ಲಾಕ್ಡೌನ್ ಕುರಿತು ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ
ಬೆಂಗಳೂರು, ಜು. 23: ಇಡೀ ರಾಜ್ಯಾದ್ಯಂತ ಲಾಕ್ಡೌನ್ ಹಿಂದಕ್ಕೆ ಪಡೆಯುವ ನಿರ್ಧಾರದ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಘೋಷಣೆ ಮಾಡಿದ ಬಳಿಕ ಮೊದಲ ಸಂಪುಟ ಸಭೆ ವಿಧಾನಸೌಧದಲ್ಲಿ ಆರಂಭವಾಗಿದೆ. ವಿಧಾನಸೌಧದಲ್ಲಿ ನಡೆಯುತ್ತಿರುವ ಇಂದಿನ ರಾಜ್ಯ ಸಂಪುಟಸಭೆಯಲ್ಲಿ ಪ್ರಮುಖವಾಗಿ ಅನ್ಲಾಕ್ ಕುರಿತಂತೆ ಸಂಪುಟ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ವಿಧಾನ ಪರಿಷತ್ಗೆ ಐವರು ನಾಮನಿರ್ದೇಶಿತ ಸದಸ್ಯರ ನೇಮಕ ಮಾಡಿರುವ ಬಗ್ಗೆಯೂ ಚರ್ಚೆ ನಡೆಯುಲಿದೆ.
ಅನ್ಲಾಕ್ ಕುರಿತಂತೆ ಚರ್ಚೆ ಜೊತೆಗೆ ಹಲವು ಪ್ರಮುಖ ನಿರ್ಧಾರಗಳನ್ನು ಇಂದಿನ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಸಂಪುಟ ಸದಸ್ಯರೊಂದಿಗೆ ಚರ್ಚಿಸದೇ ಏಕಾಏಕಿ ಸಿಎಂ ಯಡಿಯೂರಪ್ಪ ಅವರು ಸಂಪೂರ್ಣ ಅನ್ಲಾಕ್ ನಿರ್ಧಾರ ಮಾಡಿರುವುದು ಹಲವು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಲೆನೋವಾಗಿದೆ. ಒಂದೆಡೆ ನಿಯಂತ್ರಣಕ್ಕೆ ಸಿಗದಂತೆ ಹೆಚ್ಚಾಗುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ಇದ್ದರೆ, ಮತ್ತೊಂದೆಡೆ ಇಡೀ ರಾಜ್ಯಾದ್ಯಂತ ಲಾಕ್ಡೌನ್ ತೆರವು ನಿರ್ಧಾರವನ್ನು ಯಡಿಯೂರಪ್ಪ ಅವರು ಪ್ರಕಟಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಯಡಿಯೂರಪ್ಪ ಅವರಿಗೆ ತಮ್ಮ ಇಕ್ಕಟ್ಟಿನ ಪರಿಸ್ಥಿತಿ ಕುರಿತು ತಿಳಿಸುವ ಸಾಧ್ಯತೆಗಳಿವೆ.

ವಿಧೇಯಕಗಳ ಚರ್ಚೆ
ಉಳಿದಂತೆ, ನೂತನ ಕೈಗಾರಿಕಾ ನೀತಿ 2020, ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ ತಿದ್ದುಪಡಿ ವಿಧೇಯಕ(ಸಿಬ್ಬಂದಿ ಮತ್ತು ನೇಮಕ), ಕರ್ನಾಟಕ ರಾಜ್ಯ ಸಿವಿಲ್ ಸರ್ವೀಸ್ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ವಿಧೇಯಕ, ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ವಿಧೇಯಕ, ಕರ್ನಾಟಕ ನಗರ ಯೋಜನೆ ವಿಧೇಯಕ, ಕರ್ನಾಟಕ ಕೈಗಾರಿಕಾ ವಿವಾದ ಮತ್ತು ಇತರೆ ಕಾನೂನು ಸುಗ್ರೀವಾಜ್ಞೆ 2020 ವಿಧೇಯಕಗಳು ಸೇರಿದಂತೆ ಒಟ್ಟು 6 ವಿಧೇಯಕಗಳು ಚರ್ಚೆಗೆ ಬರಲಿವೆ.

ಹಿಸ್ಸಾ ಗುರುತಿಸುವಿಕೆ
ಅಲ್ಲದೆ ಕೈಗಾರಿಕಾ ವಿವಾದ ಮತ್ತು ಕೆಲವು ಇತರೆ ಕಾಯ್ದೆಗಳ ತಿದ್ದುಪಡಿ ಅದ್ಯಾದೇಶ ಮತ್ತು ಇತರೆ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡುವ ಸಾಧ್ಯತೆಯಿದೆ.
ಕೊರೊನಾ ವೈರಸ್ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ಸೂಕ್ಷ್ಮ ಮತ್ತು ಸಣ್ಣ ಉತ್ಪಾದನಾ ವಲಯಕ್ಕೆ ಸಬ್ಸಡಿ ರೂಪದಲ್ಲಿ ಶೇ 10 ರಿಂದ 6ಕ್ಕೆ ಬಡ್ಡಿ ದರವನ್ನು ಇಳಿಸಿ ಕರ್ನಾಟಕ ಹಣಕಾಸು ನಿಗಮದಿಂದ ಸಹಕಾರ ನೀಡುವುದರ ಬಗ್ಗೆ ತೀರ್ಮಾನವಾಗಲಿದೆ. ಅದರೊಂದಿಗೆ ಮಹತ್ವದ ಕರ್ನಾಟಕ ಗಡಿ ಮತ್ತು ಹಿಸ್ಸಾ ಭೂಪ್ರದೇಶವನ್ನು ಕೆ-ಜಿಐಎಸ್ ಮೂಲಕ ಗುರುತಿಸುವುದು ಮತ್ತು ಮೇಲ್ದರ್ಜೆಗೇರಿಸುವುದಕ್ಕೆ ಸಂಪುಟ ಅನುಮೋದನೆ ನೀಡಲಿದೆ.

ಪಿಂಚಣಿ ಕುರಿತು
ಪಿಂಚಣಿ, ಸಣ್ಣ ಉಳಿತಾಯ ಮೌಲ್ಯಮಾಪನ-ಹೊಣೆಗಾರಿಕೆಗಳ ಮೇಲ್ವಿಚಾರಣೆಯನ್ನು ಖಜಾನೆಗಳ ನಿರ್ದೇಶನಾಲಯಕ್ಕೆ ಸೇರ್ಪಡೆಗೊಳಿಸುವುದು. ಬೀದರ್ ವೈದ್ಯಕೀಯ ಕಾಲೇಜುಗಳಿಗೆ 29.87 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವೈದ್ಯಕೀಯ ಸೇರಿದಂತೆ ಇತರ ಉಪಕರಣ ಖರೀದಿಗೆ ಅನುಮೋದನೆ ನೀಡುವ ಸಾಧ್ಯತೆಯಿದೆ.

ಕೋವಿಡ್ ನಿಯಂತ್ರಣ
ರಾಜ್ಯದಲ್ಲಿ ನಿಯಂತ್ರಣಕ್ಕೆ ನಿಗದಂತೆ ಏರುತ್ತಿರುವ ಕೋವಿಡ್-19 ನಿಯಂತ್ರಣ, ಟೆಸ್ಟಿಂಗ್ ಹೆಚ್ಚಳ ಮಾಡುವುದು, ಸ್ಥಳೀಯ ಮಟ್ಟದಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಹಾಗೂ ಅನುದಾನ ನೀಡುವ ಬಗ್ಗೆಯೂ ಸಮಗ್ರವಾಗಿ ಸಂಪುಟ ಸಭೆಯಲ್ಲಿ ಚೆರ್ಚೆ ನಡೆಯಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಬಿಬಿಎಂಪಿ ಆಗಿರುವ ಅಕ್ರಮಗಳ ಬಗ್ಗೆ ಕಾಂಗ್ರೆಸ್ ನಾಯಕರು ಹೋರಾಟಕ್ಕೆ ಮುಂದಾಗಿರುವ ಬಗ್ಗೆಯೂ ಸಂಪುಟದಲ್ಲಿ ಗಂಭೀರ ಚೆರ್ಚೆ ನಡೆಯಲಿದೆ ಎನ್ನಲಾಗಿದೆ.












Click it and Unblock the Notifications