ಕಾಂಗ್ರೆಸ್ಗೆ ಒಕ್ಕಲಿಗರ ಮೇಲೆ ಒಲವಿದ್ದರೆ ಅವರನ್ನೇ ಸಿಎಂ ಮಾಡಲಿ: ಬಿಜೆಪಿ
ಬೆಂಗಳೂರು, ಸೆಪ್ಟಂಬರ್ 18: ರಾಜ್ಯದಲ್ಲಿ ಹೆಚ್ಚಿರುವ ಜನಸಂಖ್ಯೆ ಪೈಕಿ ಒಕ್ಕಲಿಗ ಮತದಾರರು ಹೌದು. ಒಕ್ಕಲಿಗರನ್ನು ಕಾಂಗ್ರೆಸ್ ಒಂದೊಮ್ಮೆ ದೂರುವ, ಒಂದೊಮ್ಮೆ ಗೌರವ ಕೊಡುವ ಮಾತನಾಡುತ್ತಿದೆ. ನಿಮಗೆ ಒಕ್ಕಲಿಗರ ಮೇಲೆ ಅಷ್ಟು ಒಲವಿದ್ದರೆ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಿ ಒಕ್ಕಲಿಗರನ್ನೇ ಮುಖ್ಯಮಂತ್ರಿ ಮಾಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ಒಕ್ಕಲಿಗ ಸಮುದಾಯದ ಸರ್ವೋಚ್ಛ ನಾಯಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಗೌರವ ಹಾಳು ಮಾಡಲು ಕಾಂಗ್ರೆಸ್ ನಾಯಕರು ಯತ್ನಿಸಿದ್ದಾರೆ ಎಂದು ಆರೋಪಿಸಿದರು. ನಿಮಗೆ ಅವರ ಮೇಲೆ ಅಷ್ಟು ಒಲವಿದ್ದಲ್ಲಿ, ಒಕ್ಕಲಿಗ ಸಮುದಾಯವರನ್ನೇ ಸಿಎಂ ಮಾಡಿ ಎಂದರು.

ರಾಜ್ಯದಲ್ಲಿ ಸಿಎಂ ಸ್ಥಾನದ ವಿಚಾರ ಚರ್ಚೆ ಆದ ಮಧ್ಯಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪೇಪರ್, ಪೆನ್ನು ಹಿಡಿದುಕೊಂಡು ಅಮೆರಿಕಕ್ಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಿಚಾರಣೆ ನಡೆಸುವ ಮೊದಲೇ ಕಾಂಗ್ರೆಸ್ ಸರ್ಕಾರ ತಪ್ಪಿತಸ್ಥರಿಗೆ ಕ್ಲೀನ್ ಚಿಟ್ ನೀಡುತ್ತಿದೆ. ಮೊದಲು ತನಿಖೆ ನಡೆಸಿ, ನಂತರ ತಪ್ಪಿತಸ್ಥರು ಯಾರೆಂದು ತೀರ್ಮಾನಿಸಬೇಕು. ಅದನ್ನು ಬಿಟ್ಟು ಕ್ಲೀನ್ ಚಿಟ್ ನೀಡಬಾರದು ಎಂದು ಅವರು ದೂರಿದರು.
ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಆಕ್ರೋಶ
ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಶಕ್ತಿ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದಾಗಲೂ ಕ್ಲಿನ್ ಚಿಟ್ ಕೊಟ್ಟಂತೆಯೇ ಮಾತನಾಡಿದ್ದರು. ಇನ್ನು ಬಾಂಬ್ ಸ್ಫೋಟವಾದಾಗಲೂ ಅದು ವ್ಯಾಪಾರದ ಜಗಳ ಎಂದು ಇದೇ ಕಾಂಗ್ರೆಸ್ ನಾಯಕರು ಹೇಳಿಕೆ ಕೊಟ್ಟಿದ್ದರು. ಕುಕ್ಕರ್ ಬ್ಲಾಸ್ಟ್ ಆದಾಗಲೂ ಇದೇ ರೀತಿ ಮಾತನಾಡಿದ್ದರು. ಪಾಕಿಸ್ಥಾನ ಪರ ಜೈಕಾರ ಹಾಕಿದವರ ಪರ ಸಚಿರೇ ಸಮರ್ಥನೆ ಕೊಟ್ಟಿದ್ದರು ಎಂದು ಅವರು ಕಿಡಿ ಕಾರಿದರು.
ಭಾರತವನ್ನು ಎರಡು ಭಾಗ ಮಾಡಿದ ಕಾಂಗ್ರೆಸ್ ಮತ್ತೆ ತಲೆಯತ್ತಿ ಮಂಡ್ಯದಲ್ಲಿ ಕೋಮುಗಲಭೆಗೆ ಕಾರಣವಾಗಿದೆ. ವಿದೇಶಕ್ಕೆ ಹೋದ ರಾಹುಲ್ ಗಾಂಧಿ, ಭಾರತದ ವಿರುದ್ಧ ಮಾತಾಡುವುದರ ಜೊತೆಗೆ ಮೀಸಲಾತಿ ತೆಗೆದುಹಾಕುವ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್ ಆಡಳಿತ ಬರುವ ಕಡೆಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ಹಬ್ಬದ ವಾತಾವರಣ ಇರುತ್ತದೆ. ಸವಾಲು ಹಾಕುವವರನ್ನು ಜೈಲಿಗೆ ಹಾಕುವ ಬದಲು ಪೊಲೀಸರು ಅವರನ್ನು ಕರೆದು ಕಾಫಿ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.












Click it and Unblock the Notifications