ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಟೆನ್ಷನ್; ಸಚಿವರ ಕಾರ್ಯವೈಖರಿ ಮೇಲೆ ಹೈಕಮಾಂಡ್ ಹದ್ದಿನ ಕಣ್ಣು!
ಬೆಂಗಳೂರು,ಜುಲೈ 11: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಇದೀಗ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆಯುತ್ತಾ ಬಂದಿದ್ದು, ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಹೈಕಮಾಂಡ್ ಶಾಕ್ ನೀಡಿದೆ.
ಹೌದು, ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲಿಯೂ ಹೆಚ್ಚಿನ ಸ್ಥಾನವನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿರುವ ಕಾಂಗ್ರೆಸ್, ಸರ್ಕಾರ ರಚನೆಯ ಆರಂಭದಿಂದಲೇ ಸಚಿವರ ಕಾರ್ಯವೈಖರಿಯ ಮೇಲೆ ಕಣ್ಣೀಟ್ಟಿದೆ. ಏಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಳೆದುಕೊಂಡ ಸ್ಥಾನವನ್ನ ಮರಳಿ ಪಡೆಯುವ ಪ್ಲಾನ್ ನಡೆಸಿದ್ದು, ಅತೀ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಹೈಕಮಾಂಡ್ ರಾಜ್ಯ ಸಚಿವರಿಗೆ ಸೂಚಿಸಿದ್ದು, ಉತ್ತಮ ಆಡಳಿತ ನೀಡಿ, ಗ್ಯಾರಂಟಿ ಘೋಷಣೆಗಳನ್ನ ಮನೆ ಮನೆಗೂ ತಲುಪಿಸುವ ನಿಟ್ಟಿನಲ್ಲಿ ಶ್ರಮವಹಿಸಲು ಸೂಚಿಸಿದೆ.

ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್, ಇದೀಗ ಸಿದ್ದರಾಮಯ್ಯ ಸಚಿವರ ತಲೆ ಮೇಲೆ ತೂಗುಗತ್ತಿ ಇದೆ. ಹೌದು ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆಯಲಿದೆ. ಸಚಿವರು ನಡೆಸಿದ ಸಭೆ, ಇಲಾಖೆಯಲ್ಲಿ ಯಾವ ರೀತಿಯ ಕೆಲಸ ನಡೆದಿದೆ ಹಾಗೂ ಭೇಟಿ ಮಾಡಿದ ಪ್ರಮುಖರ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆಯಲಿದೆ ಎಂದು ಹೇಳಲಾಗಿದೆ.
ಮುಂದಿನ ಚುನಾವಣೆ ದೃಷ್ಟಿಯಿಂದ ಸಚಿವರ ಕಾರ್ಯವೈಖರಿ ಮೇಲೆ ಹೈಕಮಾಂಡ್ ಹದ್ದಿನ ಕಣ್ಣು ಇಟ್ಟಿದ್ದು, ಪ್ರತಿ ತಿಂಗಳೂ ಸಚಿವರು ತಮ್ಮ ಸಾಧನೆ ಸಭೆಗಳ ಬಗ್ಗೆ ವರದಿ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಸಚಿವ ಪ್ರಿಯಾಂಕ ಖರ್ಗೆ, ಸಚಿವ ಜಮೀರ್ ಅಹಮದ್ ಖಾನ್ ತಮ್ಮ ಮೊದಲ ತಿಂಗಳ ವರದಿ ಪ್ರಕಟಿಸಿದ್ದು, ಉಳಿದ ಸಚಿವರ ಮಾಹಿತಿ ಬಗ್ಗೆ ಹೈಕಮಾಂಡ್ ವರದಿ ಕೇಳಿದೆ.
ಇತ್ತ ಲೋಕಸಭೆ ಚುನಾವಣೆ ದೃಷ್ಟಿಯಿಂದ ಆಡಳಿತ ಹಿಡಿದಲ್ಲಿಟ್ಟುಕೊಳ್ಳಲು ಸಚಿವರ ಮೇಲೆ ಹೈಕಮಾಂಡ್ ಹಿಡಿತ ಸಾಧಿಸಲಿದೆ. ಈಗಾಗಲೇ ಕೆಲ ಇಲಾಖೆಯ ವಿರುದ್ದ ಆರೋಪ ಕೇಳಿರುತ್ತಿದ್ದು, ಈ ಆರೋಪಗಳೇ ಮುಂದಿನ ದಿನಗಳಲ್ಲಿ ವಿಪಕ್ಷಗಳಿಗೆ ಅಸ್ತ್ರವಾಗಲಿದೆ ಎಂದು ಹೈಕಮಾಂಡ್ ಎಚ್ಚರಿಸಿದೆ, ಸರ್ಕಾರಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ನೋಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ.
ಒಂದು ವೇಳೆ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳದೇ ಅಕಸ್ಮಾತ್ ಕಳಪೆ ಪ್ರದರ್ಶನ ತೋರುವ ಸಚಿವರ ಮಾಹಿತಿ ಬಂದರೆ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಏಕೆಂದರೆ ಸಚಿವರ ಕಾರ್ಯವೈಖರಿಗಳು ಹಾಗೂ ಪಕ್ಷದ ಸಂಘಟನೆಯೂ ಲೋಕಸಭಾ ಚುನಾವಣೆಯ ಮೇಲೆ ಹೆಚ್ಚು ಪರಿಣಾಯ ಬೀರಲಿದೆ. ಹೀಗಾಗಿ ಸಚಿವರಿಗೆ ಹೈಕಮಾಂಡ್ ನಡೆಯೇ ದೊಡ್ಡ ಟೆನ್ಷನ್ ಗೆ ಕಾರಣವಾಗಿದೆ.
ಈಗಾಗಲೇ ಲೋಕಸಭಾ ಚುನಾವಣೆಗೆ ಅನ್ನ ಭಾಗ್ಯದ ಅಕ್ಕಿ ವಿತರಣೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಆರೋಪವನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ವಿಪಕ್ಷ ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಪ್ರಶ್ನಿಸಿದರೆ ದಾಖಲೆ ಸಮೇತ ತೋರಿಸಲು ಸಿಎಂ ಸಿದ್ದರಾಮಯ್ಯ ಟೀಂ ಸಿದ್ದವಾಗಿದೆ. ಇತ್ತ ಸಚಿವರ ಕಾರ್ಯವೈಖರಿಯ ಮೇಲೆ ಸಚಿವ ಸಂಪುಟ ಬದಲಾವಣೆಯಂತ ಸಾಧ್ಯತೆ ಎದುರಾದರೆ ಪ್ರಗತಿ ಪರಿಶೀಲನೆ ಆಧಾರದ ಮೇಲೆ ಹೈಕಮಾಂಡ್ ಮುಂದಿನ ನಿರ್ಣಯವನ್ನ ತೆಗೆದುಕೊಳ್ಳಲಿದೆ.












Click it and Unblock the Notifications