ದೆಹಲಿ ಮಾಲೀಕರು ಮತ್ತೆ ರಾಜ್ಯ ಸಂಪುಟ ವಿಸ್ತರಣೆಗೆ ಸಹಕರಿಸಿಲ್ಲ: ಬೊಮ್ಮಾಯಿ ಭೇಟಿ ಕುರಿತು ಕಾಂಗ್ರೆಸ್ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 27: ಬಿಜೆಪಿ ಶಾಸಕರ ಸಚಿವ ಸ್ಥಾನದ ಬೇಡಿಕೆ ಕುರಿತು ಕಾಂಗ್ರೆಸ್ ರಾಜ್ಯ ಘಟಕ ವ್ಯಂಗ್ಯವಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸ ಅವರ ಪಕ್ಷದ ಸಮಸ್ಯೆ ಬಗೆಹರಿಸಲು ಹೊರತು ರಾಜ್ಯದ ಏಳಿಗೆಗಲ್ಲ ಎಂದು ಟೀಕಿಸಿದೆ.
ಇದುವರೆಗೂ 20 ಬಾರಿ ದೆಹಲಿ ವಿಮಾನ ಹತ್ತಿದರೂ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ತರಲಾಗದ ಬಸವರಾಜ ಬೊಮ್ಮಾಯಿ ಅವರು ಮೈಕಿನ ಮುಂದೆ ನಿಂತು 'ದಮ್ಮು ತಾಕತ್ತು' ಎಂದು ಗಂಟಲು ಶೋಷಣೆ ಮಾಡಿಕೊಳ್ಳುವುದು ಹಾಸ್ಯನಟನೊಬ್ಬ ಖಳನಾಯಕನ ಪಾತ್ರಕ್ಕೆ ಮೀಸೆ ಅಂಟಿಸಿಕೊಂಡಂತೆಯೇ ಸರಿ. ಪೊಪೆಟ್ ಸಿಎಂ ಅವರನ್ನು ಹೈಕಮಾಂಡ್ ಕೀಲಿ ಕೊಟ್ಟು ಕುಣಿಸುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
'ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸ ಅವರ ಪಕ್ಷದ ಸಮಸ್ಯೆ ಬಗೆಹರಿಸಲು ಹೊರತು ರಾಜ್ಯದ ಏಳಿಗೆಗಲ್ಲ. ಬರಿಗೈಲಿ ವಾಪಾಸಾಗಲು ಅಧಿವೇಶನವನ್ನು ಕಡೆಗಣಿಸಿ ತುರಾತುರಿಯಲ್ಲಿ ಓಡುವಂತದ್ದೇನಿತ್ತು? ಸಿಎಂಗೆ ರಾಜ್ಯದ ಸಮಸ್ಯೆಗಿಂತ ಪಕ್ಷದ ಸಮಸ್ಯೆಯೇ ಮುಖ್ಯವಾಯ್ತೆ? ದೆಹಲಿ ಪ್ರವಾಸದಿಂದಾದ ಪ್ರಯೋಜನವನ್ನು ರಾಜ್ಯದ ಜನತೆಗೆ ತಿಳಿಸುವ ದಮ್ಮು ತಾಕತ್ತಿದೆಯೇ' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಸವರಾಜ ಬೊಮ್ಮಾಯಿ ಅವರ ದೆಹಲಿ ಮಾಲೀಕರು ಮತ್ತೆ ಸಂಪುಟ ವಿಸ್ತರಣೆಗೆ ಸಹಕರಿಸಿಲ್ಲ. ತಯಾರಾಗಿ ಕುಳಿತಿದ್ದ ಮದುವೆ ಗಂಡು ಕೆ.ಎಸ್.ಈಶ್ವರಪ್ಪ ಅವರ ಮದುವೆ ಆಸೆಗೆ ಮತ್ತೆ ತಣ್ಣೀರು ಬಿದ್ದಿದೆ. ರಮೇಶ್ ಜಾರಕಿಹೊಳಿಯವರ ಕನಸು ಜಾರಿ ಹೋಗಿದೆ. ರೇಣುಕಾಚಾರ್ಯ ನಿರಾಸೆಯಲ್ಲಿ ವನವಾಸಕ್ಕೆ ಹೋಗುವುದು ಬಾಕಿ ಇದೆ ಎಂದು ಕೆಪಿಸಿಸಿ ಟೀಕಿಸಿದೆ.
'ಬಿಜೆಪಿಗೆ ರೇಣುಕಾಚಾರ್ಯ ಬೇಡದ ಕೂಸು ಎಂಬಂತಾಗಿದ್ದಾರೆ. ರೇಣುಕಾಚಾರ್ಯರ ಅರ್ಹತೆ, ಸಾಮರ್ಥ್ಯವನ್ನು ಬಿಜೆಪಿ ಅವಮಾನಿಸಿದೆ, ಪಾಪ. ಬಿಜೆಪಿಯಲ್ಲಿನ ಅತೃಪ್ತರು, ಅಸಮಾಧಾನಿತರು, ಒಬ್ಬೊಬ್ಬರಾಗಿಯೇ ಹೊರಬರುತ್ತಿದ್ದಾರೆ, ಚುನಾವಣೆ ಹೊತ್ತಲ್ಲಿ ಬಿಜೆಪಿಯನ್ನು ಮುಳುಗಿಸುವುದು ನಿಶ್ಚಿತ' ಎಂದು ಟ್ವೀಟ್ ಮಾಡಿದೆ.
ಕೋವಿಡ್ ಹೆಸರಲ್ಲಿ ಜನರಲ್ಲಿ ಅನಗತ್ಯ ಗೊಂದಲ ಹುಟ್ಟಿಸುತ್ತಿರುವ ಸರ್ಕಾರ
ಇದೇ ವೇಳೆ ಕೋವಿಡ್ ಪರಿಸ್ಥಿತಿಯ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕೋವಿಡ್ ಹೆಸರಲ್ಲಿ ಜನರಲ್ಲಿ ಅನಗತ್ಯ ಗೊಂದಲ ಹುಟ್ಟಿಸುವ ಕೆಲಸ ಮಾಡುತ್ತಿದೆ ಸರ್ಕಾರ. ಕೋವಿಡ್ ಪರೀಕ್ಷೆಯನ್ನು ಹೆಚ್ಚುಗೊಳಿಸಬೇಕು, ಅಂತರರಾಜ್ಯ, ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಬೇಕು. ಆದರೆ ಅದೆಲ್ಲವನ್ನೂ ಬಿಟ್ಟು ಲಾಕ್ಡೌನ್ನಿಂದ ಸುದಾರಿಸಿಕೊಳ್ಳುತ್ತಿರುವ ಜನರನ್ನು ಮತ್ತೆ ಭಯಕ್ಕೆ ತಳ್ಳುವ ಕೆಲಸ ಮಾಡಬಾರದು' ಎಂದು ಹೇಳಿದ್ದಾರೆ.
'ಕೋವಿಡ್ ಪರೀಕ್ಷೆಯನ್ನು ವ್ಯಾಪಕಗೊಳಿಸಿ, ಎಷ್ಟು ಪಾಸಿಟಿವ್ ಬಂದಿದೆ ಎಂಬ ಸಂಖ್ಯೆಯ ಆಧಾರದಲ್ಲಿ ಕೋವಿಡ್ ನಿಯಮ ಹೇರಿದೆಯೇ ಸರ್ಕಾರ? ದಿನಕ್ಕೊಂದು ಕೋವಿಡ್ ರೂಲ್ಸ್ ಹೆಸರಲ್ಲಿ ಜನರಲ್ಲಿ ಬಲವಂತವಾಗಿ ಭಯ ತುಂಬುವ ಬದಲು ವಾಸ್ತವಾಂಶವನ್ನು ತೆರೆದಿಡಲಿ, ಹಾಗೂ ಸರ್ಕಾರ ತನ್ನ ಮುನ್ನೆಚ್ಚರಿಕಾ ಜವಾಬ್ದಾರಿಗಳನ್ನು ಮೊದಲು ನಿರ್ವಹಿಸಲಿ' ಎಂದು ಟ್ವೀಟ್ ಮಾಡಿದೆ.












Click it and Unblock the Notifications