ಸಿಎಂ ಸಿದ್ದರಾಮಯ್ಯ ವಿರುದ್ಧವೇ ತಿರುಗಿಬಿದ್ರಾ ಕಾಂಗ್ರೆಸ್ಸಿಗರು?
ಮುಡಾ ಕೇಸ್ನಲ್ಲಿ ಸಿಲುಕಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಈವರೆಗೆ ಕಾಂಗ್ರೆಸ್ ನಾಯಕರು ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಹೇಳುತ್ತಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ಸ್ವಪಕ್ಷದವರೇ ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಶುರುವಾಗಿದೆ.
ಮುಡಾ ಕೇಸ್ ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಸದ್ದು ಮಾಡಿದರೂ ಕೊನೆಗೆ ಸಿಎಂ ಕುರ್ಚಿಯನ್ನೇ ಅಲುಡಗಾಡಿಸುವ ಮಟ್ಟಕ್ಕೆ ಹೆಮ್ಮರವಾಗಿ ಬೆಳೆಯಿತು. ಈ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ರಾಜ್ಯಪಾಲರು ಅನುಮತಿ ಕೊಟ್ಟರು. ಮತ್ತೊಂದೆಡೆ ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಕೋರ್ಟ್ ಮೆಟ್ಟಿಲೇರಿ ಅಲ್ಲಿಯೂ ಸೋತರು. ಇದೀಗ ಲೋಕಾಯುಕ್ತ ಅಧಿಕಾರಿಗಳು ಈ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈ ಕೇಸ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಸರಿಯಾಗಿ ನಿಭಾಯಿಸಿಲ್ಲ ಎಂಬ ವಿಚಾರಕ್ಕೆ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಹಾಗೂ ಸಚಿವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಮುಡಾ ಕೇಸ್ ಅನ್ನು ಸಿದ್ದರಾಮಯ್ಯ ಅವರು ಲೈಟಾಗಿ ತೆಗೆದುಕೊಂಡಿದ್ದರಿಂದಲೇ ಇಂದು ಇಂತಹ ದುಸ್ಥಿತಿ ಬಂದಿದೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದಾರಂತೆ.
ಸಿಎಂ ಹಾಗೂ ಅವರ ಗುಂಪು ಮುಡಾ ಕೇಸ್ನ ಬಗ್ಗೆ ಗಂಭೀರವಾಗಿ ಪರಿಗಣಿಸಲಿಲ್ಲ. ಮುಂದೆ ಈ ಕೇಸ್ನಿಂದ ಏನೆಲ್ಲ ಆಗಬಹುದು ಎಂದು ಊಹೆಯೂ ಮಾಡಲಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ದೂರು ಕೊಟ್ಟವರನ್ನು ಹಗುರವಾಗಿ ತೆಗೆದುಕೊಂಡರು. ದೂರುದಾರನು ದಾಖಲೆಗಳನ್ನು ಸಂಗ್ರಹಿಸಿದರೂ ಅದು ಸಿಎಂ ಸಿದ್ದರಾಮಯ್ಯ ಅವರ ಕಚೇರಿಯವರ ಗಮನಕ್ಕೂ ಬರಲಿಲ್ಲ ಎಂದು ದೂರುತ್ತಿದ್ದಾರೆ.
ಮುಡಾ ಕೇಸ್ ವಿಚಾರ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾದ ವಿಚಾರ ಕೂಡ ಸಿಎಂ ಕಚೇರಿಗೆ ತಿಳಿಯಲೇ ಇಲ್ಲ. ತಪ್ಪು ಮಾಡಿರುವ ಅಧಿಕಾರಿಗಳನ್ನು ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಈ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಕೂಡ ದೂರುದಾರರನ್ನು ಸುಖಾಸುಮ್ಮನೆ ಎದುರು ಹಾಕಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಲೇ ಸಿದ್ದರಾಮಯ್ಯ ಅವರು ಇಂತಹ ಸ್ಥಿತಿ ತಲುಪಿದ್ದಾರೆ ಎಂದು ಗೊಣಗಾಡುತ್ತಿದ್ದಾರೆ ಎನ್ನಲಾಗಿದೆ.

ಕೇಸ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ ಸಿಎಂ ಸಿದ್ದರಾಮಯ್ಯ ಅವರು ಅಲ್ಲಿ ಬಲವಾದ ವಾದ ಮಂಡನೆಗೆ ಗಮನ ಹರಿಸಲಿಲ್ಲ. ಸಿಎಂ ಪರ ಕೋರ್ಟ್ನಲ್ಲಿ ವಾದ ಮಂಡಿಸಿದ ಅಘಿಷೇಕ್ ಮನು ಸಿಂಘ್ವಿ ಅವರು ಮತ್ತಷ್ಟು ಸಮರ್ಥತೆ ತೋರಬೇಕಿತ್ತು. ಈ ಕೇಸ್ನ ಗಂಭೀರತೆ ಅರ್ಥಮಾಡಿಕೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ. ಇದರಿಂದಲೇ ಕೇಸ್ ಬಹಳ ಮುಂದಕ್ಕೆ ತಲುಪಿದೆ. ಮತ್ತೊಂದೆಡೆ ಬಿಜೆಪಿಯವರು ತಮ್ಮ ಪ್ಲ್ಯಾನ್ನಲ್ಲಿ ಮೊದಲ ಹಂತದ ಗೆಲುವು ಸಾಧಿಸಿಕೊಂಡಿದ್ದಾರೆ ಎಂದೆಲ್ಲ ಸ್ವಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ವಿಪಕ್ಷಗಳಿಂದ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಲವಾದ ಒತ್ತಾಯ ಕೇಳಿ ಬರುತ್ತಿದೆ. ಇಲ್ಲಿವರೆಗೆ ಸಿದ್ದರಾಮ್ಯ ಅವರ ಬೆನ್ನಿಗೆ ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್ ಜೊತೆಯಾಗಿ ನಿಲ್ಲುತ್ತೇವೆ ಎಂದು ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡಿದ್ದರು. ಈಗ ಸಿದ್ದರಾಮಯ್ಯ ವಿರುದ್ಧ ಸ್ವಪಕ್ಷದವರೇ ಅಸಮಾಧಾನ ಹೊರಹಾಕುತ್ತಿರುವುದು ಅವರ ಕುರ್ಚಿಗೆ ಕಂಟಕ ತರಲೂಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications