ಅಧ್ಯಕ್ಷ ಹುದ್ದೆಗೆ ನೇಮಕ: ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದರೇ ಮೂಲ ಕಾಂಗ್ರೆಸ್ಸಿಗರು?
Recommended Video
ಬೆಂಗಳೂರು, ಜನವರಿ 21: ರಾಜ್ಯ ಕಾಂಗ್ರೆಸ್ನ ಅಧ್ಯಕ್ಷ, ಕಾರ್ಯಾಧ್ಯಕ್ಷರು, ವಿಧಾನಸಭೆ ವಿರೋಧಪಕ್ಷದ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕರ ನೇಮಕದ ವಿಚಾರದಲ್ಲಿ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಮುಖ್ಯವಾಗಿ ಸಿದ್ದರಾಮಯ್ಯ ನೇತೃತ್ವದ ವಲಸಿಗರ ಗುಂಪು ಮತ್ತು ಮೂಲ ನಾಯಕರು ಎಂಬ ಗುಂಪಿನ ಸಂಘರ್ಷ ಮುನ್ನೆಲೆಗೆ ಬಂದಿದೆ.
ವಿಧಾನಸಭೆ ವಿರೋಧಪಕ್ಷದ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕ (ಸಿಎಲ್ಪಿ) ಸ್ಥಾನಗಳನ್ನು ಬೇರ್ಪಡಿಸಬಾರದು. ಎರಡೂ ಹುದ್ದೆಗಳನ್ನು ಒಬ್ಬರಿಗೆ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು.
ಆದರೆ, ಕೆಪಿಸಿಸಿ ಅಧ್ಯಕ್ಷ ಗಾದಿಗೆ ತಮ್ಮ ಆಪ್ತರನ್ನು ನೇಮಿಸಬೇಕೆಂಬ ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಜತೆಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕೆಂಬ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ ಎನ್ನಲಾಗಿದೆ. ಜತೆಗೆ ಪಕ್ಷದ ಅಧಿಕಾರವನ್ನು ತಮ್ಮ ಹಿಡಿತದಲ್ಲಿಯೇ ಇರಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಅದಕ್ಕೆ ಪೂರಕವೆಂಬಂತೆ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ವಿರುದ್ಧ ನೇರವಾಗಿ ಕಿಡಿಕಾರಿದ್ದಾರೆ.

ಗುಂಪುಗಾರಿಕೆ ಶುರುವಾಗುತ್ತದೆ
'ಎರಡೂ ಸ್ಥಾನಗಳನ್ನು ಪ್ರತ್ಯೇಕಿಸಿದರೆ ಇಬ್ಬರಿಗೆ ಅಧಿಕಾರ ನೀಡಬಹುದು. ಪ್ರತ್ಯೇಕ ಮಾಡುವುದು ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ಬೇರೆ ಕಾರಣಗಳು ಇರಬಹುದು. ಆದರೆ ಪ್ರತ್ಯೇಕಿಸುವಂತೆ ನನ್ನ ಅಭಿಪ್ರಾಯ ಹೇಳಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬಾರದು. ಹಾಗೆ ಮಾಡಿದರೆ ಗುಂಪುಗಾರಿಕೆ ಆರಂಭವಾಗುತ್ತದೆ' ಎಂದು ಪರಮೇಶ್ವರ್ ಹೇಳಿದ್ದರು.

ನಾನು ಪಕ್ಷಪೂಜೆ ಮಾಡುವವನು
'ನಾನು ವ್ಯಕ್ತಿ ಪೂಜೆ ಮಾಡುವವನಲ್ಲ, ಪಕ್ಷ ಪೂಜೆ ಮಾಡುವವನು' ಎಂದು ಹೇಳುವ ಮೂಲಕ ಶಾಸಕ ಡಿ.ಕೆ. ಶಿವಕುಮಾರ್ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದರು.
'ನಾನು ಗುಂಪುಕಟ್ಟಿಕೊಂಡು ಅಧಿಕಾರ ಕೊಡಿ ಎಂದು ಎಲ್ಲಿಗೂ ಹೋಗಲ್ಲ. ಯಾರು ಎಷ್ಟು ಬಣ ಸೃಷ್ಟಿಮಾಡಿಕೊಳ್ಳುತ್ತಾರೋ ಸೃಷ್ಟಿಸಿಕೊಳ್ಳಲಿ' ಎಂದು ಅವರು ಸೋಮವಾರ ಹೇಳಿದ್ದರು.

ನಾಲ್ಕು ಏಕೆ ಬೇಕು?
ನಾಲ್ವರು ಕಾರ್ಯಾಧ್ಯಕ್ಷ ಸ್ಥಾನಗಳನ್ನು ನೇಮಿಸಬೇಕೆಂಬ ಸಿದ್ದರಾಮಯ್ಯ ಪ್ರಸ್ತಾವಕ್ಕೆ ಎಚ್ ಕೆ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ಕು ಕಾರ್ಯಾಧ್ಯಕ್ಷ ಸ್ಥಾನಗಳ ಅವಶ್ಯಕತೆ ಇಲ್ಲ. ಯಾಕೆ ನಾಲ್ಕು ಕಾರ್ಯಾಧ್ಯಕ್ಷ ಬೇಕು ಅಂತಿದ್ದಾರೋ ಗೊತ್ತಿಲ್ಲ. ಈಗ ಇರುವ ಒಂದು ಕಾರ್ಯಾಧ್ಯಕ್ಷ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರೆಸಲಿ ಸಾಕು ಎಂದು ಸಿದ್ದರಾಮಯ್ಯಗೆ ಎಚ್ ಕೆ. ಪಾಟೀಲ್ ಟಾಂಗ್ ನೀಡಿದ್ದಾರೆ.

ಬೇಗನೆ ನೇಮಕ ಮಾಡಲಿ
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಈಗಾಗಲೇ ವಿಳಂಬ ಆಗಿದೆ. ಕೂಡಲೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಆಗಲಿ. ಪಕ್ಷದ ಹಿತದೃಷ್ಟಿಯಿಂದ ಅಧ್ಯಕ್ಷರ ಆಯ್ಕೆ ಮುಖ್ಯ. ಜಿಲ್ಲಾ ಪಂಚಾಯತಿ ಮತ್ತು ಗ್ರಾಮ ಪಂಚಾಯ್ತಿ ಚುನಾವಣೆ ಬರ್ತಿದೆ. ಹೀಗಾಗಿ ಪಕ್ಷ ಸಂಘಟನೆ ಅಗತ್ಯವಾಗಿದೆ. ಕೂಡಲೇ ಹೈಕಮಾಂಡ್ ಅಧ್ಯಕ್ಷರ ನೇಮಕ ಮಾಡಲಿ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.

ದೇಶಕ್ಕೆ ಒಂದೇ ಮಾದರಿ ಇರಲಿ
ವಿಪಕ್ಷ ನಾಯಕ ಮತ್ತು ಸಿಎಲ್ಪಿ ನಾಯಕ ಹುದ್ದೆ ಪ್ರತ್ಯೇಕವಾಗಲಿ. ಸಮ್ಮಿಶ್ರ ಸರ್ಕಾರ ಇದ್ದಾಗ ಹುದ್ದೆ ವಿಭಾಗವಾಗಿತ್ತು. ಕೇಂದ್ರದಲ್ಲಿ ಯುಪಿಎ ಅವಧಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಸೇರಿದಂತೆ ಹುದ್ದೆ ಹಂಚಿಕೆ ಆಗಿತ್ತು. ಮಹಾರಾಷ್ಟ್ರದಲ್ಲೂ ಹಿಂದೆ ಸಿಎಲ್ಪಿ ಮತ್ತು ವಿಪಕ್ಷ ಸ್ಥಾನ ಹಂಚಿಕೆ ಆಗಿತ್ತು. ಮಹಾರಾಷ್ಟ್ರ ಮತ್ತು ಯುಪಿಎ ಮಾದರಿಯಲ್ಲೆ ರಾಜ್ಯದಲ್ಲೂ ಸ್ಥಾನ ಹಂಚಿಕೆ ಆಗಲಿ. ನಮ್ಮದು ರಾಷ್ಟ್ರೀಯ ಪಕ್ಷ. ದೇಶಕ್ಕೆ ಒಂದೇ ಮಾದರಿ ಇರಬೇಕು. ರಾಜ್ಯದಲ್ಲೂ ವಿಪಕ್ಷ ಮತ್ತು ಸಿಎಲ್ಪಿ ಸ್ಥಾನ ಪ್ರತ್ಯೇಕವಾಗ ಎಂದು ಎಚ್ಕೆ ಪಾಟೀಲ್ ಅವರು ಸಿದ್ದರಾಮಯ್ಯಗೆ ಬಹಿರಂಗವಾಗಿ ತಿರುಗೇಟು ನೀಡಿದ್ದಾರೆ.
ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, 'ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ' ಎಂದು ಪ್ರತಿಕ್ರಿಯಿಸಿದರು.

ಸಿಎಲ್ಪಿ, ವಿಪಕ್ಷ ಸ್ಥಾನ ಪ್ರತ್ಯೇಕಿಸಿ
ಕೆಪಿಸಿ ಸಮನ್ವಯ ಸಮಿತಿ ರಚನೆಗೆ ಮಾಜಿ ಸಂಸದ ಕೆಎಚ್ ಮುನಿಯಪ್ಪ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಸಮನ್ವಯ ಸಮಿತಿ ಹಿಂದೆಯೂ ಇದ್ದ ಉದಾರಣೆ ಇದೆ. ಸಮನ್ವಯ ಸಮಿತಿ ರಚಿಸಬೇಕು ಎನ್ನುವ ಬೇಡಿಕೆ ಹೊಸತಲ್ಲ. ಮೂವರು ಕಾರ್ಯಾಧ್ಯಕ್ಷರ ಅಗತ್ಯವಿದೆ. ಆದರೆ ಸಿಎಲ್ಪಿ ಮತ್ತು ವಿರೋಧಪಕ್ಷದ ನಾಯಕನ ಸ್ಥಾನ ಪ್ರತ್ಯೇಕಿಸಿದರೆ ಒಳಿತು. ಹಲವು ನಾಯಕರು ನನ್ನ ಹೆಸರ ಪ್ರಸ್ತಾಪ ಮಾಡಿದ್ದಾರೆ. ಎಲ್ಲರೂ ಅಧ್ಯಕ್ಷರಾಗೊಲ್ಲ, ಸಿಎಲ್ಪಿ ನಾಯಕರಾಗೊಲ್ಲ. ಹಾಗೆಯೇ ಎಲ್ಲರೂ ವಿರೋಧಪಕ್ಷದ ನಾಯಕರಾಗುವುದಿಲ್ಲ ಎಂದು ಅವರು ತೀಕ್ಷ್ಣವಾಗಿ ಹೇಳಿದರು.

ಸಿದ್ದರಾಮಯ್ಯಗಿಂತ ಅನುಭವಿಗಳಿದ್ದಾರೆ
ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದು 14 ವರ್ಷಗಳಾಗಿದೆ. ಅವರಿಗೆ 14 ವರ್ಷಗಳಿಂದ ಅಧಿಕಾರ ಕೊಟ್ಟಿದ್ದೇವೆ. ಅವರಿಗಿಂತ ಹೆಚ್ಚು ಅನುಭವ ಇರುವ ಸಾಕಷ್ಟು ಮಂದಿ ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಕೋಳಿವಾಡ ಅವರೆಲ್ಲ 40 ವರ್ಷಗಳಿಂದ ಇದ್ದಾರೆ. ನಾಯಕರಾದವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ವೀಕ್ಷಕರಿಗೆ ಅಭಿಪ್ರಾಯ ಹೇಳಿದ್ದೇವೆ
ಸಿಎಲ್ಪಿ ಮತ್ತು ವಿಪಕ್ಷ ನಾಯಕನ ಸ್ಥಾನ ಪ್ರತ್ಯೇಕಿಸಿದರೆ ಒಳಿತು. ಒಂದೆರಡು ಕಾರ್ಯಾಧ್ಯಕ್ಷರಿದ್ದರೆ ತೊಂದರೆ ಇಲ್ಲ. ಈ ಹಿಂದೆಯೂ ಕಾರ್ಯಾಧ್ಯಕ್ಷ ಹುದ್ದೆ ಇತ್ತು. ನಾಲ್ವರು ಕಾರ್ಯಾಧ್ಯಕ್ಷ ಹುದ್ದೆಗಳು ಸಿದ್ದರಾಮಯ್ಯ ಅವರ ಅಭಿಪ್ರಾಯ. ಹೈಕಮಾಂಡ್ ವೀಕ್ಷಕರನ್ನು ಕಳುಹಿಸಿತ್ತು. ಎಲ್ಲಾ ನಾಯಕರೂ ಅಭಿಪ್ರಾಯ ತಿಳಿಸಿದ್ದಾರೆ. ಅದರ ಆಧಾರದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಅದರ ನಿರ್ಧಾರಕ್ಕೆ ನಾವು ಬದ್ಧ. ಪಕ್ಷದ ಹಿತದೃಷ್ಟಿಯಿಂದ ಬೇಗನೆ ನಿರ್ಧಾರ ತೆಗೆದುಕೊಳ್ಳಲಿ. ಯಾರೇ ಆಯ್ಕೆ ಆಗಲಿ, ತೀರ್ಮಾನ ತೆಗೆದುಕೊಳ್ಳುವವರು ಸರಿಯಾಗಿದ್ದರೆ ಮೂಲ-ವಲಸಿಗ ಗೊಂದಲ ಸೃಷ್ಟಿ ಆಗುವುದಿಲ್ಲ ಎಂದರು.

ನಾನು ಒತ್ತಡ ಹೇರಿಲ್ಲ
'ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಮಾಡುವಂತೆ ನಾನು ಒತ್ತಡ ಹಾಕಿಲ್ಲ. ಆರ್ವಿ ದೇಶಪಾಂಡೆ ಕಾಲದಲ್ಲಿ ಕಾರ್ಯಾಧ್ಯಕ್ಷರು ಇರಲಿಲ್ಲವಾ? ಆಗ ಡಿಕೆ ಶಿವಕುಮಾರ್ ಕಾರ್ಯಾಧ್ಯಕ್ಷರಾಗಿರಿಲ್ಲವಾ? ಪರಮೇಶ್ವರ್ ಅವರ ಅಭಿಪ್ರಾಯ ತಿಳಿಸಿದ್ದಾರೆ. ಆಂತರಿಕ ಪ್ರಜಾಪ್ರಭುತ್ವ ಇರುವ ಕಾಂಗ್ರೆಸ್ನಲ್ಲಿ ಎಲ್ಲರೂ ಅವರವರ ಅಭಿಪ್ರಾಯ ಹೇಳಬಹುದು. ನಾನು ಒತ್ತಡ ಹಾಕಿಲ್ಲ ಎಂದು ಸಿದ್ದರಾಮಯ್ಯ ಮಂಡ್ಯದಲ್ಲಿ ಹೇಳಿದರು.












Click it and Unblock the Notifications