ಸಂಪುಟ ವಿಸ್ತರಣೆ ಮರೆತೇ ಬಿಟ್ಟ ಕಾಂಗ್ರೆಸ್: ಹೆಪ್ಪುಗಟ್ಟುತ್ತಿದೆ ಅಸಮಾಧಾನ
Recommended Video

ಬೆಂಗಳೂರು,ಅಕ್ಟೋಬರ್ 13: ಒಂದೊಂದು ನೆಪ ಹೇಳಿ ರಾಜ್ಯ ಸಚಿವ ಸಂಪುಟದ ವಿಸ್ತರಣೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ಮುಂದೂಡುತ್ತಿರುವುದು ಕಾಂಗ್ರೆಸ್ ಶಾಸಕರಲ್ಲಿನ ಅಸಮಾಧಾನ ಹೆಪ್ಪುಗಟ್ಟುವಂತೆ ಮಾಡಿದೆ.
ಆರಂಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಸಿದ್ದರಾಮಯ್ಯ ಯುರೋಪ್ ಪ್ರವಾಸ, ಪತೃಪಕ್ಷ ನೆಪಹೇಳಿ ಸಚಿವ ಸಂಪುಟ ವಿಸ್ತರಣೆ ಮುಂದೂಡಿದ್ದ ಕಾಂಗ್ರೆಸ್ ಇದೀಗ ಉಪ ಚುನಾವಣೆಯ ನೆಪವನ್ನು ಹೇಳುತ್ತಿದೆ.
ಉಪ ಚುನಾವಣೆ ಮುಗಿಯುತ್ತಿದ್ದಂತೆಯೇ ಬೆಳಗಾವಿಯಲ್ಲಿ ಹತ್ತು ದಿನಗಳ ಚಳಿಗಾಲದ ಅಧಿವೇಶನ ನಡೆಯಲಿದ್ದು ಡಿಸೆಂಬರ್ ಅಂತ್ಯದವರೆಗೂ ಸಚಿವ ಸಂಪುಟ ವಿಸ್ತರಣೆ ಮುಂದೂಡುವುದೇ ಕಾಂಗ್ರೆಸ್ ನ ಉದ್ದೇಶವಾಗಿದೆ.
ಡಿಸೆಂಬರ್ ಬಳಿಕ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಗೊಳ್ಳಲಿದ್ದು ಆ ವೇಳೆ ಕೂಡ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಅನುಮಾನ ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಳಗೊಳಗೆ ಕುದಿಯುತ್ತಿರುವ ಕಾಂಗ್ರೆಸ್ ಶಾಸಕರು ಯಾವ ಸಂದರ್ಭದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ಶಾಸಕರು ಮಾತ್ರವಲ್ಲದೆ ನಿಗಮ ಮಂಡಳಿ ಸ್ಥಾನಗಳಿಗಾಗಿ ಕಾದುಕುಳಿತಿರುವ ಕಾರ್ಯಕರ್ತರೂ ಕೂಡ ಪಕ್ಷದ ಮುಖಂಡರ ಕುಂಟು ನೆಪಕ್ಕೆ ಬೇಸರಗೊಂಡಿದ್ದಾರೆ.

ಸದ್ಯಕ್ಕೆ ನಿಗಮ ಮಂಡಳಿಗಿಲ್ಲ ಮುಕ್ತಿ
ಸಂಪುಟ ವಿಸ್ತರಣೆ ಮಾಡದೆ 85 ನಿಮಗ ಮಂಡಳಿಗಳ ನೇಮಕವೂ ಅನುಮಾನ ಎಂಬಂತಾಗಿದೆ. ಎರಡು ತಿಂಗಳ ಹಿಂದೆ ಸರ್ಕಾರದಿಂದ ಹೊರಟ ಆದೇಶದ ಪ್ರಕಾರ ಸಚಿವರೇ ಸದ್ಯಕ್ಕೆ ನಿಗಮ ಮಂಡಳಿ ಅಧ್ಯಕ್ಷರಾಗಿರುತ್ತಾರೆ. ಆರ್ಥಿಕ ಹೊರೆ ತಗ್ಗಿಸುವುದು ಈ ನೇಮಕ ಮಾಡದ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ.

ಸಚಿವ ಸಂಪುಟ ವಿಸ್ತರಣೆ ಏಕೆ ಮಾಡುತ್ತಿಲ್ಲ
ಕಾಂಗ್ರೆಸ್ ಪಾಲಿಗೆ ಆರು ಸಚಿವ ಸ್ಥಾನ ಖಾಲಿ ಇದ್ದು, 22 ಆಕಾಂಕ್ಷಿಗಳಿದ್ದಾರೆ. ಹಿರಿತನ, ಜಾತಿ, ಪ್ರದೇಶ, ಹೀಗೆ ವಿವಿಧ ಮಾನದಂಡಗಳಲ್ಲಿ ಸಚಿವ ಸ್ಥಾನ ಹಂಚಿಕೆ ಕಷ್ಟ ಸಾಧ್ಯ, ವಿಸ್ತರಣೆ ಮಾಡಿದರೂ ಬಂಡಾಯ ಖಚಿತ ಎಂಬ ಆತಂಕದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಉಪ ಚುನಾವಣೆ ನೆಪ
ಮೊದಲು ಸಿದ್ದರಾಮಯ್ಯ ಯುರೋಪ್ ಪ್ರವಾಸ, ಬಳಿಕ ಪಿತೃಪಕ್ಷ ಇದೀಗ ಲೋಕಸಭಾ, ವಿಧಾನಸಭಾ ಉಪ ಚುನಾಔಣೆಯ ನೆಪವೊಡ್ಡಿ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗುತ್ತಿದೆ. ಹೀಗೆ ಮುಂದೂಡಿದರೆ ಬಳಿಕ ಲೋಕಸಭಾ ಚುನಾವಣೆ ಸಿದ್ಧತೆ ಆರಂಭಗೊಳ್ಳಲಿದೆ. ಅಲ್ಲಿಯವರೆಗೂ ಶಾಸಕರನ್ನು ತನ್ನೆಡೆಗೆ ಇಟ್ಟುಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾದಂತೆ ಕಾಣುತ್ತಿದೆ.

ಚಳಿಗಾಲ ಅಧಿವೇಶನ ಸಿದ್ಧತೆ
ನವೆಂಬರ್ 3ರ ಫಲಿತಾಂಶ ಬಳಿಕ ಚಳಿಗಾಲದ ಅಧಿವೇಶನ ತಯಾರಿ ನಡೆಯುತ್ತದೆ,, ನಂತರ ಲೋಕಸಭಾ ಚುನಾವಣೆ ಕಾವು ಶುರುವಾಗುತ್ತದೆ. ಒಟ್ಟಾರೆ ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಮಾಡುವುದು ಅನುಮಾನ ಎಂಬ ಮಾತು ಕಾಂಗ್ರೆಸ್ ವಲಯದಿಂದಲೇ ಕೇಳಿಬರುತ್ತಿದೆ.












Click it and Unblock the Notifications