ಬೆಳ್ಳಿತಟ್ಟೆಯಲ್ಲಿ ಉಪಹಾರ ಸವಿಯುತ್ತಾ ಸಚಿವರು ನಡೆಸಿದ ಚರ್ಚೆ ಏನು?
Recommended Video

ಬೆಂಗಳೂರು, ಅಕ್ಟೋಬರ್ 04 : ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಗುರುವಾರ ನಡೆದ ಸಚಿವರ ಉಪಹಾರ ಕೂಟ ಹಲವು ಕುತೂಹಲಗಳಿಗೆ ಕಾರಣವಾಗಿದೆ. ರಮೇಶ್ ಜಾರಕಿಹೊಳಿ ಹೊರತು ಪಡಿಸಿ ಉಳಿದ ಕಾಂಗ್ರೆಸ್ ಸಚಿವರು ಉಪಹಾರ ಕೂಟದಲ್ಲಿ ಪಾಲ್ಗೊಂಡಿದ್ದರು.
ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಬೆಳ್ಳಿ ತಟ್ಟೆಯಲ್ಲಿ ಸಚಿವರ ದೋಸೆ, ಪೊಂಗಲ್, ಕ್ಯಾರೆಟ್ ಹಲ್ವಾ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಸವಿದರು. ಪಕ್ಷದ ಪರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಡಾ.ಜಿ.ಪರಮೇಶ್ವರ, ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್, ಜಮೀರ್ ಅಹಮದ್ ಖಾನ್ ಸೇರಿದಂತೆ ಎಲ್ಲರೂ ಪಾಲ್ಗೊಂಡಿದ್ದರು. ಆದರೆ, ರಮೇಶ್ ಜಾರಕಿಹೊಳಿ ಅವರು ಮುಂಬೈ ಪ್ರವಾಸದಲ್ಲಿದ್ದ ಕಾರಣ ಉಪಹಾರ ಕೂಟಕ್ಕೆ ಗೈರಾಗಿದ್ದರು.
ಉಪಹಾರ ಕೂಟದಲ್ಲಿ ಏನು ಚರ್ಚೆ ನಡೆಯಿತು?, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕೆ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ? ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಸಭೆಯಲ್ಲಿ ನಡೆದ ಚರ್ಚೆಗಳ ವಿವರ ಇಲ್ಲಿದೆ....

ಉಪ ಚುನಾವಣೆ ಬಗ್ಗೆ ಚರ್ಚೆ
ಸಚಿವರ ಜೊತೆಗಿನ ಉಪಹಾರ ಕೂಟದಲ್ಲಿ ಡಿ.ಕೆ.ಶಿವಕುಮಾರ್ ಅವರು ರಾಮನಗರ, ಜಮಖಂಡಿ ಉಪ ಚುನಾವಣೆ ಬಗ್ಗೆ ವಿಷಯ ಪ್ರಸ್ತಾಪಿಸಿದರು. ರಾಮನಗರದಲ್ಲಿ ಜೆಡಿಎಸ್, ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಮಾಡಲಿ ಎಂದರು. ಆದರೆ, ಕೆಲವು ಸಚಿವರು ಎರಡೂ ಕಡೆ ಸ್ಪರ್ಧೆ ಮಾಡಬೇಕು ಎಂದು ಆಗ್ರಹಿಸಿದರು. ಆಗ ಡಿ.ಕೆ.ಶಿವಕುಮಾರ್ ಅವರು ಹಾಗೆ ಮಾಡುವುದು ಬೇಡ, ಒಂದು ಕ್ಷೇತ್ರ ಅವರಿಗೆ ಬಿಟ್ಟುಕೊಟ್ಟರೆ ಎರಡರಲ್ಲಿಯೂ ಕಾಂಗ್ರೆಸ್, ಜೆಡಿಎಸ್ ಗೆಲುವು ಸಾಧಿಸಬಹುದು ಎಂದು ಸಭೆಯಲ್ಲಿ ವಿವರಣೆ ನೀಡಿದರು.

ವರ್ಗಾವಣೆ ಬಗ್ಗೆ ಚರ್ಚೆ
ಗೃಹ ಸಚಿವ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ವರ್ಗಾವಣೆ ಬಗ್ಗೆ ಮಾತನಾಡಿದರು. ಇಲಾಖೆಯ ಸಚಿವರಿಗೂ ಗೊತ್ತಾಗದಂತೆ ವರ್ಗಾವಣೆ ಆಗುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಆದರೆ, ಅದು ಆಗುತ್ತಿಲ್ಲ ಎಂದರು. ಕೆಲವು ಸಚಿವರು ಇಂತಹ ಕೆಲಸ ನಮ್ಮ ಇಲಾಖೆಲ್ಲೂ ಆಗಿದೆ ಎಂದರು.

ಎಲ್ಲದಕ್ಕೂ ಸಿದ್ದರಾಮಯ್ಯ ಕರೆಯಲಾಗಲ್ಲ
ಉಪಹಾರಕೂಟದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, 'ಸಿದ್ದರಾಮಯ್ಯ ಅವರ ಸೂಚನೆಯಂತೆ ಸಭೆ ನಡೆಸಿದ್ದೇನೆ. ಎಲ್ಲಾ ಸಭೆಗಳಿಗೂ ಅವರನ್ನು ಕರೆಯಲು ಆಗುವುದಿಲ್ಲ. ಸಿದ್ದರಾಮಯ್ಯ ನಿವಾಸದಲ್ಲಿ ಹಿಂದೆ ಸಭೆ ನಡೆಸಿದ್ದೆವು, ಯಾವಾಗ ಬೇಕೋ ಆವಾಗ ಅವರನ್ನು ಕರೆಯುತ್ತೇವೆ. ಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಮಾತೇ ಇಲ್ಲ' ಎಂದು ಸ್ಪಷ್ಟನೆ ನೀಡಿದರು.

ಗೆಲ್ಲುವುದು ನಮ್ಮ ಗುರಿ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, 'ಉಪ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿ. ಸಚಿವರ ಬದಲಾವಣೆ, ಖಾತೆಗಳ ಬದಲಾವಣೆ ಯಾವುದೂ ಆಗುವುದಿಲ್ಲ' ಎಂದು ಹೇಳಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಚರ್ಚೆ
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬದಲಾಣೆ ಮಾಡುವುದು ಬೇಡ. ಅಧ್ಯಕ್ಷ ಸ್ಥಾನದಲ್ಲಿ ಅವರೇ ಇರಲಿ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ ಅವರು ಶಾಸಕರಾಗಿದ್ದು, ಪಕ್ಷದ ಹುದ್ದೆಯಲ್ಲಿಯೂ ಇದ್ದಾರೆ. ಅವರಂತೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಬದಲಾವಣೆ ಮಾಡುವುದು ಬೇಡ ಎಂಬ ವಿಚಾರದ ಕುರಿತು ಚರ್ಚೆಗಳು ನಡೆದವು.












Click it and Unblock the Notifications