ಸೋಂಕಿಗೆ ತುತ್ತಾಗುತ್ತಿರುವವರಲ್ಲಿ ಯಡಿಯೂರಪ್ಪ ವಿಶೇಷ ಮನವಿ!
ಬೆಂಗಳೂರು, ಜು. 21: ಕೊರೊನಾ ವೈರಸ್ ಸೋಂಕಿಗೆ ತುತ್ತಾಗುತ್ತಿರುವವರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಇಂದು ರಾಜ್ಯದ ಜನರನ್ನು ಉದ್ದೇಶಿಸಿ ಮೊದಲ ಬಾರಿ ಯಡಿಯೂರಪ್ಪ ಅವರು ಮಾತನಾಡಿದರು. ನಂತರ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
Recommended Video
ಹೌದು, ಕೊರೊನಾ ವೈರಸ್ನಿಂದ ಮೃತಪಟ್ಟವರಿಗಿಂತ ಆ ಸೋಂಕು ತಗುಲಿದರೆ ಸಾವು ಪಕ್ಕಾ ಎಂಬಂತೆ ಬಿಂಬಿತವಾಗಿದೆ. ಹೀಗಾಗಿ ಕೋವಿಡ್-19 ಸೋಂಕಿದೆ ಎಂದು ಖಚಿತವಾಗುತ್ತಿದ್ದಂತೆಯೆ ರೋಗಿಯ ಆರೋಗ್ಯದಲ್ಲಿ ಏರುಪೇರಾಗುತ್ತಿವೆ ಎಂದು ತಜ್ಞರೂ ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ವೈರಸ್ನಿಂದ ಆಗುವ ಪರಿಣಾಮಕ್ಕಿಂತ ಅದರ ಭಯದಿಂದಲೇ ಸೋಂಕಿತರ ರೋಗ ನಿರೋಧಕ ಶಕ್ತಿ ಕುಂದುವ ಸಾಧ್ಯತೆಗಳಿವೆ ಎಂದು ತಜ್ಞ ವೈದ್ಯರೂ ಹೇಳಿದ್ದಾರೆ.

ಸೋಂಕಿತರ ಆತ್ಮಹತ್ಯೆ
ಕೊರೊನಾ ವೈರಸ್ ಸೋಂಕಿನ ಕುರಿತು ಇರುವ ಅನಗತ್ಯ ಭಯವನ್ನು ಹೋಗಲಾಡಿಸಲು ಕೆಲವು ವೈದ್ಯರು ತಿಳಿವಳಿಕೆ ಹೇಳುತ್ತಿದ್ದಾರೆ. ಆದರೂ ಕೋವಿಡ್ ಆತಂಕ ಮಾತ್ರ ಜನರಿಂದ ದೂರವಾಗಿಲ್ಲ. ಹೀಗಾಗಿ ಸೋಂಕು ಇದೇ ಎಂಬ ಒಂದೇ ಕಾರಣಕ್ಕೆ ರಾಜ್ಯದಲ್ಲಿ ಸುಮಾರು 12ಕ್ಕೂ ಹೆಚ್ಚು ಜನರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಕೂಡ ಇಬ್ಬರು ಕೋವಿಡ್ ಸೋಂಕು ತಗುಲಿರುವ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮತ್ತಿಕೆರೆ ಹಾಗೂ ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿಯೊಬ್ಬರು ಸೋಂಕಿನ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 3, ಕೆಸಿ ಜನರಲ್ ಆಸ್ಪತ್ರೆಯಲ್ಲಿ 2 ಹಾಗೂ ಆಸ್ಪತ್ರೆಗೆ ಸಾಗಿಸುವಾಗ ಕೆಎಸ್ಆರ್ಪಿ ಪೊಲೀಸ್ ಒಬ್ಬರು ಸೋಂಕಿನ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡರೆಲ್ಲರೂ ಕೋವಿಡ್ ಸೋಂಕಿನ ಲಕ್ಷಣಗಳನ್ನು ಹೊಂದಿರಲಿಲ್ಲ ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು ಎಂಬುದು ಆತಂಕಕ್ಕೆ ಕಾರಣ.

ಯಡಿಯೂರಪ್ಪ ಮನವಿ
ಕೋವಿಡ್ ಸೋಂಕು ದೃಢಪಟ್ಟರೆ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಂಕಿಗೆ ತುತ್ತಾಗುತ್ತಿರುವವರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಕೋವಿಡ್ ಪಾಸಿಟಿವ್ ಎಂದ ತಕ್ಷಣ ಆತ್ಮಹತ್ಯೆ ಮಾಡಿಕೊಂಡಂತಹ ಪ್ರಕರಣಗಳು ಕಾಣ್ತಾಯಿದೆ. ನಾನು ಕೈಜೋಡಿಸಿ ಪ್ರಾರ್ಥನೆ ಮಾಡ್ತೇನೆ, ನೂರಕ್ಕೆ 98 ಜನ ಕೋವಿಡ್ ಆದಂಥವರು ಗುಣಮುಖರಾಗಿ ಹೊರಗೆ ಬರುತ್ತಿದ್ದಾರೆ.
ಯಾವುದೇ ತೊಂದರೆ ಇಲ್ಲ ಅನ್ನೋದು ನಿಮಗೆ ಸ್ಪಷ್ಟವಾಗಿ ಗೊತ್ತಿದ್ದ ಮೇಲೂ ಸಹ ಈ ರೀತಿ ಆತ್ಮಹತ್ಯೆಗೆ ಪ್ರಯತ್ನ ಮಾಡುವಂಥದ್ದು ಯಾವುದೇ ಕಾರಣಕ್ಕೂ ಸರಿಯಲ್ಲ. ಅದಕ್ಕೆ ಕೈಹಾಕಬಾರದು ಅಂತಾ ನಾನು ಪ್ರಾರ್ಥನೆಯನ್ನು ಮಾಡ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಂಕಿಗೆ ತುತ್ತಾಗುತ್ತಿರುವವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರ ಎಚ್ಚೆತ್ತುಕೊಳ್ಳಲಿ
ಸರ್ಕಾರವೇಆದರೆ ಕೋವಿಡ್ ಸೋಂಕಿತರ ಆತ್ಮಹತ್ಯೆಗೆ ಸರ್ಕಾರವೇ ಕಾರಣದ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋವಿಡ್-19 ನಿಂದ ಸೃಷ್ಟಿಯಾಗಿರುವ ನವಯುಗದ ತಾರತಮ್ಯ, ಅಸ್ಪೃಶ್ಯತೆಗೆ ಮನನೊಂದು ದೊಡ್ಡಬಳ್ಳಾಪುರದ ನಾಗರಾಜ್ ಎಂಬುವರು ಆತ್ಮಹತ್ಯೆಗೆ ಶರಣಾದರೆಂಬ ಸುದ್ದಿ ತಿಳಿದು ಬೇಸರವಾಗಿದೆ.
ಸರ್ಕಾರ ಸೋಂಕಿತರು, ಕುಟುಂಬದವರ ವಿಚಾರದಲ್ಲಿ ಸೂಕ್ಷ್ಮವಾಗಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದು ಇದೇ ಕಾರಣಕ್ಕೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಆರೋಪಿಸಿದ್ದಾರೆ.

ನವಯುಗದ ಅಸ್ಪೃಶ್ಯತೆ
ಕ್ವಾರಂಟೈನ್ ಮಾಡಲೆಂದು ಸೋಂಕಿತರ ಮನೆಗಳ ಮುಂದೆ ಸೂಚನಾ ಫಲಕ ಹಾಕುವುದು, ಅವರ ಮನೆ ಬಂದ್ ಮಾಡುವುದು ಹೊಸ ತಾರತಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತದೆ ಎಂದು ನಾನು ಹಿಂದೆಯೇ ಹೇಳಿದ್ದೆ. ಸರ್ಕಾರದ ಅವಾಂತರಗಳಿಗೆ ಇದೊಂದು ಉದಾಹರಣೆಯಷ್ಟೆ. ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂಥ ಘಟನೆಗಳು ಹೆಚ್ಚದಿರಲಿ. ಸರ್ಕಾರ ಜವಾಬ್ದಾರಿ ಮೆರೆಯಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.












Click it and Unblock the Notifications