ಅಕ್ಕಿ ಪೂರೈಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ
ಬೆಂಗಳೂರು, ಜೂನ್ 20: ಕರ್ನಾಟಕಕ್ಕೆ ಅಕ್ಕಿ ಪೂರೈಕೆಗೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯದ ವಿವಿಧ ಭಾಗಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿದವು.
ಕರ್ನಾಟಕ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನಿರಾಕರಿಸಿದ ಆರೋಪದ ಮೇಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ನೀಡುತ್ತಿಲ್ಲ ಎಂದು ರಾಜ್ಯದ ಕೆಲವೆಡೆ ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ಪ್ರತಿಭಟನೆ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಬಂಧಿಸಲಾಯಿತು. ರಾಜ್ಯ ರಾಜಧಾನಿಯಲ್ಲಿ ಭಾರೀ ಮಳೆಯ ನಡುವೆಯೇ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಅಡ್ಡಿಪಡಿಸಲು ಪ್ರಯತ್ನಿಸಿದರೂ ರಾಜ್ಯ ಸರ್ಕಾರ ತನ್ನ ಚುನಾವಣಾ ಭರವಸೆಯನ್ನು ಈಡೇರಿಸುತ್ತದೆ. ಕೇಂದ್ರ ಬಡವರ ವಿರೋಧಿಯಾಗಿದೆ. ದುರ್ಬಲ ವರ್ಗದವರಿಗೆ ಅನ್ನ ನೀಡುವ ಯೋಜನೆ ಜಾರಿಗೆ ತೊಂದರೆ ಮಾಡುತ್ತಿದೆ ಎಂದು ಹೇಳಿದರು
ಆರ್ಥಿಕವಾಗಿ ದುರ್ಬಲ ವರ್ಗದ ಕುಟುಂಬಗಳಿಗೆ ಪ್ರತಿ ಮನೆಗೆ ಅಕ್ಕಿ ಪ್ರಮಾಣವನ್ನು 5 ಕೆಜಿಯಿಂದ 10 ಕೆಜಿಗೆ ಹೆಚ್ಚಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಆದರೆ ಕೇಂದ್ರದಿಂದ ಪೂರೈಕೆಯಾಗುತ್ತಿರುವ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಇದುವರೆಗೆ ಐದು ಕೆಜಿ ಅಕ್ಕಿಯನ್ನು ಮಾತ್ರ ನೀಡಲು ರಾಜ್ಯಕ್ಕೆ ಸಾಧ್ಯ ಎನ್ನಲಾಗಿದೆ.
ಭಾರತೀಯ ಆಹಾರ ನಿಗಮ, ಕೇಂದ್ರ ಉಗ್ರಾಣ ನಿಗಮ ಮತ್ತು ನಾಫೆಡ್ನಿಂದ ಖರೀದಿಸಲು ಸಿದ್ಧ ಎಂದು ಕರ್ನಾಟಕ ಹೇಳಿದ್ದರೂ ಹೆಚ್ಚುವರಿ ಐದು ಕೆಜಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ. ಇತ್ತೀಚೆಗೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಅಡಿಯಲ್ಲಿ ಕೇಂದ್ರ ಪೂಲ್ನಿಂದ ಅಕ್ಕಿ ಮತ್ತು ಗೋಧಿ ಮಾರಾಟವನ್ನು ನಿಲ್ಲಿಸಿತ್ತು.
ಭಾರತೀಯ ಆಹಾರ ನಿಗಮ (ಎಫ್ಸಿಐ) ಹೊರಡಿಸಿದ ಆದೇಶದ ಪ್ರಕಾರ, ರಾಜ್ಯ ಸರ್ಕಾರಗಳಿಗೆ ಒಎಂಎಸ್ಎಸ್ (ದೇಶೀಯ) ಅಡಿಯಲ್ಲಿ ಗೋಧಿ ಮತ್ತು ಅಕ್ಕಿ ಮಾರಾಟವನ್ನು ನಿಲ್ಲಿಸಲಾಗಿದೆ. ಆದಾಗ್ಯೂ, ಒಎಂಎಸ್ಎಸ್ ಅಡಿಯಲ್ಲಿ ಅಕ್ಕಿ ಮಾರಾಟವನ್ನು ಈಶಾನ್ಯ ರಾಜ್ಯಗಳು, ಗುಡ್ಡಗಾಡು ರಾಜ್ಯಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳು, ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿರುವ ರಾಜ್ಯಗಳಿಗೆ ಪ್ರಸ್ತುತ ಕ್ವಿಂಟಲ್ಗೆ 3,400 ರೂ ದರದಲ್ಲಿ ಮುಂದುವರಿಸಲಾಗುವುದು ಎಂದು ಅದು ಹೇಳಿದೆ.
ಮಾನ್ಸೂನ್ ನಿಧಾನಗತಿಯ ಪ್ರಗತಿ ಮತ್ತು ಅಕ್ಕಿ ಮತ್ತು ಗೋಧಿ ಬೆಲೆಗಳ ಏರಿಕೆತಿಂದಾಗಿ ಧಾನ್ಯ ನೀಡಲಾಗುತ್ತಿಲ್ಲ ಎನ್ನಲಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಮಂಡಿ ಮಟ್ಟದಲ್ಲಿ ಅಕ್ಕಿ ಬೆಲೆಗಳು ಶೇಕಡಾ 10 ರಷ್ಟು ಮತ್ತು ಕಳೆದ ತಿಂಗಳಲ್ಲಿ ಶೇಕಡಾ 8 ರಷ್ಟು ಹೆಚ್ಚಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕಾರ, ರಾಜ್ಯಕ್ಕೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಎಫ್ಸಿಐ ಅಗತ್ಯ ಪ್ರಮಾಣದ ಅಕ್ಕಿ ನೀಡಲು ಜೂನ್ 12 ರಂದು ಒಪ್ಪಿಗೆ ನೀಡಿತ್ತು ಆದರೆ ಎರಡು ದಿನಗಳ ನಂತರ ಅದು ಹಿಂದೆ ಸರಿಯಿತು ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications