ಹೇಳೋದೊಂದು, ಮಾಡೋದೊಂದು : ಪುಢಾರಿಗಳ ಮಾತಿನ ಝಲಕ್
ರಾಜಕೀಯ ನಿಂತ ನೀರಲ್ಲ, ಇಲ್ಲಿ ಯಾರೂ ಶತ್ರುಗಳಿಲ್ಲ ಮಿತ್ರರೂ ಇಲ್ಲ ಎನ್ನುವ ಹಾಗೇ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ವಿರೋಧಿಗಳು ಭಾಯಿ ಭಾಯಿ ಆದ ಉದಾಹರಣೆಗಳು ಸಾಕಷ್ಟಿವೆ.
ದೇಶದ, ರಾಜ್ಯದ ಏಳಿಗೆಗಾಗಿ, ಕೋಮುವಾದಿಗಳನ್ನು ದೂರವಿಡಲು ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮೆರೆತು ನಾವು ಒಂದಾಗುತ್ತಿದ್ದೇವೆ ಎನ್ನುವ ಈ ರಾಜಕೀಯ ಪಕ್ಷಗಳ ದಿಢೀರ್ ಒಗ್ಗಟ್ಟಿನ ನಿಜವಾದ ಮರ್ಮವೇನು ಎನ್ನುವುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ. (ಗೌಡ್ರ ರಾಜಕೀಯ ಕುಣಿಕೆ)
ಒಂದು ಕಾಲದಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡಿ ಕೊಳ್ಳುತ್ತಿದ್ದ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಆಪ್ತಮಿತ್ರರಾಗಿರುವುದು ಈಗ ಇತಿಹಾಸ.
ಎನ್ಡಿಎ ಮೈತ್ರಿಕೂಟದಲ್ಲಿದ್ದಾಗ ಸೋನಿಯಾ ಗಾಂಧಿಯವರನ್ನು 'ಇಟೆಲಿ ಮೇಡಂ' ಎಂದು ಲೇವಡಿ ಮಾಡಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೆಲವು ದಿನಗಳ ಹಿಂದೆ ಸೋನಿಯಾ ಗಾಂಧಿ ಜೊತೆ ಚುನಾವಣಾ ಪ್ರಚಾರದ ವೇದಿಕೆ ಹಂಚಿಕೊಂಡಿದ್ದಾಗಿದೆ.
ಇನ್ನು ರಾಜ್ಯ ರಾಜಕೀಯದ ವಿಚಾರಕ್ಕೆ ಬಂದಾಗ ಬಿಜೆಪಿಯನ್ನು ಕುಂತಲ್ಲಿ ನಿಂತಲೆಲ್ಲಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಜೆಡಿಎಸ್, ಟ್ವೆಂಟಿ ಟ್ವೆಂಟಿ ಒಪ್ಪಂದದಂತೆ ಕುಮಾರಸ್ವಾಮಿ ಇಪ್ಪತ್ತು ತಿಂಗಳು ಸಿಎಂ ಆಗಿದ್ದು, ಎಚ್ಡಿಕೆ ವಚನಭ್ರಷ್ಟ ಎನ್ನುವ ಆರೋಪ ಹೊತ್ತಿದ್ದೂ ನಮ್ಮ ಮುಂದಿದೆ. ಈಗ ಬಿಬಿಎಂಪಿ ಸರದಿ..
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕೆಲವೇ ಕೆಲವು ದಿನಗಳ ಹಿಂದೆ ವಾಚಾಮಗೋಚರವಾಗಿ ಬೈಯ್ದಾಡಿಕೊಂಡಿದ್ದು ಉಂಟು. ಅಧಿಕಾರಕ್ಕಾಗಿ ಅವರು ಅದನ್ನೆಲ್ಲಾ ಸದ್ಯದ ಮಟ್ಟಿಗೆ ಹೊಟ್ಟೆಯೊಳಗೆ ಹಾಕಿಕೊಂಡಿದ್ದರೂ, ಸಾರ್ವಜನಿಕರು ಅವರು ಆಡಿದ್ದ ಗೋಲ್ಡನ್ ವರ್ಡ್ಸ್ ಗಳನ್ನು ಮರೆಯುವುದು ಡೌಟು. ಈ ಎರಡು ಪಕ್ಷದ ಮುಖಂಡರು ಈ ಹಿಂದೆ ಆಡಿದ್ದ ಕೆಲವೊಂದು ಮಾತಿನ ಮುತ್ತುಗಳ ಝಲಕ್ ಸ್ಲೈಡಿನಲ್ಲಿ..

ಜೆಡಿಎಸ್ ತನ್ನ ಅಸ್ತಿತ್ವ ರುಜುವಾತು ಪಡಿಸಿದೆ
ಭಾರೀ ಚರ್ಚೆಗೊಳಗಾಗಿರುವ ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಚಾರದಲ್ಲೂ, ಜೆಡಿಎಸ್ ತನ್ನ ಅಸ್ತಿತ್ವವನ್ನು ರುಜುವಾತು ಪಡಿಸಿದೆ. ಆದರೆ, ಈ ಬಾರಿ ಜೆಡಿಎಸ್ ತನ್ನ ಪ್ರೀತಿಯನ್ನು ಬಿಜೆಪಿ ಮೇಲೆ ತೋರದೇ, ಕಾಂಗ್ರೆಸ್ ಮೇಲೆ ತೋರಿರುವುದು ರಾಜಕೀಯ ನಿಂತ ನೀರಲ್ಲ ಎನ್ನುವುದಕ್ಕೆ ಕೊಡಬಹುದಾದ ಶ್ರಾವಣ ಮಾಸದ ಉದಾಹರಣೆ.

ಕುಮಾರಸ್ವಾಮಿ ಒಳ್ಳೆ ನಟ
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒಬ್ಬ ಒಳ್ಳೆಯ ನಿರ್ಮಾಪಕ, ನಿರ್ದೇಶಕ, ನಟ. ಈಗ ಅವರ ಕಾಲ, ಅವರು ಬಯಸಿದಂತೆ ನಡೆಯುತ್ತಿದೆ ಎಂದು ದೇವೇಗೌಡ ಕುಟುಂಬದ ಪರಮ ವಿರೋಧಿ, ಇಂಧನ ಸಚಿವ ಡಿ ಕೆ ಶಿವಕುಮಾರ್, ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮಾತುಕತೆ ಅಂತಿಮ ಹಂತದಲ್ಲಿದ್ದಾಗಲೇ ಲೇವಡಿ ಮಾಡಿದ್ದರು.

ಕುಮಾರಸ್ವಾಮಿ ತಿರುಗೇಟು
ಡಿ ಕೆ ಶಿವಕುಮಾರ್ ಹೇಳಿಕೆಗೆ ಕೆಲವೇ ಗಂಟೆಯಲ್ಲಿ ತಿರುಗೇಟು ನೀಡಿದ್ದ ಕುಮಾರಸ್ವಾಮಿ, ನಾನೊಬ್ಬ ಒಳ್ಳೆಯ ನಿರ್ಮಾಪಕ, ನಿರ್ದೇಶಕ ಹೌದು. ಆದರೆ ಖಳನಾಯಕ ಯಾರು ಎಂದು ಡಿಕೆಶಿ ಅವರನ್ನು ಖಳನಾಯಕ ಎಂದೇ ಪರೋಕ್ಷವಾಗಿ ತಿರುಗೇಟು ನೀಡಿದ್ದರು.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ತಮ್ಮ ವಿರುದ್ಧ ಕುಮಾರಸ್ವಾಮಿ ಅವರು ಮಾಡುತ್ತಿರುವ ಆರೋಪಗಳು ಅರ್ಧಹೀನವಾದವು. ಹಿಟ್ ಅಂಡ್ ರನ್ ರೀತಿಯ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸುತ್ತಾ ಕುಮಾರಸ್ವಾಮಿ, ಇಂತಹ ಕೆಟ್ಟ ಮುಖ್ಯಮಂತ್ರಿಯನ್ನು ನಾನೆಂದೂ ನೋಡಿಲ್ಲ ಎಂದು ವಾಕ್ ಪ್ರಹಾರ ಮಾಡಿದ್ದರು.

ತಲೆ ಮೇಲೆ ಸೀಮೆಎಣ್ಣೆ ಡಬ್ಬ ಹೊತ್ತಿದ್ದು ಸಿದ್ದುಗೆ ಗೊತ್ತೆ
ನಾನು ತಲೆಯ ಮೇಲೆ ಸೀಮೆಎಣ್ಣೆ ಡಬ್ಬ ಹೊತ್ತಿದ್ದೆ. ರೈಲಿನಲ್ಲಿ ಎರಡು ಸಾವಿರ ಜನ ರೈತರನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದೆ. ಲಗೇಜ್ ಇಡುವ ಜಾಗದಲ್ಲಿ ಕುಳಿತು ಪಕ್ಷ ಕಟ್ಟಿದ್ದೆ, ಇದನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆಯೇ? ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೆಗೌಡ ಸಿದ್ದು ವಿರುದ್ದ ಕಿಡಿಕಾರಿದ್ದರು.

ಕೆ ಜೆ ಜಾರ್ಜ್
ಕುಮಾರಸ್ವಾಮಿ ಅವರು ಅಧಿಕಾರವಿಲ್ಲದೇ ನೀರಿನಿಂದ ತೆಗೆದ ಮೀನಿನಂತಾಗಿದ್ದಾರೆ. ಲಾಟರಿ ದಂಧೆಯಲ್ಲಿ ಕುಮಾರಸ್ವಾಮಿ ಅವರು ಹೇಳಿದಂತೆ 35 ಅಧಿಕಾರಿಗಳ ಹೆಸರಿಲ್ಲ, ಹೆಸರಿರುವ ಒಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ತಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಜಾರ್ಜ್ ಲೇವಡಿ ಮಾಡಿದ್ದರು.

ಕದ್ದಾಲಿಸುವ ಚಟ ಇಲ್ಲ
ಮಾಜಿ ಪ್ರಧಾನಿ ದೇವೇಗೌಡರ ದೂರವಾಣಿ ಕರೆಗಳನ್ನು ಕದ್ದಾಲಿಸುವ ಚಟ ನಮ್ಮ ಸರ್ಕಾರಕ್ಕಿಲ್ಲ. ದೇವೇಗೌಡರು ಸುಳ್ಳು ಹೇಳುವುದನ್ನು ಬಿಡಲಿ. ಪದೇ ಪದೇ ಸುಳ್ಳು ಹೇಳುತ್ತಾ, ಗೌಡ್ರು ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಕಾಂಗ್ರೆಸ್ ನಡಿಗೆ ಮನೆ ಕಡೆಗೆ
ರಾಜ್ಯದ ನೀರಾವರಿ ಯೋಜನೆಗಳನ್ನು ಕಾಂಗ್ರೆಸ್ ಹಣ ಮಾಡುವ ದಂಧೆಯನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ನಡಿಗೆ ಮನೆ ಕಡೆಗೆ ಎಂದು ಕುಮಾರಸ್ವಾಮಿ ಈ ಹಿಂದೆ ಕಾಂಗ್ರೆಸ್ ವಿರುದ್ದ ಅಪಹ್ಯಾಸ ಮಾಡಿದ್ದರು.

ಕುಟುಂಬ ರಾಜಕಾರಣ
ದೇವೇಗೌಡರದ್ದು ಜಾತಿ ಮತ್ತು ಕುಟುಂಬ ರಾಜಕಾರಣ, ಪ್ರಧಾನಿಯಾದರೆ ದೇವೇಗೌಡರೇ ಆಗಬೇಕು, ಮುಖ್ಯಮಂತ್ರಿಯಾದರೆ ಕುಮಾರಸ್ವಾಮಿ, ರೇವಣ್ಣನೇ ಆಗಬೇಕು ಎಂಬುದು ಅವರ ರಾಜಕಾರಣಕ್ಕೆ ಕೊಡಬಹುದಾದ ಉದಾಹರಣೆ ಎಂದು ಸಿದ್ದರಾಮಯ್ಯ ಕುಟುಕಿದ್ದರು.

ಪದ್ಮನಾಭ ನಗರ
ಸಿದ್ದರಾಮಯ್ಯ ಅವರು, 'ಹಿಂದೆಲ್ಲಾ ಬಜೆಟ್ ಮಂಡಿಸುವಾಗ ಪದ್ಮನಾಭನಗರದ ಸೂಚನೆಗಳನ್ನು ಪಾಲಿಸುತಿದ್ದರು. ಅದಕ್ಕೆ ಆಗ ಬಜೆಟ್ ಚೆನ್ನಾಗಿರುತ್ತಿತ್ತು ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದ ಸಿದ್ದು, ನಾನು ಪದ್ಮನಾಭನಗರದ ಸೂಚನೆಗಳನ್ನು ಪಾಲಿಸಿದ್ದರೆ, ಅದೇ ಪಕ್ಷದಲ್ಲಿರುತ್ತಿದ್ದೆ. ಧರ್ಮಸಿಂಗ್ ಅವಧಿಯಲ್ಲಿ ನಾನು ಡಿಸ್ಮಿಸ್ ಆಗುತ್ತಿರಲಿಲ್ಲ. ನೋವು ತಿಂದವರು ಏನನ್ನೂ ಮರೆಯುವುದಿಲ್ಲ. ನನಗೆ 2 ಬಾರಿ ಸಿಎಂ ಆಗುವ ಅವಕಾಶ ತಪ್ಪಿತ್ತು ಎಂದು ಸಿದ್ದರಾಮಯ್ಯ, ಎಚ್ಡಿಕೆಗೆ ತಿರುಗೇಟು ನೀಡಿದರು.

ಪುಣ್ಯತಿಥಿ ಕಾರ್ಯಕ್ರಮದಲ್ಲಿ ದಾಂಧಲೆ
ಕೆಲವು ದಿನಗಳ ಹಿಂದೆ ಬಿಬಿಎಂಪಿ ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ಶಾಸಕ ಗೋಪಾಲಯ್ಯ ಬೆಂಬಲಿಗರು, ಕಾಂಗ್ರೆಸ್ ಮುಖಂಡ ನೆ.ಲ. ನರೇಂದ್ರ ಬಾಬು ಸಹೋದರನ ಪುಣ್ಯತಿಥಿಯ ವೇಳೆ ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನುವ ಆರೋಪವಿತ್ತು. ಗೋಪಾಲಯ್ಯ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಮುಖಂಡರನ್ನು ವಾಚಾಮಗೋಚರವಾಗಿ ನಿಂದಿಸಿದ್ದರೂ ಕೂಡಾ. ಈಗ ಬಿಬಿಎಂಪಿಯಲ್ಲಿನ ದೋಸ್ತಿಯಲ್ಲಿ ಗೋಪಾಲಯ್ಯ ಪ್ರಮುಖ ಪಾತ್ರ ವಹಿಸಿರುವುದು ಕಾಲದ ಮಹಿಮೆ ಎನ್ನಬಹುದೇ?

ಬಾಲಗಂಗಾಧರ ನಾಥ ಸ್ವಾಮಿ
ಸ್ವಾಮೀಜಿಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದಿರಿ. ಸ್ವಾಮೀಜಿಯವರನ್ನು ರಾಜಕಾರಣಿ ಮಾಡಲು ಹೊರಟಿದ್ದು, ನಾನಾ ನೀವಾ? ಸ್ವಾಮೀಜಿಯವರ ಮೇಲೆ ಮೊಕದ್ದಮೆ ದಾಖಲಿಸಿದಿರಿ. ಈ ಕೊರಗಿನಿಂದಲೇ ಸ್ವಾಮೀಜಿ ನಿಧನರಾಗಿದ್ದು ಎಂದು ಡಿಕೆಶಿ, ಎಚ್ಡಿಕೆ ವಿರುದ್ದ ಹರಿಹಾಯ್ದರು.

ಸಾತನೂರಿನ ಚಿತ್ರಮಂದಿರ
ಕುಂಬಳಕಾಯಿ ಕಳ್ಳ ಎಂದರೆ ಡಿಕೆ ಶಿ ಹೆಗಲ ಮುಟ್ಟಿ ನೋಡಿಕೊಳ್ಳುತ್ತಾರೆ. ಸಾತನೂರಿನ ಚಿತ್ರಮಂದಿರದಲ್ಲಿ ಡಿ ಕೆ ಅವರು ಯಾವ ಸಿನಿಮಾ ತೋರಿಸುತ್ತಿದ್ದರು ಎನ್ನುವುದನ್ನು ರಾಜ್ಯದ ಜನತೆಗೆ ಮೊದಲು ತಿಳಿಸಲಿ. ನಾನು ಡಿ ಕೆ ಶಿವಕುಮಾರ್ ಅವರಿಗೆ ಮಹೂರ್ತ ಫಿಕ್ಸ್ ಮಾಡುವಷ್ಟು ದೊಡ್ಡವನಲ್ಲ. ತಪ್ಪು ಮಾಡಿದವನಿಗೆ ಶಿಕ್ಷೆಯಾಗಲೇ ಬೇಕು, ಡಿಕೆಶಿಗೆ ದೇವರೇ ಮಹೂರ್ತ ಫಿಕ್ಸ್ ಮಾಡುತ್ತಾರೆಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.












Click it and Unblock the Notifications