'ಆಪರೇಷನ್ ಕಮಲ'ಕ್ಕೆ 'ಆಪರೇಷನ್ ಕೈ'! ಹೈಕಮಾಂಡ್ ಮುಯ್ಯಿಗೆ ಮುಯ್ಯಿ?
ಬೆಂಗಳೂರು, ಸೆಪ್ಟೆಂಬರ್ 12: ಕರ್ನಾಟಕ ಸಮ್ಮಿಶ್ರ ಸರ್ಕಾರ ಬೀಳುವ ಕುರಿತು ವದಂತಿ ಹಬ್ಬುತ್ತಿದ್ದಂತೆಯೇ ಆಪರೇಷನ್ ಕಮಲದ ಆತಂಕ ಮೈತ್ರಿ ಪಕ್ಷಗಳಲ್ಲಿ ಆವರಿಸಿದೆ.
ಕಾಂಗ್ರೆಸ್ಸಿನ ಸುಮಾರು 14 ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂಬ ವದಂತಿ ಮತ್ತು ಅದಕ್ಕೆ ಪೂರಕವೆನ್ನಿಸುವಂತೆ ನಡೆದ ಕೆಲವು ಘಟನೆಗಳು ಕಾಂಗ್ರೆಸ್ ಹೈಕಮಾಂಡ್ ನ ನಿದ್ದೆ ಕೆಡಿಸಿದೆ. ಆದರೆ ಆಪರೇಷನ್ ಕಮಲಕ್ಕೆ ಪ್ರತಿಯಾಗಿ, ಆಪರೇಷನ್ ಹಸ್ತ ನಡೆಸುವ ಮೂಲಕ ಮುಯ್ಯಿಗೆ ಮುಯ್ಯಿ ನೀತಿ ಅನುಸರಿಸಲು ಹೈಕಮಾಂಡ್ ರಾಜ್ಯದ ನಾಯಕರಿಗೆ ತಿಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿದರೆ, ಬಿಜೆಪಿಯಲ್ಲೂ ಕಾಂಗ್ರೆಸ್ಸಿಗೆ ಸೇರುವ ಶಾಸಕರಿದ್ದಾರೆ. ಅವರನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಳ್ಳಿ, ಮತ್ತು ಮಂತ್ರಿ ಸ್ಥಾನದ ಆಮಿಷವೊಡ್ಡಿ ಎಂದು ಹೈಕಮಾಂಡ್ ಹೇಳಿದೆ. ಇದರಿಂದಾಗಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಉಂಟಾಗುವ ಲಕ್ಷಣಗಳು ಕಾಣಿಸುತ್ತಿವೆ.

ಮುಯ್ಯಿಗೆ ಮುಯ್ಯಿ!
ಅಕಸ್ಮಾತ್ ಕಾಂಗ್ರೆಸ್ ನ 14 ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂಬ ಮಾತು ನಿಜವೇ ಆಗಿದ್ದಲ್ಲಿ, ಬಿಜೆಪಿಯ ಅಷ್ಟೇ ಶಾಸಕರನ್ನು ಕಾಂಗ್ರೆಸ್ ಗೆ ಸೇರಿಸಲು ಮುಂದಾಗುವಂತೆ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಅವರಿಗೆ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿ ಪಕ್ಷಕ್ಕೆ ಕರೆಸಿಕೊಳ್ಳುವಂತೆ ಅದು ಹೇಳಿದೆ. 'ಒಂದು ಜಾಗ ಖಾಲಿಯಾದರೆ, ಆ ಜಾಗಕ್ಕೆ ಮತ್ತೊಬ್ಬರು ಬಂದು ಕೂರಲು ಕಾಯುತ್ತಿದ್ದಾರೆ' ಎಂದು ಮಂಗಳವಾರ ಪತ್ರಕರ್ತರಿಗೆ ಸಚಿವ ಡಿಕೆ ಶಿವಕುಮಾರ್ ಹೇಳಿದ ಮಾತಿನ ಅರ್ಥವೂ ಇದೇ ಇದ್ದಿರಬಹುದು!

ಮಂತ್ರಿಸ್ಥಾನ ಕೈಬಿಡಲು ರೆಡಿಯಾಗಿ!
ಬಿಜೆಪಿಯಿಂದ ಬರುವ ಶಾಸಕರಿಗೆ ಮಂತ್ರಿಸ್ಥಾನ ನೀಡುವುದಕ್ಕಾಗಿ ಈಗಾಗಲೇ ಮಂತ್ರಿಸ್ಥಾನದಲ್ಲಿರುವವರು ತಮ್ಮ ಸ್ಥಾನವನ್ನು ಬಿಡಲು ರೆಡಿಯಾಗಿ ಎಂಬ ಸೂಚನೆಯನ್ನೂ ಹೈಕಮಾಂಡ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಕ್ಷದ ಬಗ್ಗೆ ನಿಷ್ಠೆ ಇರುವವರು, ಪಕ್ಷವನ್ನು ಉಳಿಸುವ ಸಲುವಾಗಿ ಈ ತ್ಯಾಗಕ್ಕೆ ಸಿದ್ಧರಾಗಿ ಎಂದು ಅದು ಮನವಿ ಮಾಡಿದೆ. ಇದರಿಂದಾಗಿ ಸಚಿವ ಸ್ಥಾನ ಸಿಕ್ಕವರೆಲ್ಲ ಆತಂಕ ಎದುರಿಸುವಂತಾಗಿದೆ.

ಜಾರಕಿಹೊಳಿ ಬ್ರದರ್ಸ್ ಗೆ ಸಿದ್ದರಾಮಯ್ಯ ಸಂದೇಶ
ಇತ್ತ ಸತೀಶ್ ಮತ್ತು ಜಾರಕಿಹೊಳಿ ಬ್ರದರ್ಸ್ ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶದಿಂದಲೇ ಸಹನೆಯ ಪಾಠ ಹೇಳಿದ್ದು, ತಾವು ವಿದೇಶದಿಂದ ಬರುವವರೆಗೂ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದಾರೆ. ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರವಾಗುವಂಥ ಯಾವುದೇ ನಿಲುವು ತಾಳಬೇಡಿ. ತಾಳ್ಮೆಯಿಂದಿರಿ ಎಂದು ಅವರು ಹೇಳಿದ್ದೆ. ವಿದೇಶದಿಂದ ಸೆ.16 ಕ್ಕೆ ಸಿದ್ದರಾಮಯ್ಯ ಅವರು ವಾಪಸ್ಸಾಗಲಿದ್ದು, ಆ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆ ನಡೆಯಲಿದೆ ಎನ್ನಲಾಗುತ್ತಿದೆ.

ಡಿಕೆಶಿ ಖಡಕ್ ವಾರ್ನಿಂಗ್
ಈ ಎಲ್ಲಾ ಬೆಳವಣಿಗೆಯ ನಂತರವೂ ಸುಮ್ಮನೆ ಇದ್ದ ವೈದ್ಯಕೀಯ ಶಿಕ್ಷಣ ಮತ್ತು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಇದೀಗ ಅಖಾಡಕ್ಕಿಳಿಯುವ ಸೂಚನೆ ನೀಡಿದ್ದಾರೆ. ಆಪರೇಷನ್ ಕಮಲದ ಬಗ್ಗೆ ಮಾತನಾಡಿದ ಅವರು, 'ಬಿಜೆಪಿಯವರು ನಮ್ಮ ಒಂದೇ ಒಂದು ಪಾನ್ ಅನ್ನು ಅಲ್ಲಾಡಿಸಲಿ, ಆಮೇಲೆ ನೋಡೋಣ. ಅದಕ್ಕೆ ಪ್ರತಿನಡೆ ಇಡುವುದು ಹೇಗೆ ಎಂಬುದು ನಮಗೆ ಗೊತ್ತಿದೆ. ಆದರೆ ನಮ್ಮ ಸ್ಟ್ರಾಟಜಿ ಏನು ಎಂಬುದನ್ನು ಈಗಲೇ ಬಹಿರಂಗ ಪಡಿಸುವುದಿಲ್ಲ' ಎಂದಿದ್ದಾರೆ.












Click it and Unblock the Notifications