಿಸಲಾಗಿತ್ತು.