ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಕ್ಯೂ ನಿಂತವರು ಯಾರ್ಯಾರು?

ಬೆಂಗಳೂರು, ಜೂನ್ 02: ಕಾಂಗ್ರೆಸ್‌-ಜೆಡಿಎಸ್‌ 22:12 ಅನುಪಾತದಲ್ಲಿ ಖಾತೆಗಳನ್ನು ಹಂಚಿಕೊಂಡಿದೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಈಗಾಗಲೇ ಘೋಷಣೆ ಕೂಡ ಆಗಿದೆ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಇದು ಸಾಧ್ಯವಾ? ಎನಿಸುತ್ತಿದೆ.

ಖಾತೆ ಹಂಚಿಕೆ ಸಂಬಂಧ ಜೆಡಿಎಸ್‌ನಲ್ಲಿ ಮಂದಗಾಮಿನಿಯಾಗಿ ಹರಿಯುತ್ತಿರುವ ಅಸಮಾಧಾನ ಕಾಂಗ್ರೆಸ್‌ನಲ್ಲಿ ಬಹಿರಂಗವಾಗಿದೆ. ಅದಕ್ಕೆ ತುಪ್ಪ ಸುರಿದಿರುವುದು ಕಾಂಗ್ರೆಸ್‌ ಚಕ್ರವರ್ತಿ ರಾಹುಲ್ ಗಾಂಧಿ ನೀಡಿರುವ ಹೊಸ ಆಜ್ಞೆ. 'ಹಿರಿಯರಿಗೆ ಅವಕಾಶ ಇಲ್ಲ, ಯುವಕರಿಗೆ ಮಾತ್ರ ಮಣೆ' ಎಂದಿರುವುದು ಕಾಂಗ್ರೆಸ್ ಹಳೆ ಹುಲಿಗಳನ್ನು ಕೆರಳಿಸಿದೆ.

ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತಿದೆ. 78 ಶಾಸಕರಲ್ಲಿ ಹಿರಿಯರ ಸಂಖ್ಯಯೇ ಅರ್ಧಕ್ಕೂ ಹೆಚ್ಚಿದ್ದು ಹಲವು ಹಿರಿಯರು ಖಾತೆಗಾಗಿ ಕ್ಯಾತೆ ತೆಗೆದವರೇ ಆಗಿದ್ದಾರೆ.

ಕಾಂಗ್ರೆಸ್‌ ಜೋಳಿಗೆಗೆ ಬಿದ್ದಿರುವ 22 ಸಚಿವ ಸ್ಥಾನಕ್ಕೆ ಯಾರು ಯಾರು ಕೈ ಚಾಚಿ ಕೂತಿದ್ದಾರೆ ಪಟ್ಟಿ ಇಲ್ಲಿದೆ ನೋಡಿ...

ಸೋಲಿಲ್ಲದ ಸರದಾರ ಆರ್‌.ವಿ.ದೇಶಪಾಂಡೆ

ಸೋಲಿಲ್ಲದ ಸರದಾರ ಆರ್‌.ವಿ.ದೇಶಪಾಂಡೆ

ಹಿರಿಯರಿಗೆ ಮಂತ್ರಿ ಗಿರಿ ಇಲ್ಲ ಎಂಬ ರಾಹುಲ್ ಗಾಂಧಿ ಮಾತು ದಿಟವಾದರೆ ಮೊದಲು ಸ್ಥಾನ ಕಳೆದುಕೊಳ್ಳುವ ಪಟ್ಟಿಯಲ್ಲಿದ್ದಾರೆ ಆರ್‌.ವಿ.ದೇಶಪಾಂಡೆ. ಸತತ ಏಳು ಬಾರಿ ಗೆದ್ದಿರುವ ಆರ್‌.ವಿ.ದೇಶಪಾಂಡೆ ಈ ಬಾರಿ ಪ್ರಭಾವಿ ಖಾತೆ ಗಳಿಸಿಕೊಳ್ಳುವ ಉಮೇದಿನಲ್ಲಿದ್ದಾರೆ. ಖಾತೆ ದೊರೆಯದಿದ್ದರೆ ಅಸಮಾಧಾನಗೊಳ್ಳುವುದು ದಿಟವಾದರೂ ಇವರು ರಂಪ-ರಾಮಾಯಣವೇನೂ ಮಾಡಲಾರರು.

ಶಾಮನೂರು ಶಿವಶಂಕರಪ್ಪಗೂ ಬೇಕು ಖಾತೆ

ಶಾಮನೂರು ಶಿವಶಂಕರಪ್ಪಗೂ ಬೇಕು ಖಾತೆ

ಕಾಂಗ್ರೆಸ್‌ನ ಈಗಿನ ಅತ್ಯಂತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು. ಮಧ್ಯ ಕರ್ನಾಟಕ ಭಾಗದ ಕಾಂಗ್ರೆಸ್‌ ಪ್ರಮುಖ ನಾಯಕ ಅಲ್ಲದೆ ಪ್ರಬಲ ಲಿಂಗಾಯತ ಸಮುದಾಯದ ನಾಯಕ ಕೂಡ ಹಾಗಾಗಿ ಅವರೂ ಸಹ ಪ್ರಭಾವಿ ಖಾತೆಯನ್ನೇ ಬೇಡುತ್ತಿದ್ದಾರೆ. ಇವರಿಗೂ ಈ ಬಾರಿ ನಿರಾಸೆ ಕಾಡಲಿದೆ.

ನುಂಗಲಾಗದ, ಉಗುಳಲೇಬಾರದ ಡಿಕೆಶಿ

ನುಂಗಲಾಗದ, ಉಗುಳಲೇಬಾರದ ಡಿಕೆಶಿ

ಸಚಿವ ಸಂಪುಟ ವಿಸ್ತರಣೆ ಶುರುವಾದಾಗಿನಿಂದಲೂ ಡಿಕೆ ಶಿವಕುಮಾರ್ ಅವರು ಅಸಮಾಧಾನದಿಂದಲೇ ಇದ್ದಾರೆ. ಅವರು ಪ್ರಭಾವಿ ಖಾತೆಯೊಂದನ್ನು ಅಪೇಕ್ಷಿಸಿದ್ದರು ಆದರೆ ಕಾಂಗ್ರೆಸ್‌ಗೆ ಅದನ್ನು ನೀಡಲಾಗುತ್ತಿಲ್ಲ ಇದು ಡಿಕೆಶಿ ಅವರಲ್ಲಿ ಅಸಮಾಧಾನ ಹುಟ್ಟು ಹಾಕಿದೆ. ಕಾಂಗ್ರೆಸ್‌ನ ಎಲ್ಲರಿಗಿಂತಲೂ ಸಚಿವ ಸ್ಥಾನದ ರೇಸಿನಲ್ಲಿ ಮುಂದೆ ಇರುವ ಡಿಕೆ ಶಿವಕುಮಾರ್ ಅವರನ್ನು ಹೇಗೆ ಹೈಕಮಾಂಡ್ ಸಮಾಧಾನ ಪಡಿಸುತ್ತದೆಯೊ ಕಾದು ನೋಡಬೇಕು. ಡಿಕೆಶಿಗೆ ಸಚಿವ ಸ್ಥಾನ ಸಿಗದ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಪಟ್ಟವಾದರೂ ದೊರಕಿಯೇ ತೀರುತ್ತದೆ ಎನ್ನಲಾಗುತ್ತಿದೆ.

ಯು.ಟಿ.ಖಾದರ್ ಅಥವಾ ತನ್ವೀರ್ ಸೇಠ್

ಯು.ಟಿ.ಖಾದರ್ ಅಥವಾ ತನ್ವೀರ್ ಸೇಠ್

ಈ ಬಾರಿ ಕಾಂಗ್ರೆಸ್‌ನಲ್ಲಿ ನಾಲ್ಕು ಜನ ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಕೆ.ಫಾತಿಮಾ, ತನ್ವಿರ್ ಸೇಠ್, ಯು.ಟಿ.ಖಾದರ್, ಜಮೀರ್ ಅಹ್ಮದ್‌. ಇದರಲ್ಲಿ ಸಚಿವ ಸ್ಥಾನದ ರೇಸ್‌ನಲ್ಲಿರುವುದು ಯು.ಟಿ.ಖಾದರ್ ಮತ್ತು ತನ್ವೀರ್ ಸೇಠ್ ಇಬ್ಬರೇ. ಇಬ್ಬರೂ ಕಳೆದ ಬಾರಿ ಸಚಿವರಾಗಿದ್ದವರೇ. ಯುಟಿ ಖಾದರ್ ಉತ್ತಮವಾಗಿ ಕಾರ್ಯ ನಿರ್ವಹಿಸಿ ಹೆಸರು ಗಳಿಸಿದರೆ, ಶಿಕ್ಷಣ ಮಂತ್ರಿಯಾಗಿದ್ದ ತನ್ವೀರ್ ಸೇಠ್‌ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದವು. ಹಾಗಾಗಿ ಈ ಬಾರಿ ಮತ್ತೆ ಯುಟಿ ಖಾದರ್‌ಗೆ ಮಣೆ ಹಾಕುವ ಸಾಧ್ಯತೆ ಇದೆ. ಆದರೆ ತನ್ವೀರ್‌ ಸೇಠ್‌ ಅವರೂ ಕೂಡ ಕೈ ಕಟ್ಟಿ ಕೂರುವರಲ್ಲ ಅವರೂ ಖಾತೆ ರೇಸ್‌ನಲ್ಲಿ ಬಲ ಪ್ರದರ್ಶನ ಮಾಡಿಯೇ ತೀರುತ್ತಾರೆ.

ಎಂ.ಬಿ.ಪಾಟೀಲ್‌ಗೂ ಈ ಬಾರಿ ಸಚಿವ ಸ್ಥಾನ ಡೌಟು

ಎಂ.ಬಿ.ಪಾಟೀಲ್‌ಗೂ ಈ ಬಾರಿ ಸಚಿವ ಸ್ಥಾನ ಡೌಟು

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲರು ಕೂಡ ಈ ಬಾರಿ ಸಚಿವ ಸ್ಥಾನದ ರೇಸಿನಲ್ಲಿರುವ ಉತ್ತರ ಕರ್ನಾಟಕದ ಪ್ರಮುಖ ನಾಯರಲ್ಲೊಬ್ಬರು ಆದರೆ ಅವರಿಗೆ ಈ ಬಾರಿ ಮಣೆ ಹಾಕುವುದು ಕಷ್ಟ ಸಾಧ್ಯ. ಅವರ ಸಚಿವ ಸ್ಥಾನ ಪ್ರಿಯಾಂಕ್ ಖರ್ಗೆ ಪಾಲಾಗುವ ಸಾಧ್ಯತೆ ಇರುವ ಕಾರಣ ಅವರು ಈ ಬಾರಿ ಶಾಸಕ ಸ್ಥಾನಕ್ಕೆ ಮಾತ್ರವೇ ಅಂಟಿಕೊಂಡಿರಬೇಕಾದ ಅನಿವಾರ್ಯತೆ ಇದ್ದಹಾಗಿದೆ. ಎಂಬಿ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಸಿದ್ದರಾಮಯ್ಯ ಅವರ ವಿರೋಧವೇ ಇದೆ ಎಂದೂ ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರಿಗೂ ಇಲ್ಲ ಅವಕಾಶ?

ಸಿದ್ದರಾಮಯ್ಯ ಅವರಿಗೂ ಇಲ್ಲ ಅವಕಾಶ?

ಕಳೆದ ಬಾರಿಯ ಕಾಂಗ್ರೆಸ್ ಹೀರೋ ಸಿದ್ದರಾಮಯ್ಯ ಅವರಿಗೂ ಸಚಿವ ಸ್ಥಾನದ ಕುರ್ಚಿ ನೀಡುವ ಸಾಧ್ಯತೆ ಕಡಿಮೆ. ಆದರೆ ಅವರಿಗೆ ಸಮನ್ವಯ ಸಮಿತಿ ಸ್ಥಾನ ನೀಡಿ ಅವರ ಘನತೆಗೆ ಚ್ಯುತಿ ಬರದಂತೆ ಕಾಂಗ್ರೆಸ್ ವ್ಯವಸ್ಥೆ ಮಾಡಿದೆ. ಹಣಕಾಸು ಖಾತೆ ಕಾಂಗ್ರೆಸ್‌ ಕಡೆ ಬಂದಿದ್ದರೆ ಆ ಸ್ಥಾನ ಸಿದ್ದರಾಮಯ್ಯ ಅವರಿಗೆ ದೊರಕುತ್ತಿತ್ತೇನೋ ಆದರೆ ಹಾಗೆ ಹಾಗಿಲ್ಲ. ಆದರೆ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರ ಪರವಾಗಿ ವೈದ್ಯಕೀಯ ಖಾತೆಗಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ.

ಬಸವನ ಬಾಗೇವಾಡಿಯ ಶಿವಾನಂದ ಪಾಟೀಲ್

ಬಸವನ ಬಾಗೇವಾಡಿಯ ಶಿವಾನಂದ ಪಾಟೀಲ್

ಬಸವನಬಾಗೇವಾಡಿ ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಹಲವು ವರ್ಷಗಳಿಂದ ಚುನಾವಣಾ ರಾಜಕೀಯದಲ್ಲಿರುವ ಶಿವಾನಂದ ಪಾಟೀಲ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ತಮಗಿಂತ ಕಿರಿಯರಾದ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿದಾಗಲೇ ಶಿವಾನಂದ ಪಾಟೀಲರು ಕಾಂಗ್ರೆಸ್‌ ನಾಯಕರ ಮೇಲೆ ಗರಂ ಆಗಿದ್ದರು. ಈ ಬಾರಿಯೂ ಸ್ಥಾನ ತಪ್ಪಿದರೆ ಮುನಿಸು ಖಂಡಿತ.

ಎಂಟಿಬಿ ನಾಗರಾಜುಗೆ ಬೇಕಿದೆ ಕೆಂಪು ಕಾರು

ಎಂಟಿಬಿ ನಾಗರಾಜುಗೆ ಬೇಕಿದೆ ಕೆಂಪು ಕಾರು

ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು ಅವರು ಎರಡು ಬಾರಿ ಕ್ಷೇತ್ರದಿಂದ ಗೆದ್ದಿದ್ದಾರೆ. ಕಳೆದ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಖಾತೆಗೆ ಫೈಟ್ ಮಾಡಿದ್ದರು ಆದರೆ ಸಿಗಲಿಲ್ಲ. ಅದರ ಬದಲಿಗೆ ಬಯಪ್ಪಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಕಣ್ಣೊರೆಸಲಾಗಿತ್ತು. ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ಇವರು ಈ ಬಾರಿ ಬಿಗಿಯಾಗಿಯೇ ಪಟ್ಟು ಹಿಡಿದಿದ್ದಾರೆ.

ಎಚ್‌.ಕೆ.ಪಾಟೀಲರಿಗೂ ಬೇಕಿದೆ ಪ್ರಭಾವಿ ಖಾತೆ

ಎಚ್‌.ಕೆ.ಪಾಟೀಲರಿಗೂ ಬೇಕಿದೆ ಪ್ರಭಾವಿ ಖಾತೆ

ಗದಗದ ಎಚ್‌.ಕೆ.ಪಾಟೀಲ್ ಅವರೂ ಸಹ ಈ ಬಾರಿ ಪ್ರಭಾವಿ ಖಾತೆಗಾಗಿ ಕಾಂಗ್ರೆಸ್ ಮುಖಂಡರಲ್ಲಿ ಬೇಡಿಕೆ ಇಟ್ಟಿದ್ದಾರೆ. ಕಳೆದ ಬಾರಿ ಗ್ರಾಮೀಣ ಖಾತೆ ನಿಭಾಯಿಸಿದ್ದ ಪಾಟೀಲು ಈ ಬಾರಿ ಪ್ರಭಾವಿ ಖಾತೆ ಬೇಡಿಕೆ ಇಟ್ಟಿದ್ದಾರೆ. ಹಲವು ಬಾರಿ ಗದಗದಿಂದ ಆಯ್ಕೆ ಆಗಿರುವ ಅವರಿಗೆ ಈ ಬಾರಿ ಸ್ಥಾನ ದೊರೆಯುವುದು ಕಠಿಣವೆಂದೇ ಹೇಳಲಾಗುತ್ತಿದೆ.

ಗುಂಡೂರಾವ್, ಕೃಷ್ಣಭೈರೇಗೌಡ

ಗುಂಡೂರಾವ್, ಕೃಷ್ಣಭೈರೇಗೌಡ

ಪ್ರಸ್ತುತ ಕಾಂಗ್ರೆಸ್‌ ಶಾಸಕರ ಪಟ್ಟಿಯಲ್ಲಿರುವ ಎರಡನೇ ತಲೆಮಾರಿನ ನಾಯಕರೆನಿಸಿಕೊಂಡಿರುವ ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಡಾ.ಸುಧಾಕರ್, ಭೈರತಿ ಬಸವರಾಜು ಇನ್ನೂ ಕೆಲವು ನಾಯಕರು ಸಚಿವ ಸ್ಥಾನಕ್ಕೆ ಅರ್ಜಿ ಗುಜರಾಯಿಸಿದ್ದಾರೆ ಇವರಲ್ಲಿ ಎಷ್ಟು ಜನಕ್ಕೆ ಸಿಗುತ್ತದೆ ಇಲ್ಲ ಎಂಬುದು ಕಾಲವೇ ಉತ್ತರಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+