ಲೋಕಸಭಾ ಚುನಾವಣೆ ಬಳಿಕ ಸಿದ್ದು ಸಂಪುಟದಲ್ಲಿ ಮೇಜರ್ ಸರ್ಜರಿ; ಯಾರು ಇನ್ ? ಯಾರು ಔಟ್ ?
ಬೆಂಗಳೂರು, ಅಕ್ಟೋಬರ್ 21: ರಾಜ್ಯದಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಸಾಕಷ್ಟು ಜನ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಲೋಕಸಭೆ ಚುನಾವಣೆಯ ಬಳಿಕ ಪುನಾರಚನೆ ಆಗುತ್ತೆ ಎನ್ನುವ ಚರ್ಚೆ ಹುಟ್ಟಿಕೊಂಡಿದೆ.
ಹೌದು, ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಿಂದ ಅಂತರವನ್ನ ಕಾಯ್ದುಕೊಂಡಿದ್ದಾರೆ. ಇನ್ನೂ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿರುವ ಕಾಂಗ್ರೆಸ್ ನಲ್ಲಿ ನಾಯಕರ ನಡುವಿನ ಅಂತರ ಹಾಗೂ ಮನಸ್ತಾಪವನ್ನ ಸರಿ ಪಡಿಸಿಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಹೀಗಾಗಿ ಸಚಿವಾಕಾಂಕ್ಷಿಗಳ ಒತ್ತಡಕ್ಕೆ ಮಣಿದು ಲೋಕಸಭಾ ಚುನಾವಣೆಯ ಬಳಿಕ ಸಂಪುಟ ಸರ್ಜರಿಗೆ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.

135 ಸ್ಥಾನಗಳನ್ನ ಭರ್ಜರಿ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದಲ್ಲಿ ಆರಂಭದಿಂದಲೂ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಈ ಸರ್ಕಾರದ ಆಯಸ್ಸು ಎರಡುವರೆ ವರ್ಷ ಮಾತ್ರ ಎಂಬ ಮಾತುಗಳು ಕೇಳಿ ಬರುತ್ತಿತ್ತು, ಆದರೆ ಇದೀಗ ಸರ್ಕಾರ ರಚನೆಯಾಗಿ ಐದು ತಿಂಗಳಲ್ಲೇ ಸಂಪುಟ ಪುನಾರಚಣೆಯ ಚರ್ಚೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಲವು ಹಿರಿಯ ನಾಯಕರಿಗೆ ಈ ಬಾರೀ ಮಂತ್ರಿಗಿರಿ ಕೈ ತಪ್ಪಿದ್ದಯ, ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಂಪುಟ ಸೇರಲು ಸಾಕಷ್ಟು ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದರು. ಆದರೆ ಹಲವರಿಗೆ ಅವಕಾಶ ಕೊನೆಯ ಕ್ಷಣದಲ್ಲಿ ಕೈ ತಪ್ಪಿದೆ. ಈಗಾಗಲೇ ಸಿದ್ದರಾಮಯ್ಯ ವಿರುದ್ದ ಬೇಸರ ವ್ಯಕ್ತಪಡಿಸಿ ಹೈಕಮಾಂಡ್ ಅಂಗಳಕ್ಕೂ ಈ ಚರ್ಚೆ ಹೋಗಿದ್ದು, ಮುಂದಿನ ಅವಧಿಯಲ್ಲಿ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಭರವಸೆ ನೀಡಲಾಗಿದೆ ಎನ್ನಲಾಗಿದೆ.
ಇನ್ನೂ ಸಂಪುಟ ಪುನಾರಚನೆಗೆ ಪೂಕರ ಎಂಬಂತೆ ಶಾಸಕ ಅಶೋಕ್ ಪಟ್ಟಣ ಮಾತನಾಡಿ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬುದು ನಿಜ. ಈಗಿನ ಸಂಪುಟಕ್ಕೆ ಎರಡೂವರೆ ವರ್ಷ ಆದ ತಕ್ಷಣ ಬೇರೆಯವರಿಗೆ ಅವಕಾಶ ಮಾಡಿಕೊಡುವುದಾಗಿ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಅವರು ನಮಗೆ ಭರವಸೆ ನೀಡಿದ್ದಾರೆ ಎಂದರು. ಅಲ್ಲದೇ ಅದೃಷ್ಟವಿದ್ದವರು ಸಚಿವರಾಗುತ್ತಾರೆ. ಇಲ್ಲದವರು ಮಾತನಾಡುತ್ತೇವೆ. ನಮ್ಮ ತಂದೆ, ತಾಯಿ ಇಬ್ಬರೂ ಶಾಸಕರಾಗಿದ್ದರು. ಎಲ್ಲ ಇದ್ದರೂ, ಅದೃಷ್ಟ ಇಲ್ಲ. ನನ್ನ ನಕ್ಷತ್ರ ಸರಿಯಿಲ್ಲ ಎಂದು ಕಾಣುತ್ತದೆ. ಮುಂದೆ ಪೂಜೆ ಪುನಸ್ಕಾರ ಮಾಡಬೇಕು. ಆದರೆ ನಾವು ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದು ಅಸಮಾಧಾನ ವ್ಯಕ್ತಪಸಿದ್ದಾರೆ.

ಲೋಕಸಭೆ ಚುನಾವಣೆಯೇ ಟಾರ್ಗೆಟ್!
ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲಲ್ಲು ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಟಾರ್ಗೆಟ್ ನೀಡಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಸ್ಥಾನವನ್ನ ಗೆಲ್ಲಲು ಮೊದಲ ಪಕ್ಷದಲ್ಲಿನ ಹಿರಿಯ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹೈಕಮಾಂಡ್ ಈ ತಂತ್ರಕ್ಕೆ ಮುಂದಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಎರಡುವರೆ ವರ್ಷವಲ್ಲ, ಬದಲಾಗಿ ಲೋಕಸಭೆ ಚುನಾವಣೆಯ ಬಳಿಕ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಂಪುಟದಿಂದ ಯಾರು ಔಟ್?
ಹೌದು ಪಕ್ಷದಲ್ಲಿ ಅಸಮಾಧಾನವನ್ನ ಶಮನಗೊಳಿಸಲು ಹೈಕಮಾಂಡ್ ಲೋಕಸಭಾ ಚುನಾವಣೆ ಬಳಿಕ ಸಂಪುಟ ಸರ್ಜರಿಗೆ ಮುಂದಾಗಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಸಚಿವರನ್ನು ಹೊರತು ಪಡಿಸಿ ಪೂರ್ಣಪ್ರಮಾಣದ ಪುನಾರಚನೆ ಮಾಡದೆ ಕೆಲವು ಸಚಿವರಿಗೆ ಕೊಕ್ ನೀಡುವ ಲೆಕ್ಕಾಚಾರವನ್ನ ಕಾಂಗ್ರೆಸ್ ಹೈಕಮಾಂಡ್ ಹಾಕಿಕೊಂಡಿದೆ ಎನ್ನಲಾಗಿದೆ ಈ ನಿಟ್ಟಿನಲ್ಲಿ ಸಚಿವರಾದ ಕೆ.ವೆಂಕಟೇಶ್, ರೆಹಮಾನ್ ಖಾನ್, ಬೋಸರಾಜ್ , ಶರಣ ಬಸಪ್ಪ ದರ್ಶನಾಪುರ, ಡಾ. ಎಚ್ ಸಿ ಮಹದೇವಪ್ಪ ಸೇರಿದಂತೆ ಡಿ. ಸುಧಾಕರ್ ಕೊಕ್ ನೀಡಿ ಬೇರೆಯವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಂತ್ರಿ ಗಿರಿಗಾಗಿ ಹೆಚ್ಚಿದ ಒತ್ತಡ; ಯಾರು ಇನ್?
ಆರಂಭದಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗದ ಹಿನ್ನಲೆ ಸಾಕಾಷ್ಟು ನಾಯಕರು ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ನಲ್ಲಿ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಬಿ.ಕೆ ಹರಿಪ್ರಸಾದ್, ಅಶೋಕ್ ಪಟ್ಟಣ, ಬಸವರಾಜ ರಾಯರೆಡ್ಡಿ, ಮಹಾಂತೇಶ್ ಕೌಜಲಗಿ, ವಿನಯ್ ಕುಲಕರ್ಣಿ, ರುದ್ರಪ್ಪ ಲಮಾನಿ, ಪ್ರಸಾದ್ ಅಬ್ಬಯ್ಯ, ಪ್ರಿಯಕೃಷ್ಞ/ ಎಂ ಕೃಷ್ಣಪ್ಪ ಎನ್ ಎ ಹ್ಯಾರಿಸ್, ಮಾಗಡಿ ಬಾಲಕೃಷ್ಣ, ನರೇಂದ್ರ ಸ್ವಾಮಿ, ಭದ್ರಾವತಿ ಸಂಗಮೇಶ್, ತುಕರಾಮ್, ರಾಜೇಗೌಡ, ಶಿವಲಿಂಗೇಗೌಡ, ಟಿಬಿ ಜಯಚಂದ್ರ, ತನ್ವೀರ್ ಸೇಠ್, ಸಲೀಂ ಅಹ್ಮದ್ ಸೇರಿದಂತೆ ಹಲವುರು ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.












Click it and Unblock the Notifications