ಕರಾವಳಿ, ಮುಂಬೈ ಕರ್ನಾಟಕದಲ್ಲಿ ಕೇಸರಿ ಕಲರವ!
ಬೆಂಗಳೂರು, ಮೇ 16: ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಉತ್ತಮ ಸಾಧನೆ ಮಾಡಿರುವ ಬಿಜೆಪಿ ಅಧಿಕಾರದ ಹೊಸ್ತಿಲಿಗೆ ಬಂದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಹೈದರಾಬಾದ್ ಕರ್ನಾಟಕ ಮತ್ತು ಬೆಂಗಳೂರು ಪ್ರದೇಶದಲ್ಲಿ ಮುನ್ನಡೆ ಸಾಧಿಸಿ, ಎರಡನೇ ಸ್ಥಾನಕ್ಕೆ ಕುಸಿದಿದೆ. ಹಳೇ ಮೈಸೂರು ಭಾಗದಲ್ಲಿ ಉತ್ತಮ ಸಾಧನೆ ಮಾಡಿರುವ ಜೆಡಿಎಸ್, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ಆದರೆ ಕರಾವಳಿ ಭಾಗದಲ್ಲಿ ತನ್ನ ಖಾತೆ ತೆರೆಯಲು ವಿಲವಾಗಿದೆ.
ಇನ್ನು ಮಹಾದಾಯಿ ನದಿ ನೀರಿನ ವಿಷಯವಾಗಿ ಮತದಾನಕ್ಕೆ ಕೇವಲ ಎರಡು ದಿನ ಬಾಕಿ ಇರುವಾಗ ಗದಗನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಹೇಳಿಕೆಯ ಪರಿಣಾಮವಾಗಿ ಮುಂಬೈ ಕರ್ನಾಟಕದಲ್ಲಿ 30 ಸ್ಥಾನಗಳನ್ನು ಗಳಿಸಲು ಬಿಜೆಪಿಗೆ ಸಾಧ್ಯವಾದಂತೆ ತೋರುತ್ತಿದೆ.

ಏಕೆಂದರೆ ಮಹದಾಯಿ ಕಾರಣಕ್ಕಾಗಿಯೇ ಈ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರತಿರೋಧ ಎದುರಿಸಿತ್ತು. ಮಹದಾಯಿ ವಿಚಾರವಾಗಿ ಮೋದಿ ಮೇಲೆ ಭರವಸೆ ಇಟ್ಟು ಈ ಭಾಗದ ಜನರು ಕೊನೆ ಘಳಿಗೆಯಲ್ಲಿ ಬಿಜೆಪಿ ಪರ ಮತ ಚಲಾಯಿಸಿರುವುದು ಅಂಕಿ-ಅಂಶಗಳಿಂದ ವೇದ್ಯವಾಗುತ್ತಿದೆ.
ಇನ್ನು ಕಾವೇರಿ ಕಣಿವೆಯ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೋರುತ್ತಿರುವ ಆಸ್ಥೆಯ ಕಾರಣಕ್ಕಾಗಿ ಹಳೆ ಮೈಸೂರು ಭಾಗದಲ್ಲಿ ಮತ್ತೆ ಜೆಡಿಎಸ್ ಪರ ಜನರು ಭಾರಿ ಒಲವು ತೋರಿದ್ದಾರೆ. ಇತ್ತೀಚಿನ ಕಾವೇರಿ ತೀರ್ಪಿನ ವೇಳೆ ದೇವೇಗೌಡರು ರಾಜ್ಯ ಸರ್ಕಾರದ ಜತೆ ವರ್ತಿಸಿದ ರೀತಿ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಕಷ್ಟದ ಸಂದರ್ಭದಲ್ಲಿ ದೇವೇಗೌಡರಿಗೆ ರಾಜಕೀಯ ಶಕ್ತಿ ಇದ್ದರೆ ಮಾತ್ರ ರೈತರಿಗೆ ಧ್ವನಿ ಬರುತ್ತದೆ ಎಂಬರ್ಥದಲ್ಲಿ ಜೆಡಿಎಸ್ ಈ ಬಾರಿಯೂ ಇಲ್ಲಿ ಮನ್ನಣೆ ಪಡೆದಿದೆ.
| ಪ್ರದೇಶ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಪಕ್ಷೇತರ | ಒಟ್ಟು |
| ಮುಂಬೈ ಕರ್ನಾಟಕ | 30 | 17 | 03 | 01 | 50 |
| ಮಧ್ಯ ಕರ್ನಾಟಕ | 25 | 10 | 04 | 00 | 39 |
| ಕರಾವಳಿ ಕರ್ನಾಟಕ | 16 | 03 | 00 | 00 | 19 |
| ಬೆಂಗಳೂರು ಪ್ರದೇಶ | 11 | 21 | 06 | 01 | 39 |
| ಹೈದರಾಬಾದ್ ಕರ್ನಾಟಕ | 15 | 21 | 04 | 00 | 40 |
| ಹಳೆ ಮೈಸೂರು | 07 | 06 | 22 | 00 | 35 |
| ಒಟ್ಟು | 104 | 78 | 38 | 02 | 222 |












Click it and Unblock the Notifications