ಸರ್ಕಾರ ಟೀಕಿಸುವ ಕಾಗೋಡು ತಿಮ್ಮಪ್ಪ ವಿರುದ್ಧ ದೆಹಲಿಗೆ ಪತ್ರ!
ಬೆಂಗಳೂರು, ಜ.6 : ಸಿಎಂ ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿಯನ್ನು ಹರಿತ ಮಾತುಗಳಲ್ಲಿ ಟೀಕಿಸಿ, ಪ್ರತಿಪಕ್ಷದವರಂತೆ ವರ್ತಿಸುವ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ಹೋಗಿದೆ. ಕೆಲವು ಸಚಿವರು ಮತ್ತು ಶಾಸಕರು ಈ ದೂರಿಗೆ ಸಹಿ ಹಾಕಿದ್ದಾರೆ ಎಂಬುದು ಸದ್ಯದ ಮಾಹಿತಿ.
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ತಮ್ಮ ಹುದ್ದೆಯ ಘನತೆ ಮರೆತು ಪ್ರತಿಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ. ಇದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿದೆ ಎಂಬುದು ದೂರಿನ ಸಾರಾಂಶವಾಗಿದೆ. ಸ್ಪೀಕರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. [ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ನಿಮಗೇನು ಧಾಡಿǃ]

ದೂರಿನ ಜೊತೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸರ್ಕಾರದ ಬಗ್ಗೆ ಆಡಿದ ಮಾತುಗಳನ್ನು ಪಟ್ಟಿ ಮಾಡಿ ಪತ್ರದೊಂದಿಗೆ ಕಳುಹಿಸಲಾಗಿದೆ. ಸ್ಪೀಕರ್ ಅವರ ಈ ಧೋರಣೆಗೆ ಕಡಿವಾಣ ಹಾಕಬೇಕು ಇಲ್ಲವೇ ಈ ಸ್ಥಾನದಿಂದ ಬಿಡುಗಡೆ ಹೊಂದಲು ಸೂಚಿಸಬೇಕು ಎಂಬ ಒತ್ತಾಯವನ್ನೂ ದೂರಿನಲ್ಲಿ ಮಾಡಲಾಗಿದೆ. [ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಆಡಳಿತದಂತಾಗಿದೆ!]
ಪೂಜಾರಿ ಗರಂ : ಅತ್ತ ಮಂಗಳೂರಿನಲ್ಲಿ ಮಾತನಾಡಿರುವ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನುಭವಿ ರಾಜಕಾರಣಿಯಾಗಿರುವ ಸ್ಪೀಕರ್ ಅವರು ಸರ್ಕಾರದ ವಿರುದ್ಧ ಯುದ್ಧ ಸಾರಿದ್ದಾರೆ. ತಮ್ಮ ಇತಿಮಿತಿ ಮರೆತು ಸಚಿವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಪೂಜಾರಿ ಆರೋಪಿಸಿದ್ದಾರೆ.
ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ಇದ್ದಾರೆ. ಸ್ಪೀಕರ್ ಪ್ರತಿಪಕ್ಷದ ನಾಯಕರಂತೆ ಕೆಲಸ ಮಾಡುತ್ತಿದ್ದು, ಅವರು ಸರ್ಕಾರವನ್ನು ಬೀಳಿಸಲು ಹೊರಟಿದ್ದಾರೆಯೇ? ಎಂದು ಪ್ರಶ್ನಿಸಿರುವ ಪೂಜಾರಿ ಅವರು, ಮಂತ್ರಿ ಸ್ಥಾನ ಕೊಟ್ಟಿಲ್ಲವೆಂದು ಹೀಗೆಲ್ಲ ಮಾತಾಡುತ್ತಿದ್ದಾರೆಂದು ಜನ ಹೇಳುವಂತಾಗಿದೆ ಎಂದು ತಿಳಿಸಿದ್ದಾರೆ.
ಸ್ಪೀಕರ್ ಸರ್ಕಾರದ ವಿರುದ್ಧ ಗುಡುಗಿದ ಸಂಗತಿಗಳು
* ಜನವರಿ 5 : ವಿಧಾನಸಭೆ ಸಿಬ್ಬಂದಿ ಕಾರ್ಯವೈಖರಿಗೆ ಅತೃಪ್ತಿ. ಕಚೇರಿಗಳಲ್ಲಿ ಕಾಲಹರಣ ಮಾಡದೆ ಜನರಿಗೆ ಆಡಳಿತದಲ್ಲಿ ಖುಷಿಪಡುವ ವಾತಾವರಣ ಸೃಷ್ಟಿಸಿ ಎಂದು ಸಲಹೆ ನೀಡಿದ್ದರು. ಆಡಳಿತದಲ್ಲಿ ಪಾರದರ್ಶಕತೆ ತರುವುದಾಗಿ ಸಿಎಂ ಹೇಳಿದ್ದರೂ, ಸಿಬ್ಬಂದಿ ಮಾತ್ರ ಅದರತ್ತ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
* ಅಕ್ಟೋಬರ್ 23 : ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿಮಗೇನು ದಾಢಿ. ಡಾಕ್ಟರ್ ಗಳು ಮತ್ತು ನರ್ಸ್ ಗಳಿಲ್ಲದೇ ರಾಜ್ಯಾದ್ಯಂತ ಜನ ತೊಂದರೆ ಪಡುತ್ತಿದ್ದಾರೆ. ಇದು ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ? ಮೊದಲು ಹುದ್ದೆ ಭರ್ತಿಗೆ ಕ್ರಮ ತೆಗೆದುಕೊಳ್ಳಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆರೋಗ್ಯ ಸಚಿವ ಯು.ಟಿ.ಖಾದರ್ ವಿರುದ್ಧ ಗುಡುಗಿದ್ದರು.
* ಆಗಸ್ಟ್ 20 : "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹಿಂದಿನ ಬಿಜೆಪಿ ಸರ್ಕಾರದಂತೆಯೇ ಇದೆ. ಜನರಿಗೆ ಕೊಟ್ಟ ಮಾತಿನಂತೆ ಹೊಸ ಸರ್ಕಾರ ನಡೆದುಕೊಳ್ಳತ್ತಿಲ್ಲ" ಎಂದು ಹೇಳಿದ್ದರು. 'ಆಡಳಿತದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಜಡತ್ವ ಮುಂದುವರೆದಿದೆ. ಕೊಟ್ಟ ಮಾತಿನಂತೆ ನಡೆಯದಿದ್ದರೆ ಹೊಸ ಸರ್ಕಾರ ಏಕೆ ಬೇಕು?' ಎಂದು ಪ್ರಶ್ನಿಸಿದ್ದರು.












Click it and Unblock the Notifications