ಕೆಪಿಸಿಸಿ ಅಧ್ಯಕ್ಷರಿಗೆ ಛೀಮಾರಿ ಹಾಕಿತೇ ಕಾಂಗ್ರೆಸ್ ಹೈಕಮಾಂಡ್?
ನವದೆಹಲಿ, ಬೆಂಗಳೂರು, ಜುಲೈ 16: ಮಂಗಳೂರು ಐಜಿಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರು ನೀಡಿದ ಹೇಳಿಕೆಗೆ ಕಾಂಗ್ರೆಸ್ ಹೈಕಮಾಂಡ್ ಛೀಮಾರಿ ಹಾಕಿದೆ ಎಂದು ವರದಿಯಾಗಿದೆ.
ಎಂಕೆ ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ, ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಗೃಹ ಸಚಿವರೂ ಆಗಿರುವ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸದನದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ಟೀಕೆಗೊಳಗಾಗಿತ್ತು. (ಗಣಪತಿ ಆತ್ಮಹತ್ಯೆ, ಪರಮೇಶ್ವರ್ ಹೇಳಿಕೆ)
ಪರಮೇಶ್ವರ್ ಸದನದಲ್ಲಿ ನೀಡಿದ ಹೇಳಿಕೆ ಬೆನ್ನಲ್ಲೇ, ಮುಖ್ಯಮಂತ್ರಿ ಹೈಕಮಾಂಡಿಗೆ ದೂರು ನೀಡಿದ್ದರು. ತಮ್ಮೊಂದಿಗೆ ಚರ್ಚಿಸದೇ, ಏಕಪಕ್ಷೀಯವಾಗಿ ಪರಮೇಶ್ವರ್ ಹೇಳಿಕೆ ನೀಡಿದ್ದರಿಂದ ಸರಕಾರಕ್ಕೆ ಇಕ್ಕಟ್ಟಿಗೆ ಸಿಲುಕುವಂತಾಯಿತು ಎಂದು ಸಿದ್ದರಾಮಯ್ಯ ದೂರಿದ್ದರು ಎನ್ನಲಾಗುತ್ತಿದೆ.
ಕೌಟುಂಬಿಕ ಕಲಹ ಎಂದು ಗಣಪತಿ ಪತ್ನಿಯ ಬಗ್ಗೆ ನಿಮ್ಮ ಬೇಜವಾಬ್ದಾರಿ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗಿದೆ. ನಿಮ್ಮ ತಪ್ಪಿನಿಂದಾಗಿ ಸಿಎಂ ಕ್ಷಮೆಯಾಚಿಸುವಂತಾಯ್ತು ಎಂದು ಹೈಕಮಾಂಡ್ ಛೀಮಾರಿ ಹಾಕಿದೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.
ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ ಎಂದು ಮೇಲ್ನೋಟ ಕಂಡು ಬಂದಿದೆ. ಹೀಗಾಗಿ ಈ ಪ್ರಕರಣದಲ್ಲಿ ರಾಜಕೀಯ ಒತ್ತಡ, ಕಿರುಕುಳ ಎಂಬ ಆರೋಪದಲ್ಲಿ ಹುರುಳಿಲ್ಲ.
ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಗಣಪತಿ ಅವರ ವಿರುದ್ಧ ದಾಖಲಾದ ಪ್ರಕರಣಗಳು ಅವರನ್ನು ಕಾಡುತ್ತಿತ್ತು ಎಂದು ಗೃಹ ಸಚಿವ ಜಿ ಪರಮೇಶ್ವರ್ ಸದನದಲ್ಲಿ ಹೇಳಿಕೆ ನೀಡಿದ್ದರು. (ಗಣಪತಿ ಅವರ ಮೇಲಿದ್ದ ಆರೋಪಗಳು)
ಕೆಲವು ವರ್ಷಗಳಿಂದ ಗಣಪತಿ ಅವರು ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿದ್ದರು, ಖಿನ್ನತೆ, ನರದೌರ್ಬಲ್ಯಗಳಿಂದ ಬಳಲುತ್ತಿದ್ದರು ಎಂದು ಗಣಪತಿ ಅವರ ಸೋದರ ಡಿವೈಎಸ್ಪಿ ತಮ್ಮಯ್ಯ ಹಾಗೂ ಗಣಪತಿ ಅವರ ತಂದೆ ಕೂಡಾ ಹೇಳಿದ್ದಾರೆ.