ರಮೇಶ್ ಜಾರಕಿಹೊಳಿಗೆ ಮತ್ತೆ ಸಚಿವ ಸ್ಥಾನ, ಕೇಳಿದ ಖಾತೆ?
Recommended Video

ಬೆಂಗಳೂರು, ಜನವರಿ 16 : ಕಾಂಗ್ರೆಸ್ ರಮೇಶ್ ಜಾರಕಿಹೊಳಿ ಅವರಿಗೆ ಪುನಃ ಸಚಿವ ಸ್ಥಾನದ ಆಫರ್ ನೀಡಿದೆ. ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಪಕ್ಷ ಬಿಡುವುದನ್ನು ತಡೆಯಲು ದಾಳ ಉರುಳಿಸಲಾಗಿದೆ.
ಸಚಿವ ಸಂಪುಟ ಪುನಾರಚನೆ ಬಳಿಕ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗೆ ಸಹ ಸಿಗದೇ ಬೇರೆ-ಬೇರೆ ಕಡೆ ಸಂಚಾರ ನಡೆಸುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಂಗಳವಾರ ಸಂಜೆ ರಮೇಶ್ ಜಾರಕಿಹೊಳಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. 'ಪಕ್ಷ ಬಿಡುವುದು ನಿಮ್ಮ ರಾಜಕೀಯ ಜೀವನದ ದೃಷ್ಟಿಯಿಂದ ಉತ್ತಮವಾದ ನಿರ್ಧಾರವಲ್ಲ' ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಉಂಟಾಗಿರುವ ಅಸಮಾಧಾನಗಳ ಹಿಂದೆ ರಮೇಶ್ ಜಾರಕಿಹೊಳಿ ಅವರು ಇದ್ದಾರೆ ಎಂಬುದು ಸದ್ಯದ ಮಾಹಿತಿ. ಅವರು ಕೆಲವು ಅತೃಪ್ತ ಶಾಸಕರ ಜೊತೆ ಮುಂಬೈನಲ್ಲಿ ಇರಬಹುದು ಎಂದು ತಿಳಿದುಬಂದಿದೆ.....

ಕೆ.ಸಿ.ವೇಣುಗೋಪಾಲ್ ಹೇಳಿದ್ದೇನು?
ರಮೇಶ್ ಜಾರಕಿಹೊಳಿ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಕೆ.ಸಿ.ವೇಣುಗೋಪಾಲ್ ಅವರು, 'ನಿಮ್ಮನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದು ಸರಿಯಲ್ಲ. ಮತ್ತೆ ಮಂತ್ರಿ ಸ್ಥಾನ ನೀಡುತ್ತೇವೆ. ಕೂಡಲೇ ನಮ್ಮನ್ನು ಬಂದು ಸೇರಿಕೊಳ್ಳಿ' ಎಂದು ಹೇಳಿದ್ದಾರೆ.

ನಿಮ್ಮ ಬೇಡಿಕೆಗೆ ಸ್ಪಂದಿಸುತ್ತೇವೆ
'ನಿಮ್ಮೆಲ್ಲ ಬೇಡಿಕೆಗೆ ನಾವು ಸ್ಪಂದಿಸುತ್ತೇವೆ, ಮತ್ತೆ ಮಂತ್ರಿ ಸ್ಥಾನ ನೀಡುತ್ತೇವೆ. ನೀವು ಕೇಳಿದ ಖಾತೆಯನ್ನು ನಿಡೋಣ ಬನ್ನಿ. ತಕ್ಷಣ ಅಲ್ಲಿಂದ ಹೊರಟು ಬನ್ನಿ ಕುಳಿತು ಮಾತನಾಡೋಣ. ನಿಮ್ಮ ಭವಿಷ್ಯದ ದೃಷ್ಟಿಯಿಂದ ಪಕ್ಷ ಬಿಡುವುದು ಒಳ್ಳೆಯದಲ್ಲ. ಬಿಜೆಪಿಯವರು ಸರಿಯಾಗಿ ನಡೆಸಿಕೊಳ್ಳುವುದಿಲ್ಲ' ಎಂದು ಕೆ.ಸಿ.ವೇಣುಗೋಪಾಲ್ ವಿವರಣೆ ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ಜೊತೆ ಸಭೆ
ರಮೇಶ್ ಜಾರಕಿಹೊಳಿ ಅವರ ಜೊತೆ ದೂರವಾಣಿ ಮೂಲಕ ಮಾತನಾಡುವುದಕ್ಕೂ ಮೊದಲು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ಜೊತೆ ಕೆ.ಸಿ.ವೇಣುಗೋಪಾಲ್ ಮಾತುಕತೆ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಸಲಹೆಯಂತೆಯೇ ರಮೇಶ್ ಜಾರಕಿಹೊಳಿ ಅವರಿಗೆ ದೂರವಾಣಿ ಕರೆ ಮಾಡಲಾಗಿದೆ.

ಸಚಿವ ಸ್ಥಾನ ಕೈ ತಪ್ಪಿತ್ತು
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು.
ಪೌರಾಡಳಿತ ಸಚಿವರಾಗಿದ್ದ ಅವರು ಸಚಿವ ಸಂಪುಟ ಸಭೆಗೆ ಗೈರಾಗುತ್ತಿದ್ದರು. ಸಚಿವ ಸಂಪುಟ ಪುನಾರಚನೆ ವೇಳೆ ಅವರನ್ನು ಸಂಪುಟದಿಂದ ಕೈ ಬಿಟ್ಟು ಸಹೋದರ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

3 ರಿಂದ 4 ಮಂದಿ ಹೋಗಬಹುದು
ಕಾಂಗ್ರೆಸ್ ಶಾಸಕರು ನಾಪತ್ತೆ ಆಗಿರುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡಿದ್ದಾರೆ. 'ಮಾಧ್ಯಮಗಳಲ್ಲಿ ಬರುತ್ತಿರುವಂತೆ 15-16 ಶಾಸಕರು ಹೋಗಿಲ್ಲ. 3 ರಿಂದ 4 ಶಾಸಕರು ಹೋಗಿರಬಹುದು' ಎಂದು ಸಮಾಜ ಕಲ್ಯಾಣ ಸಚಿವರು ಹೇಳಿದ್ದಾರೆ.












Click it and Unblock the Notifications