ಕಾಂಗ್ರೆಸ್-ಜೆಡಿಎಸ್ ಪ್ರಜಾಪ್ರಭುತ್ವವನ್ನು ಉಳಿಸಿದ್ದಾರೆ: ರಾಹುಲ್ ಗಾಂಧಿ
ನವ ದೆಹಲಿ, ಮೇ 19: ಕರ್ನಾಟಕದಲ್ಲಿ ಬಿಜೆಪಿಗೆ ಆಗಿರುವ ಸೋಲು, ಪ್ರಜಾಪ್ರಭುತ್ವಕ್ಕೆ ದೊರಕಿರುವ ಗೆಲುವು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಪ್ರಜಾಪ್ರಭುತ್ವವನ್ನು ಉಳಿಸಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ನವ ದೆಹಲಿಯಲ್ಲಿ ಎಐಸಿಸಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಶಾಸಕರನ್ನು ಹಣದ ಬಲದಿಂದ ಕೊಳ್ಳುವ ಪ್ರಯತ್ನ ಮಾಡಲಾಯಿತು, ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನೇರವಾಗಿ ಕುದುರೆ ವ್ಯಾಪಾರದಲ್ಲಿ ತೊಡಗಿದರು, ನಾಲ್ಕು ಬಾರಿ ಈ ರೀತಿಯ ಪ್ರಯತ್ನ ಮಾಡಲಾಯಿತು ಎಂದರು.
ಮೋದಿ ಹಿಟ್ಲರ್, ಅಮಿತ್ ಶಾ ಗೂಬೆಲ್ಸ್: ಸಿದ್ದರಾಮಯ್ಯ ಕಿಡಿ
ಭ್ರಷ್ಟಾಚಾರದ ವಿರುದ್ಧ ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ಮೋದಿ ಅವರೇ ಕರ್ನಾಟಕದಲ್ಲಿ ಕುದುರೆ ವ್ಯಾಪಾರ ಮಾಡಲು ಮಾರ್ಗದರ್ಶನ ನೀಡಿದ್ದರು, ಆದರೆ ಕರ್ನಾಟಕದ ಜನ ಹಣ, ಪದವಿ ಎಲ್ಲದಕ್ಕಿಂತಲೂ ಸಂವಿಧಾನ ದೊಡ್ಡದು, ಪ್ರಜಾಪ್ರಭುತ್ವ ದೊಡ್ಡದು ಎಂದು ತೋರಿಸಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಯು ಸಿಬಿಐ, ಇಡಿ, ಐಟಿ ಸೇರಿದಂತೆ ರಾಷ್ಟ್ರದಲ್ಲಿನ ಎಲ್ಲಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರ ಹಿಡಿಯಲು ಪ್ರಯತ್ನಿಸಿತ್ತು, ಆದರೆ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಾಗಿ ಅದರ ವಿರುದ್ಧ ಹೋರಾಡಿದರು ಹಾಗೂ ಜಯ ಸಾಧಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಅಧಿವೇಶನದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಾಗಲೇ ಅದಕ್ಕೆ ಗೌರವ ಕೂಡಾ ಕೊಡದೆ ಬಿಜೆಪಿಯ ಎಲ್ಲ ನಾಯಕರು ಎದ್ದು ಹೊರಕ್ಕೆ ಹೊದರು ಇದು ಅವರ ದೇಶಭಕ್ತಿ ಎಂದು ಮೂದಲಿಸಿದ ರಾಹುಲ್ ಗಾಂಧಿ, ಬಿಜೆಪಿಯವರ ಢೋಂಘಿ ದೇಶಪ್ರೇಮ ಎಲ್ಲರಿಗೂ ಅರಿವಾಗಬೇಕು ಎಂದರು.
ಸಂಭಾವ್ಯ : ಕೈ-ತೆನೆ ಮೈತ್ರಿ ಸರ್ಕಾರದಲ್ಲಿ ಸಚಿವರು ಹಾಗೂ ಖಾತೆಗಳು
ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು, ಜೆಡಿಎಸ್ ಕಾರ್ಯಕರ್ತರು, ನಾಯಕರುಗಳಿಗೆ ಧನ್ಯವಾದ ಅರ್ಪಿಸಿದ ರಾಹುಲ್ ಗಾಂಧಿ, ಕೊಲೆ ಆರೋಪಿ ಅಮಿತ್ ಶಾ ಮತ್ತು ಭ್ರಷ್ಟ ನರೇಂದ್ರ ಮೋದಿ ಅವರಿಗೆ ಹಣವೇ ಎಲ್ಲ ಅಲ್ಲ ಅದಕ್ಕಿಂತಲೂ ಮುಖ್ಯವಾದುದು ಸಂವಿಧಾನ ಎಂಬುದನ್ನು ತೋರಿಸಿದ್ದೀರ ಎಂದು ಅವರು ಶಹಭ್ಭಾಸ್ ಗಿರಿ ನೀಡಿದರು.
ರಾಜ್ಯಪಾಲರ ಕಚೇರಿ ದುರಪಯೋಗದ ಬಗ್ಗೆ ಮಾತನಾಡಿದ ರಾಹುಲ್ ಅವರು, ಬಿಜೆಪಿಯು ಎಲ್ಲ ಸಾಂಸ್ಥಿಕ ಸ್ಥಾನಗಳನ್ನು ದುರುಪಯೋಗ ಪಡಿಸಿಕೊಂಡಿದೆ. ಅದಕ್ಕೆ ಜನರ ಅಭಿಪ್ರಾಯ ಮುಖ್ಯವೇ ಅಲ್ಲ, ಗೋವಾ, ಮಣಿಪುರ, ಮೇಘಾಲಯ, ಬಿಹಾರಗಳಲ್ಲಿ ಅದು ಮಾಡಿರುವುದು ಅದನ್ನೇ, ಬಿಜೆಜಿ ಎಲ್ಲೆಲ್ಲಿ ಪ್ರಜಾಪ್ರಭುತ್ವದ ಕೊಲೆ ಮಾಡಲು ಪ್ರಯತ್ನಿಸುತ್ತದೆಯೋ ಅಲ್ಲೆಲ್ಲಾ ನಾನಿರುತ್ತೇನೆ ಎಂದು ಅವರು ಹೇಳಿದರು.