ಸಮಗ್ರ ಡಿಜಿಟಲ್ ಆರ್ಥಿಕತೆ ನಿಯಂತ್ರಣ ನೀತಿ ಜಾರಿ:ಅಶ್ವಿನಿ ವೈಷ್ಣವ್
ಬೆಂಗಳೂರು ಡಿಸೆಂಬರ್ 18: ಕೇಂದ್ರ ಸರ್ಕಾರ ಶೀಘ್ರದಲ್ಲೇ ನೂತನ 'ಸಮಗ್ರ ಡಿಜಿಟಲ್ ಆರ್ಥಿಕತೆ ನಿಯಂತ್ರಣ ನೀತಿ' ಜಾರಿಗೊಳಿಸಲಿದೆ. ಜತೆಗೆ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಪೂರಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಭಾನುವಾರ ಬೆಂಗಳೂರಿನಲ್ಲಿ ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಐಬಿಎಂ ಸೇರಿದಂತೆ ಐಟಿ, ಬಿಟಿ, ಸ್ಟಾರ್ಟಪ್ ಮತ್ತು ಇಎಸ್ಡಿಎಂ ವಲಯಕ್ಕೆ ಸೇರಿದ 25ಕ್ಕೂ ಹೆಚ್ಚು ಪ್ರಮುಖ ಕಂಪನಿಗಳ ಪ್ರಮುಖರ ಜತೆ ಸಮಾಲೋಚನೆ ಸಭೆ ನಡೆಸಿದರು. ಉದ್ಯಮಿಗಳ ಸವಾಲುಗಳನ್ನು ಆಲಿಸಿದ ಬಳಿಕ ಕೇಂದ್ರ ಸರ್ಕಾರ ಉದ್ಯಮ ಸ್ನೇಹಿ ನೀತಿ ಜಾರಿಗೆ ತರುವುದರ ಬಗ್ಗೆ ವಿವರಿಸಿದರು.
ರಾಜ್ಯದ ಐಟಿ, ಸ್ಟಾರ್ಟಅಪ್ ಮತ್ತು ಇಎಸ್ಡಿಎಂ ವಲಯದ ಕಂಪನಿಗಳಿಗೆ ಸಂಬಂಧಿಸಿದಂತೆ ಏನೇನು ಮಾಡಬೇಕು ಎಂಬುದರ ವರದಿ ನೀಡುವಂತೆ ಸೂಚಿಸಲಾಗಿದೆ. ಕೇಂದ್ರವು ಉದ್ಯಮಿ ಸಂಬಂಧಿ ನೀತಿ ನಿರೂಪಿಸುವಾಗ ಮೊದಲು ಉದ್ಯಮಿಗಳ ಜತೆ ಚರ್ಚಿಸುತ್ತಲೇ ಬಂದಿದೆ ಎಂದರು.

ಮೆಕ್ಯಾನಿಕಲ್ ಕ್ಷೇತ್ರದಲ್ಲಿ ಕೌಶಲ್ಯ ಕೊರತೆ
ಕರ್ನಾಟಕ ಸೇರಿದಂತೆ ದೇಶದಲ್ಲಿ ಉದ್ಯಮಗಳ ಬೆಳವಣಿಗೆಗೆ ಎಂತಹ ನೀತಿಗಳು ಬೇಕು?. ಏನು ಮಾಡಿದರೆ ಅನುಕೂಲ ಎನ್ನುವುದನ್ನು ಉದ್ಯಮಿಗಳು ಮುಕ್ತವಾಗಿ ಹಂಚಿಕೊಳ್ಳಬೇಕು. ಜೊತೆಗೆ ತಮ್ಮಲ್ಲಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಬಹುದಾಗಿದೆ ಎಂದು ಇದರ ಜತೆಗೆ, ಸಮಸ್ಯೆಗಳಿಗೆ ತಮ್ಮಲ್ಲೇ ಇರುವ ಅತ್ಯುತ್ತಮ ಪರಿಹಾರಗಳನ್ನೂ ಸರಕಾರಕ್ಕೆ ಸೂಚಿಸಬಹುದು ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ಭಾರತದಲ್ಲಿ ಮೆಕ್ಯಾನಿಕಲ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೌಶಲ್ಯಗಳ ಕೊರತೆ ಇದೆ ಎನ್ನುವುದು ಗಮನಕ್ಕೆ ಬಂದಿದೆ. ಆದ್ದರಿಂದ, ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಉದ್ಯಮಗಳು ಕನಿಷ್ಠಪಕ್ಷ ಒಂದು ಕೋರ್ಸ್ನ್ನು ವಿನ್ಯಾಸಗೊಳಿಸಿದರೆ ಅದನ್ನು ವಿಶ್ವವಿದ್ಯಾಲಯದಲ್ಲಿ ತಕ್ಷಣವೇ ಜಾರಿಗೊಳಿಸಲಾಗುವುದು. ಈ ವಿಷಯದಲ್ಲಿ ವಿಸ್ಟ್ರಾನ್ ಮತ್ತು ಫಾಕ್ಸ್ಕಾನ್ ಕಂಪನಿಗಳು ನೇತೃತ್ವ ವಹಿಸಿಕೊಳ್ಳಬೇಕು ಎಂದರು.

ತಂತ್ರಜ್ಞಾನಾಧಾರಿತ ಉದ್ಯಮದ ಸಮರ್ಥ ಬಳಕೆ
ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಉಜ್ವಲ ಭವಿಷ್ಯವಿದೆ ಎಂದು ಹೇಳಲಾಗುತ್ತಿದೆ. ಇದು ಸಾಧ್ಯವಾಗಬೇಕಾದರೆ 20 ವರ್ಷಗಳ ದೀರ್ಘಾವಧಿಯ ಒಂದು ಸಮಗ್ರ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕಾದ ಅಗತ್ಯವಿದೆ. ಆಧುನಿಕ ತಂತ್ರಜ್ಞಾನಾಧಾರಿತ ಉದ್ಯಮಗಳನ್ನು ನಾವು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ. ಮೊದಲ ಹಂತದಲ್ಲಿ ಇನ್ಕ್ಯುಬೇಷನ್ ಕಾರ್ಯಕ್ರಮಗಳಲ್ಲಿ ಯಶಸ್ಸನ್ನು ಕಂಡರೆ, ಇದನ್ನು 20ಕ್ಕೂ ಹೆಚ್ಚು ರಾಜ್ಯಗಳಿಗೆ ವಿಸ್ತರಿಸಬಹುದು ಎಂದು ವೈಷ್ಣವ್ ಸಲಹೆ ನೀಡಿದರು.

ಸರಕು ಸಾಗಣೆ ಸಮಸ್ಯೆ: 30ಸಾವಿರ ರೈಲು ಕೋಚ್ ಪೂರೈಕೆ
ಉದ್ಯಮ ಕ್ಷೇತ್ರದಲ್ಲಿ ಸರಕು ಸಾಗಣೆ ತ್ರಾಸದಾಯಕವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದನ್ನು ಪರಿಹರಿಸಲು ರೈಲ್ವೆ ಇಲಾಖೆಯು ಸಿದ್ಧವಿದ್ದು, 30 ಸಾವಿರ ಕೋಚ್ಗಳನ್ನು ಒದಗಿಸಲಿದೆ. ಉದ್ಯಮ ವಲಯವು ಸರಕು ಸಾಗಣೆ ಸಮಸ್ಯೆ ಪರಿಹಾರವನ್ನು ಮೊದಲು ಬೆಂಗಳೂರಿನಲ್ಲೇ ಪರೀಕ್ಷಾರ್ಥವಾಗಿ ಬಳಸಿ ನೋಡಬಹುದು. ಇದರಿಂದ ಸರಕು ಸಾಗಣೆ ಸುಗಮವಾಗಿ ನಡೆಯಲಿದೆ. ಇದು ಕೂಡ 'ಈಸ್ ಆಫ್ ಡೂಯಿಂಗ್ ಬಿಜಿನೆಸ್' ವ್ಯವಸ್ಥೆಯ ಭಾಗವಾಗಿದೆ ಎಂದು ಮುಕ್ತ ಆಹ್ವಾನ ನೀಡಿದರು.

ವಾರದಲ್ಲಿ ಟೆಲಿಕಾಂ ಗೋಪುರಕ್ಕೆ ಅನುಮತಿ
ಹಿಂದೆಲ್ಲ ಟೆಲಿಕಾಂ ಸಂಪರ್ಕ ಗೋಪುರಗಳಿಗೆ ಅನುಮತಿ ನೀಡಲು ಏಳೆಂಟು ತಿಂಗಳು ಹಿಡಿಯುತ್ತಿದ್ದವು. ಈಗ ಶೇ. 80ರಷ್ಟು ಗೋಪುರಗಳಿಗೆ ಕೇವಲ ಏಳು ದಿನಗಳಲ್ಲಿ ಅನುಮತಿ ಕೊಡಲಾಗುತ್ತಿದೆ. ಉದ್ಯಮಗಳು ಸಾಂದ್ರವಾಗಿ ನೆಲೆಯೂರಿರುವ ಕಡೆಗಳಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಆದ್ಯ ಗಮನ ಕೊಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾರ್ಟಅಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಈಗ ಎಲ್ಲರೂ ಸ್ಟಾರ್ಟಪ್ಗಳ ಬಗ್ಗೆ ಉತ್ಸಾಹ ಹೊಂದಿದ್ದಾರೆ. ಆದರೆ ನಮ್ಮ ಕಾರ್ಯ ಪರಿಸರದಲ್ಲಿ ಯಾವ ಕ್ಷೇತ್ರಗಳಿಗೆ ಸಂಬಂಧಿಸಿದ ನವೋದ್ಯಮಗಳು ಗೆಲ್ಲುತ್ತವೆ ಎನ್ನುವುದನ್ನು ಕಂಡುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ, ಐಟಿ ಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ನಿರ್ದೇಶಕ ಡಾ.ಶಿವಶಂಕರ, ಜೆಟ್ವರ್ಕ್ನ ಅಮೃತ್ ಆಚಾರ್ಯ, ನಾಸ್ಕಾಂನ ಕೆ.ಎಸ್.ವಿಶ್ವನಾಥ್, ಟಿಸಿಎಸ್ನ ಸುನೀಲ್ ದೇಶಪಾಂಡೆ, ಇನ್ಫೋಸಿಸ್ನ ಕಾರ್ತಿಕ ನೀಲಕಂಠನ್, ಕಿಂಡ್ರಲ್ ಲಿಂಗರಾಜು, ಸೀಮನ್ಸ್ನ ಮನೋಜ್ ಪ್ರಸಾದ್, ಮರ್ಸಿಡಿಸ್ ಬೆಂಜ್ನ ಮನು ಸಾಳೆ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications