ಪರಿಷತ್ ಟಿಕೆಟ್ ಘೋಷಣೆ; ಸಿದ್ದರಾಮಯ್ಯ ಮನೆಗೆ ನಾಯಕರ ದಂಡು!
ಬೆಂಗಳೂರು, ಜೂನ್ 17 : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಕರ್ನಾಟಕ ವಿಧಾನಸಭೆಯಿಂದ 7 ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 29ರಂದು ಚುನಾವಣೆ ನಡೆಯಲಿದೆ.
ಬುಧವಾರ ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣೆಗೆ ಬಿ. ಕೆ. ಹರಿಪ್ರಸಾದ್ ಮತ್ತು ನಸೀರ್ ಅಹ್ಮದ್ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದೆ. ನಸೀರ್ ಅಹ್ಮದ್ ಸಂಜೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದರು.
ನಸೀರ್ ಅಹಮದ್ ಅವರನ್ನು ಅಭಿನಂದಿಸಿ, ಶುಭ ಹಾರೈಸಿದೆ. ಈ ವೇಳೆ ಹಿರಿಯ ಶಾಸಕರಾದ ರಮೇಶ್ ಕುಮಾರ್, ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯರಾದ ಗೋವಿಂದ ರಾಜು, ವಿಧಾನಸಭೆಯಲ್ಲಿ ಪಕ್ಷದ ಸಚೇತಕರಾದ ಡಾ. ಅಜಯ್ಸಿಂಗ್ ಜೊತೆಗಿದ್ದರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ವಿಧಾನಸಭೆಯಲ್ಲಿ 68 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ 2 ಸ್ಥಾನದಲ್ಲಿ ಜಯಗಳಿಸಲಿದೆ. ಬಿಜೆಪಿ 4 ಮತ್ತು ಜೆಡಿಎಸ್ 1 ಸ್ಥಾನದಲ್ಲಿ ಜಯಗಳಿಸಬಹುದಾಗಿದೆ. ಎರಡೂ ಪಕ್ಷಗಳು ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಸಲು ಗುರುವಾರ ಕೊನೆ ದಿನವಾಗಿದೆ.

200 ಆಕಾಂಕ್ಷಿಗಳಿದ್ದರು
2 ವಿಧಾನ ಪರಿಷತ್ ಟಿಕೆಟ್ಗೆ ಕಾಂಗ್ರೆಸ್ನಲ್ಲಿ 200 ಆಕಾಂಕ್ಷಿಗಳಿದ್ದರು. ಹಲವಾರು ಸುತ್ತಿನ ಸಭೆಗಳ ಬಳಿಕ ಕಾಂಗ್ರೆಸ್ ಬಿ. ಕೆ. ಹರಿಪ್ರಸಾದ್ ಮತ್ತು ನಸೀರ್ ಅಹ್ಮದ್ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದೆ. ಅವಧಿ ಮುಗಿದ ನಸೀರ್ ಅಹ್ಮದ್ ಮತ್ತೊಮ್ಮೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿದ್ದರಾಮಯ್ಯ ಆಪ್ತರು
ನಸೀರ್ ಅಹ್ಮದ್ಗೆ ಅವಕಾಶ ಸಿಕ್ಕಿದೆ ಅಲ್ಪ ಸಂಖ್ಯಾತ ಸಮುದಾಯದ ಬೇರೆ ನಾಯಕರಿಗೆ ಅವಕಾಶ ನೀಡಬೇಕು ಎಂಬ ಕೂಗು ಪಕ್ಷದಲ್ಲಿ ಕೇಳಿ ಬಂದಿತ್ತು. ಆದರೆ ತಮ್ಮ ಆಪ್ತರಾದ ನಸೀರ್ ಅಹ್ಮದ್ಗೆ ಟಕೆಟ್ ನೀಡಬೇಕು ಎಂದು ಸಿದ್ದರಾಮಯ್ಯ ಅವರೇ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಟಿಕೆಟ್ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇಬ್ಬರು ಪ್ರಭಾವಿ ನಾಯಕರು
ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರು. ಇಬ್ಬರೂ ಪ್ರಭಾವಿ ನಾಯಕರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಇಬ್ಬರ ಸಲಹೆಯನ್ನು ಕೇಳುವುದು ಅನಿವಾರ್ಯ. 200 ಟಿಕೆಟ್ ಆಕಾಂಕ್ಷಿಗಳ ನಡುವೆ ನಸೀರ್ ಅಹ್ಮದ್ಗೆ ಟಿಕೆಟ್ ಸಿಕ್ಕಿರುವ ಬಗ್ಗೆ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ.

ಬಿ. ಕೆ. ಹರಿಪ್ರಸಾದ್ ವಾಪಸ್
ರಾಜ್ಯಸಭಾ ಸದಸ್ಯರಾಗಿದ್ದ ಬಿ. ಕೆ. ಹರಿಪ್ರಸಾದ್ ರಾಜ್ಯ ರಾಜಕಾರಣಕ್ಕೆ ವಾಪಸ್ ಆಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಅವರು ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಕೆಟ್ ಸಿಕ್ಕಿದ್ದರಿಂದ ಬಿ. ಕೆ. ಹರಿಪ್ರಸಾದ್ಗೆ ಪರಿಷತ್ ಟಿಕೆಟ್ ನೀಡಲಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಬಿ. ಕೆ. ಹರಿಪ್ರಸಾದ್ ಬಹಳ ಪ್ರಭಾವ ಹೊಂದಿದ್ದಾರೆ.












Click it and Unblock the Notifications