ಉಪ ಲೋಕಾಯುಕ್ತ ಸುಭಾಷ್ ಅಡಿ ಪದಚ್ಯುತಿ?
ಬೆಂಗಳೂರು, ನವೆಂಬರ್ 23 : ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಅವರ ಜೊತೆ ಉಪ ಲೋಕಾಯುಕ್ತ ಸುಭಾಷ್ ಅಡಿ ಅವರ ಪದಚ್ಯುತಿ ನಿರ್ಣಯವನ್ನು ಮಂಡನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ನಿರ್ಣಯಕ್ಕೆ ಬೆಂಬಲ ನೀಡುತ್ತವೆಯೇ? ಎಂಬುದು ಸದ್ಯದ ಪ್ರಶ್ನೆ.
ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಅವರ ಪದಚ್ಯುತಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ನಿರ್ಣಯ ಮಂಡನೆ ಮಾಡಲಾಗುತ್ತದೆ. ಲೋಕಾಯುಕ್ತ ಪದಚ್ಯುತಿಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಹಿ ಹಾಕಿದ ಮನವಿ ಪತ್ರವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಸಲ್ಲಿಸಲಾಗಿದೆ. [ಲೋಕಾಯುಕ್ತ ಪದಚ್ಯುತಿ ನಿರ್ಣಯ ಹೇಗೆ?]

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅವರು ಆಪ್ತರಾಗಿದ್ದು, ಅವರನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು ಸದನದಲ್ಲಿ ಮಂಡನೆ ಮಾಡಿ, ಬಿಜೆಪಿಗೆ ಮುಜುಗರ ಉಂಟುಮಾಡುವ ಉದ್ದೇಶದಿಂದ ಕಾಂಗ್ರೆಸ್ ನಿರ್ಣಯ ಮಂಡನೆ ಮಾಡಲು ಮುಂದಾಗಿದೆ. [ಲೋಕಾಯುಕ್ತ ಪದಚ್ಯುತಿಗೆ ಒಂದಾದ ಬಿಜೆಪಿ, ಜೆಡಿಎಸ್]
ಯಾವ ಆರೋಪಗಳಿವೆ? : ಹಿಂದೆ ಉಪ ಲೋಕಾಯುಕ್ತರಾಗಿದ್ದ ಎಸ್.ಬಿ.ಮಜಗೆ ಅವರು ಸುಭಾಷ್ ಅಡಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಆರೋಪಗಳ ಆಧಾರದ ಮೇಲೆ ಅವರನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು ಮಂಡನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.[ಲೋಕಾಯುಕ್ತದಲ್ಲಿನ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ?]
ಪ್ರತಿಪಕ್ಷಗಳ ಬೆಂಬಲವಿಲ್ಲ? : ಕಾಂಗ್ರೆಸ್ ಮಂಡನೆ ಮಾಡುವ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅವರ ಪದಚ್ಯುತಿ ನಿರ್ಣಯಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ನೀಡಲಿದ್ದಾವೆಯೇ? ಎಂದು ಕಾದು ನೋಡಬೇಕು.
ಸೋಮವಾರ ಈ ವಿಚಾರದ ಕುರಿತು ಚರ್ಚೆ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿವೆ. ಪದಚ್ಯುತಿ ನಿರ್ಣಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಕರೆದಿದ್ದ ಸಭೆ ಕೊನೆ ಕ್ಷಣದಲ್ಲಿ ರದ್ದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಉಪ ಲೋಕಾಯುಕ್ತ ಪದಚ್ಯುತಿ ಏಕೆ?: ಹಿಂದೆ ಉಪ ಲೋಕಾಯುಕ್ತರಾಗಿದ್ದ ಎಸ್.ಬಿ.ಮಜಗೆ ಅವರು ಸುಭಾಷ್ ಅಡಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ತಮ್ಮ ವ್ಯಾಪಿಗೆ ಬರುವ ಪ್ರಕರಣಗಳನ್ನು ಸುಭಾಷ್ ಅಡಿ ಅವರು ಸ್ವ ಪ್ರೇರಣೆಯಿಂದ ವಿಚಾರಣೆ ನಡೆಸುತ್ತಾರೆ ಎಂದು ದೂರಿದ್ದರು.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನ್ನ ಕಚೇರಿಯಲ್ಲಿದ್ದ ಕಡತ ನಾಪತ್ತೆಯಾಗಿ ಸುಭಾಷ್ ಅಡಿಯವರ ಕಚೇರಿ ತಲುಪಿತ್ತು ಮಜಗೆ ದೂರಿದ್ದರು. ಈ ಆರೋಪಗಳ ಮೇಲೆ ಉಪ ಲೋಕಾಯುಕ್ತ ಸುಭಾಷ್ ಅಡಿ ಪದಚ್ಯುತಿ ನಿರ್ಣಯ ಮಂಡನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.












Click it and Unblock the Notifications