ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಹೆಸರಲ್ಲಿ ದೇವೇಗೌಡ್ರಿಗೇ ಠಕ್ಕರ್: ಡಿ ಕೆ ಶಿವಕುಮಾರ್ ಏನಂದ್ರು?
ಬೆಂಗಳೂರು, ಡಿಸೆಂಬರ್ 03: ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲು ಕಾಂಗ್ರೆಸ್ ನಾಯಕರು ಸಿದ್ದತೆಯನ್ನ ನಡೆಸಿದ್ದು, ಮೈತ್ರಿ ನಾಯಕರಿಗೆ ಠಕ್ಕರ್ ಕೊಡಲು ಕೈ ಪಡೆ ಭರ್ಜರಿ ವೇದಿಕೆಯನ್ನ ಸ್ವಾಭಿಮಾನಿ ಎಂಬ ಹೆಸರನಲ್ಲಿ ನಡೆಸಲು ಮುಂದಾಗಿದೆ.
ಈ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ರಾಜ್ಯದಲ್ಲಿ 136, ತುಮಕೂರು ಜಿಲ್ಲೆಯಿಂದ 7 ಶಾಸಕರನ್ನು ಕೊಟ್ಟು ನಮ್ಮ ಕೈ ಬಲ ಪಡಿಸಿದ್ದೀರಿ. ಈಗ ಮತ್ತೆ ಎರಡು ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಿಸಿ 138 ಕ್ಕೆ ನಮ್ಮ ಬಲ ಏರಿಸಿ ನಮ್ಮ ಆತ್ಮಬಲವನ್ನು ಹೆಚ್ಚಿಸಿದ್ದೀರಿ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಜನ ಅವಕಾಶ ಕೊಟ್ಟಿದ್ದಾರೆ. ನಾವು ಜನರನ್ನು, ಸಂವಿಧಾನವನ್ನು ನಂಬಿ ಕೆಲಸ ಮಾಡುತ್ತಿದ್ದೇವೆ. ಇದೇ 5ನೇ ತಾರೀಕಿನಂದು ಹಾಸನದಲ್ಲಿ ವಿವಿಧ ಸಂಘಟನೆಗಳ ಜೊತೆ ಸೇರಿ ಸ್ವಾಭಿಮಾನಿ ಸಮಾವೇಶ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರು ಹೇಳುತ್ತಾರೆ ʼಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದು ಮುಖ್ಯವಲ್ಲ. ಎಷ್ಟು ಜನರ ಬದುಕನ್ನು ಬದಲಾವಣೆ ಮಾಡಿದ್ದಾನೆ ಎನ್ನುವುದು ಮುಖ್ಯʼ ಈ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಕೋಟ್ಯಂತರ ಜನರ ಬದುಕನ್ನು ಬದಲಾವಣೆ ಮಾಡಿದೆ, ಮಾಡುತ್ತಿದೆ. ನಮಗೆ ಜಾತಿ, ಧರ್ಮ ಮುಖ್ಯವಲ್ಲ. ಜನರ ಕಲ್ಯಾಣ ಮುಖ್ಯ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
ಮನುಷ್ಯನಿಗೆ ಇರುವ ಎರಡು ಕೈಗಳಲ್ಲಿ ಒಂದನ್ನು ನಮ್ಮ ರಕ್ಷಣೆಗೆ ಬಳಸಿಕೊಂಡರೆ, ಇನ್ನೊಂದನ್ನು ನಿಮ್ಮ ರಕ್ಷಣೆಗೆ ನಾವು ಬಳಸುತ್ತೇವೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಇವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕು ಪ್ರಮುಖ ಕಂಬಗಳು. ಸರ್ಕಾರದ ಆಶೋತ್ತರಗಳನ್ನು ಅರಿತು ಕಾರ್ಯಾಂಗವು ಕೆಲಸ ಮಾಡಬೇಕು. ಜಿಲ್ಲೆಯ ಅಧಿಕಾರಿ ವರ್ಗ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
"ಕೈಲಾಸ ದೊಡ್ಡದಲ್ಲ, ಕಾಯಕ ದೊಡ್ಡದು ಎಂದು ಶಿವಕುಮಾರಸ್ವಾಮಿಗಳು ಹೇಳಿದ್ದಾರೆ. ಶ್ರೀಗಳ ಕನಸಾದ ಅಕ್ಷರ, ಆರೋಗ್ಯ, ಅನ್ನ ಈ ಆಶಯಗಳನ್ನು ಇಟ್ಟುಕೊಂಡು ನಮ್ಮ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಕೊಟ್ಟು ಹೋಗುವ ಅಥವಾ ಬಿಟ್ಟು ಹೋಗುವ ಕೆಲಸಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಸಾವಿರಾರು ಯೋಜನೆಗಳನ್ನು ಈ ದೇಶದ ಪ್ರಗತಿಗೆ ಕಾಂಗ್ರೆಸ್ ಸರ್ಕಾರಗಳು ರೂಪಿಸಿವೆ" ಎಂದು ಹೇಳಿದರು.
ಬೆಂಗಳೂರು ನಂತರ ಹಾಗೂ ಅದಕ್ಕೆ ಪರ್ಯಾಯವಾಗಿ ಬೆಳೆಯುವಂತಹ ಲಕ್ಷಣಗಳು ತುಮಕೂರು ಜಿಲ್ಲೆಗಿದೆ ಎನ್ನುವ ಅಭಿಪ್ರಾಯವನ್ನು ಜಿ.ಪರಮೇಶ್ವರ್ ಅವರು ವ್ಯಕ್ತಪಡಿಸಿದ್ದಾರೆ. ನನಗೂ ಈ ಜಿಲ್ಲೆಗೂ ಆಧ್ಯಾತ್ಮಿಕವಾದ ಸಂಬಂಧವಿದೆ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಈ ಜಿಲ್ಲೆ ಶ್ರೀಮಂತವಾಗಿದೆ. ತುಮಕೂರು ಜಿಲ್ಲೆಯ ಎಲ್ಲಾ ಶಾಸಕರನ್ನು ಗೃಹಸಚಿವರಾದ ಪರಮೇಶ್ವರ್ ಅವರು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರಿನಿಂದ 70 ಕಿ.ಮೀ ದೂರವಿರುವ ಜಿಲ್ಲೆಯನ್ನು ಪರಮೇಶ್ವರ್ ಅವರು ಅಭಿವೃದ್ದಿ ಪಥದಲ್ಲಿ ತೆಗೆದುಕೊಂಡು ಹೋಗಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಪ್ರತಿಯೊಂದು ಕುಟುಂಬಕ್ಕೂ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇಂದಿರಾ ಗಾಂಧಿ ಅವರ ಕಾಲದಿಂದಲೂ ಅನೇಕ ಜನಪರ ಯೋಜನೆಗಳನ್ನು ನಾವು ನೀಡುತ್ತಾ ಬಂದಿದ್ದೇವೆ. ಉಳುವವನೇ ಭೂಮಿಯ ಒಡೆಯ, ಪಿಂಚಣಿ, ಪಡಿತರ ವ್ಯವಸ್ಥೆ, ಬಿಸಿಯೂಟ, ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಜನರ ನೆರವಿಗೆ ನಿಂತಿದ್ದೇವೆ ಎಂದರು.
ಅಕ್ಬರ್ ಒಮ್ಮೆ ಬಿರ್ ಬಲ್ ಗೆ ಒಂದು ಪ್ರಶ್ನೆ ಕೇಳುತ್ತಾನೆ, ʼಸತ್ಯಕ್ಕೂ ಸುಳ್ಳಿಗೂ ಎಷ್ಟು ಅಂತರʼ ಎಂದು ಅದಕ್ಕೆ ಬೀರ್ ಬಲ್ ʼಕೇವಲ ನಾಲ್ಕು ಬೆರಳಿನ ಅಂತರ. ಕಣ್ಣು ನೋಡಿದ್ದು ಸತ್ಯ, ಕಿವಿ ಕೇಳಿದ್ದು ಸುಳ್ಳು. ಇವೆರಡರ ನಡುವಿನ ಅಂತರ ಕೇವಲ ನಾಲ್ಕು ಬೆರಳುʼ ಎಂದು. ಯಾರು ಎಷ್ಟೇ ಸುಳ್ಳು ಹೇಳಬಹುದು ಆದರೆ ನಮ್ಮ ಅಭಿವೃದ್ದಿ ಕೆಲಸಗಳಿಗೆ ರಾಜ್ಯದ ಜನರ ಕಣ್ಣುಗಳೇ ಸಾಕ್ಷಿ ಎಂದು ಹೇಳಿದರು.
ನಾನು ಮತ್ತು ಮುಖ್ಯಮಂತ್ರಿಗಳು ಫಲಾನುಭವಿಗಳ ಜೊತೆ ಮಾತನಾಡುವಾಗ ಒಬ್ಬ ಪಂಚಾಯಿತಿ ಸದಸ್ಯನು ʼನನ್ನ ಕ್ಷೇತ್ರದಲ್ಲಿ ಸುಮಾರು 5 ಕೋಟಿ ಮೊತ್ತದ ನರೇಗಾ ಕೆಲಸಗಳನ್ನು ಮಾಡಿಸಿದ್ದೇನೆʼ ಎಂದು ಹೇಳಿದ. ಈ ನರೇಗಾ ಯೋಜನೆ ನಮ್ಮ ಕಾಂಗ್ರೆಸ್ ಕೊಡುಗೆ. ಗ್ಯಾರಂಟಿ ಯೋಜನೆಗಳಿಂದ ಮನೆಗಳನ್ನು ಕಾಂಗ್ರೆಸ್ ಇಬ್ಬಾಗ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿದ್ದವು. ಅದಕ್ಕೆಲ್ಲ ಉತ್ತರ ಸಿಕ್ಕಿದೆ, ಸಿಗಲಿದೆ ಎಂದು ಹೇಳಿದರು.












Click it and Unblock the Notifications