ಮಹದಾಯಿ ನದಿಯಿಂದ 3.9 TMC ನೀರನ್ನು ಕಾಂಗ್ರೆಸ್ ಸರ್ಕಾರ ಒದಗಿಸಲಿದೆ: ಡಿಕೆಶಿ ಭರವಸೆ
ಬೆಂಗಳೂರು, ಡಿಸೆಂಬರ್ 29: ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕ ಭಾಗದ ಜನರ ದಾಹ ನೀಗಿಸಲು ಮಹದಾಯಿ ನದಿಯಿಂದ 3.9 TMC ನೀರನ್ನು ಒದಗಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿಗೆ ಬದ್ಧ. ಉತ್ತರ ಕರ್ನಾಟಕ ಭಾಗದ ಜನರ ದಾಹ ನೀಗಿಸಲು ಮಹದಾಯಿ ನದಿಯಿಂದ 3.9 TMC ನೀರನ್ನು ಒದಗಿಸಲಿದೆ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ₹500 ಕೋಟಿ ಅನುದಾನ ನೀಡಲಿದೆ. ಮಹದಾಯಿ ನದಿ ತಿರುವು ಯೋಜನೆಗೆ ನಿಗದಿತ ಸಮಯಕ್ಕೆ ₹3000 ಕೋಟಿ ಬಿಡುಗಡೆ ಮಾಡಲಿದೆ' ಎಂದು ತಿಳಿಸಿದ್ದಾರೆ.
'ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ. ನೀಡುವುದಾಗಿ ಯಾಮಾರಿಸಿದ ಬಿಜೆಪಿ ಸರ್ಕಾರ ಈಗ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ನಡೆಸುತ್ತಿರುವ ಹೋರಾಟಕ್ಕೆ ಹೆದರಿ ತರಾತುರಿಯಲ್ಲಿ ಅನುದಾನ ಘೋಷಿಸಿದೆ. ಇದೂ ಕೂಡ ಈ ಹಿಂದೆ ಘೋಷಿಸಿದ 600 ಸುಳ್ಳು ಭರವಸೆಯ ಸರಣಿಯ ಮುಂದುವರಿದ ಭಾಗ' ಎಂದು ಡಿಕೆಶಿ ಆರೋಪಿಸಿದ್ದಾರೆ.
'ಕಳಸಾ ಭಂಡೂರಿ ಯೋಜನೆಯ ಅನುಮೋದನೆಗಾಗಿ ರಚನಾತ್ಮಕ ಯೋಜನಾ ವರದಿಯನ್ನು ನಿರೂಪಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ, ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಾಗೂ ರಾಜ್ಯದ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರಿಗೂ ಅನಂತ ಧನ್ಯವಾದಗಳು' ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಕೇಂದ್ರ ಜಲ ಆಯೋಗದ ಹಸ್ತಪ್ರತಿಯನ್ನೂ ಜೋಶಿ ಟ್ವೀಟ್ ಮಾಡಿದ್ದಾರೆ.
ಕಳಸಾ ಬಂಡೂರಿ DPRಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.
'ಕರ್ನಾಟಕಕ್ಕೆ ಅತ್ಯಂತ ಅವಶ್ಯವಾಗಿರುವ ಕಳಸಾ ಬಂಡೂರಿ ಯೋಜನೆಗಾಗಿ ಶ್ರಮಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಮತ್ತು ರಾಜ್ಯದ ಎಲ್ಲ ಸಚಿವರಿಗೆ, ಸಂಸದರಿಗೆ, ನಾಯಕರಿಗೆ, ಶಾಸಕರಿಗೆ ಅನಂತ ಧನ್ಯವಾದಗಳು' ಎಂದು ಹೇಳಿದ್ದಾರೆ.