ಸಮನ್ವಯ ಸಮಿತಿ ಸಭೆಯಲ್ಲಿ ಇತ್ಯರ್ಥವಾಗಿಲ್ಲ ರೈತ ಸಾಲ ಮನ್ನಾ ವಿಷಯ?
ಬೆಂಗಳೂರು, ಜೂನ್ 14: ಮೈತ್ರಿ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆ ಇಂದು ನಡೆದಿದ್ದು ಹಲವು ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಸಾಲಮನ್ನಾ ಬಗ್ಗೆ ಸ್ಪಷ್ಟ ನಿಲುವು ತಳೆಯಲು ಸಭೆ ವಿಫಲವಾದಂತಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಪ್ರಾಯೋಗಿಕವಾಗಿ (ಪ್ರಾಕ್ಟಿಕಲ್) ಕಾರ್ಯರೂಪಕ್ಕೆ ಜಾರಿಗೆ ತರಲಾಗುವ ಯೋಜನೆಗಳನ್ನಷ್ಟೆ ಅನುಷ್ಠಾನ ಮಾಡಲಾಗುವುದು ಎಂದಿದ್ದಾರೆ' ಸಿದ್ದರಾಮಯ್ಯ ಅವರ ಈ ಮಾತು ಇದು ಸಾಲಮನ್ನಾದ ಬಗ್ಗೆ ಅನುಮಾನ ಮೂಡಿಸಿದೆ.
ಎರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿ ಸಾಮಾನ್ಯ ಘೋಷಣೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದಿರುವ ಅವರು, ಸರ್ಕಾರ ಬಜೆಟ್ನಲ್ಲಿ ಮಾಡಬೇಕಾದ ಘೋಷಣೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದರು. ಇಷ್ಟೆ ಅಲ್ಲದೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಇನ್ನು 10 ದಿನಗಳಲ್ಲಿ ನೇಮಕ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಡಿಸಿಎಂ ಪರಮೇಶ್ವರ್ ಅವರು ಮಾತನಾಡಿ, 'ಸಾಲಮನ್ನಾ ನಿರ್ಣಯವು ಹಠಾತ್ತನೆ ತೆಗೆದುಕೊಳ್ಳುವ ನಿರ್ಣಯವಲ್ಲ ಅದು ಹಣಕಾಸಿಗೆ ಸಂಬಂಧಪಟ್ಟ ನಿರ್ಣಯ ಅದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ' ಎಂದರು.
ಕುಮಾರ ಕೃಪ ಅತಿಥಿಗೃಹದಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಇನ್ನೂ ಕೆಲವರು ಭಾಗವಹಿಸಿದ್ದರು. ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್ನ 3 ಹಾಗೂ ಜೆಡಿಎಸ್ನ ಇಬ್ಬರು ಸದಸ್ಯರು ಇರಲಿದ್ದಾರೆ.