ತಮ್ಮ ನಿರ್ಧಾರಗಳ ವಿರುದ್ಧವೇ ಪ್ರತಿಭಟನೆ ಮಾಡುವ ಏಕೈಕ ಪಕ್ಷ ಬಿಜೆಪಿ : ಕಾಂಗ್ರೆಸ್ ವ್ಯಂಗ್ಯ
ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ ಮತ್ತು ರೈತರಿಗೆ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ಕಡಿಮೆ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಇಂದು ಕರ್ನಾಟಕದಾದ್ಯಂತ ಪ್ರತಿಭಟನೆ ಮಾಡಿತು. ಉಚಿತ ಭಾಗ್ಯಗಳನ್ನು ನೀಡಲು ಕಾಂಗ್ರೆಸ್ ಈ ಮಾರ್ಗ ಅನುಸರಿಸುತ್ತಿದೆ ಎಂದು ಆರೋಪ ಮಾಡಿತ್ತು.
ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಟೀಕೆ ಮಾಡಿದೆ. ನಿಮ್ಮದೇ ನಿರ್ಧಾರಗಳ ವಿರುದ್ಧ ನೀವೆ ಪ್ರತಿಭಟನೆ ಮಾಡ್ತಿದ್ದೀರಾ ಎಂದು ಕಾಲೆಳಿದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಯಾವ ಕಾರಣಕ್ಕೆ ಪ್ರತಿಭಟನೆ ಮಾಡ್ತಿರೋದು ಎಂದು ಪ್ರಶ್ನೆ ಮಾಡಿದೆ.

"ಯಾವ ಕಾರಣಕ್ಕಾಗಿ ಕರ್ನಾಟಕ ಬಿಜೆಪಿ ಪ್ರತಿಭಟನೆ ಮಾಡ್ತಿದೆ? ನಿಮ್ಮ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದ್ದಕ್ಕಾ? ನೀವು ಹಾಲು ಉತ್ಪಾದಕರಿಗೆ 7 ತಿಂಗಳಿಂದ ಪ್ರೋತ್ಸಾಹ ಧನ ನೀಡದಿರುವುದಕ್ಕಾ?" ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದೆ.
ಇನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಈಗ ಅವರೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದೆ. "ತಮ್ಮದೇ ನಿರ್ಧಾರಗಳ ವಿರುದ್ದ ತಾವೇ ಪ್ರತಿಭಟನೆ ಮಾಡುವ ವಿಶಿಷ್ಟ ರಾಜಕೀಯ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ!!" ಎಂದು ವ್ಯಂಗ್ಯವಾಡಿದೆ.
ಯಾವುದಕ್ಕಾಗಿ ಪ್ರತಿಭಟನೆ @BJP4Karnataka?
— Karnataka Congress (@INCKarnataka) June 5, 2023
ನಿಮ್ಮ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದ್ದಕ್ಕಾ?
ನೀವು ಹಾಲು ಉತ್ಪಾದಕರಿಗೆ 7 ತಿಂಗಳಿಂದ ಪ್ರೋತ್ಸಾಹ ಧನ ನೀಡದಿರುವುದಕ್ಕಾ?
ತಮ್ಮದೇ ನಿರ್ಧಾರಗಳ ವಿರುದ್ದ ತಾವೇ ಪ್ರತಿಭಟನೆ ಮಾಡುವ ವಿಶಿಷ್ಟ ರಾಜಕೀಯ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ!! https://t.co/yFepSNnJhZ
ಹಾಲಿಗೆ ನೀಡುವ ಸಬ್ಸಿಡಿ ಕಡಿಮೆ ಮಾಡದಂತೆ ಸೂಚನೆ
ಇನ್ನು ಬೇಸಿಗೆ ಸಂದರ್ಭದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ ಮಾಡಲು ಕೆಎಂಎಫ್ ನೀಡುತ್ತಿದ್ದ ಪ್ರೋತ್ಸಾಹ ಧನ ಕಡಿತ ಮಾಡದಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಿದ್ದರಾಮಯ್ಯ ಸೂಚನೆ ನೀಡಿದ ಬಳಿಕವೂ ಬಿಜೆಪಿ ಪ್ರತಿಭಟನೆ ಮಾಡಿರುವುದು ಅರ್ಥಹೀನ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರಕ್ಕೆ ಜನರ ಹಿತ ಮುಖ್ಯ ಎಂದು ಹೇಳಿದೆ. "ಹಾಲು ಉತ್ಪಾದಕರಿಗೆ ಯಾವುದೇ ಪ್ರೋತ್ಸಾಹಧನ ಕಡಿತಗೊಳಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಸಿಎಂ ಕೆಎಂಎಫ್ ನಿರ್ದೇಶಕರಿಗೆ ಆದೇಶಿಸಿದ್ದಾರೆ. ವಿಶೇಷ ಪ್ರೋತ್ಸಾಹಧನವನ್ನು ಸ್ಥಗಿತಗೊಳಿಸುವ ಬಮೂಲ್ ನಿರ್ಧಾರವನ್ನು ಹಿಂಪಡೆಯಲಿದೆ. ಜನರ ಹಿತವೇ ಕಾಂಗ್ರೆಸ್ ಧ್ಯೇಯ." ಎಂದು ಟ್ವೀಟ್ ಮಾಡಿದೆ.
ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿದೆ. ಇದಕ್ಕೆ ಹಲವು ಷರತ್ತುಗಳನ್ನು ವಿಧಿಸಿದೆ. ಉಚಿತ ಕೊಡುಗೆಗಳಿಗೆ ಷರತ್ತು ವಿಧಿಸಿರುವ ಕ್ರಮಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಷರತ್ತು ಇಲ್ಲದೆ ಘೋಷಣೆಗಳನ್ನು ನೀಡಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.












Click it and Unblock the Notifications