ಸತ್ತು ಹೋಗಿರುವ ಕಾಂಗ್ರೆಸ್ ಜೊತೆ ಬಿಜೆಪಿಯ ಶಾಸಕರು ಹೋಗಲ್ಲ: ಕೆ.ಎಸ್ ಈಶ್ವರಪ್ಪ ವಾಗ್ದಾಳಿ
ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ದ ಅಪಪ್ರಚಾರ ಮಾಡುತ್ತಲೇ ನಿರ್ನಾಮವಾಗುತ್ತಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದರು.
ದಕ್ಷಿಣ ಕನ್ನಡ, ಮಾರ್ಚ್ 13: ವಿಧಾನಸಭಾ ಚುನಾವಣೆ ಹಿನ್ನೆಲೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪ ಹಾಗೂ ಪ್ರತ್ಯಾರೋಪಗಳು ಹೆಚ್ಚಾಗಿವೆ. ಈಗಾಗಳೇ ರಾಜ್ಯಾದ್ಯಂತ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಕುರಿತು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆ ಹೊತ್ತಲಿ ಅವರು ಬರ್ತಾರೆ, ಇವರು ಬರ್ತಾರೆ ಅಂತ ಹೇಳಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಶಾಸಕರು ಬರ್ತಾರೋ ಅಥವಾ ನಾಯಕರು ಬರ್ತಾರೋ ನೋಡೋಣ . ಆದರೆ, ನಮ್ಮ ಪಕ್ಷದಿಂದ ಕಾಂಗ್ರೆಸ್ ಗೆ ಯಾರು ಹೋಗಲ್ಲ, ಇದಕ್ಕೇ ಭವಿಷ್ಯವೇ ಉತ್ತರ ಕೊಡಲಿದೆ ಎಂದು ಹೇಳಿದರು.

ಇನ್ನೂ ಬಿಜೆಪಿ ವಿರುದ್ದ ಕಾಂಗ್ರೆಸ್ ಪಕ್ಷ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದೆ, ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ದ ಅಪಪ್ರಚಾರ ಮಾಡುತ್ತಲೇ ನಿರ್ನಾಮವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ ಅವರು, ಬಿಜೆಪಿಯ ಯಾವ ಶಾಸಕರೂ ಸತ್ತು ಹೋಗಿರುವ ಕಾಂಗ್ರೆಸ್ ಜೊತೆ ಹೋಗಲು ಸಾಧ್ಯವಿಲ್ಲ. ದೇಶದ ರಕ್ಷಣೆ ಮಾಡುವ ಮತ್ತು ಸಂಘಟನೆ ಇರುವ ಬಿಜೆಪಿ ದೇಶದೆಲ್ಲೆಡೆ ಯಶಸ್ಸು ಪಡೆಯುತ್ತಿದೆ. ಯಾರು ತಾನೇ ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಇಷ್ಟ ಪಡುತ್ತಾರೆ? ಎಂದು ಪ್ರಶ್ನಿಸಿದರು.
ಈಶಾನ್ಯ ರಾಜ್ಯಗಳ 180 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು 7 ಸ್ಥಾನ ಮಾತ್ರ. ಬಿಜೆಪಿ ಮೂರೂ ಕಡೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಅಸೆಂಬ್ಲಿ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆಯಲು ವಿಜಯ ಸಂಕಲ್ಪ ಯಾತ್ರೆಯಿಂದ ಲಾಭ ಆಗಲಿದೆ. ಸುಳ್ಯ, ಪುತ್ತೂರಿನಲ್ಲಿ ಯಾತ್ರೆ ನಡೆದಿದೆ. ಬೆಳ್ತಂಗಡಿಯಲ್ಲಿ ಯಾತ್ರೆ ನಡೆಯಲಿದೆ. ಯಾತ್ರೆಗೆ ನಿರೀಕ್ಷೆಗೆ ಮೀರಿ ಜನಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ನೀಡಿದ ಅಕ್ಕಿಯನ್ನು ಅನ್ನಭಾಗ್ಯ ಮೂಲಕ ಸಿದ್ದರಾಮಯ್ಯ ವಿತರಿಸಿದರು. ಯಾರದೋ ಕೂಸಿಗೆ ಇವರ ಹೆಸರು ಯಾಕೆ ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಚುನಾವಣೆ ಹತ್ತಿರ ಬರುವಾಗ ಹಿಂದೂ ಧರ್ಮದ ಬಗ್ಗೆ ಪ್ರೀತಿ ಬರುತ್ತದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕಾಗಿ ತಮ್ಮ ತಮ್ಮ ಸಮುದಾಯವನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವ, ಅಭಿವೃದ್ಧಿ ಕಾರ್ಯಗಳು ಮತ್ತು ಸಂಘಟನೆಯ ಶಕ್ತಿಯಿಂದ ಜನಸಾಮಾನ್ಯರಿಗೆ ಸ್ಪಂದಿಸುವುದು, ದೇಶದ ರಕ್ಷಣೆ, ಸಂಸ್ಕೃತಿಯ ಕಾಪಾಡುವಿಕೆ ಬಿಜೆಪಿಯಿಂದಲೇ ಸಾಧ್ಯ ಎಂಬ ನಂಬಿಕೆ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು. ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಶಾಸಕ ಹರೀಶ್ ಪೂಂಜಾ ಅವರು ಹಾಜರಿದ್ದರು.












Click it and Unblock the Notifications