ಅಂಗನವಾಡಿ ಕಾರ್ಯಕರ್ತೆ ಸಂಕಷ್ಟ ಕೇಳಿ ಕಣ್ಣಾಲಿ ತುಂಬಿಕೊಂಡ ಯಡಿಯೂರಪ್ಪ!
ಬೆಂಗಳೂರು, ಜೂ. 09: ಎಂಥದ್ದೆ ಪರಿಸ್ಥಿತಿ ಎದುರಾದರೂ ಸಮಚಿತ್ತದಿಂದ ಎದುರಿಸುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಣ್ಣಾಲಿಗಳು ತುಂಬಿಕೊಂಡ ಪ್ರಸಂಗ ಇವತ್ತು ನಡೆಯಿತು. ಸದಾ ರಾಜಕೀಯ, ಜನರ ಸಮಸ್ಯೆಗಳು, ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟದ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ವಿಡಿಯೋ ಸಂವಾದ ನಡೆಸಿ, ಅವರ ಕಾರ್ಯನಿರ್ವಹಣೆ, ಸಮಸ್ಯೆಗಳು, ಸವಾಲುಗಳು ಮತ್ತು ಇತರ ವಿಷಯಗಳ ಕುರಿತು ಚರ್ಚಿಸಿದರು.
ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ತಳಹಂತದಲ್ಲಿ ಅಂಗನವಾಡಿ ಕಾರ್ಯಕರ್ತೆಯರೂ, ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಆರು ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರ ಆರೋಗ್ಯ ರಕ್ಷಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅತಿ ಮುಖ್ಯವಾದುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಎಲ್ಲರ ಕಣ್ಣಾಲಿಗಳು ತುಂಬಿದ ಪ್ರಸಂಗ ನಡೆಯಿತು.
ತುಂಬಿದ ಯಡಿಯೂರಪ್ಪ ಕಣ್ಣಾಲಿಗಳು!
"ನಮ್ಮ ಕುಟುಂಬದ ಎಲ್ಲಾ ನಾಲ್ವರಿಗೂ ಕೋವಿಡ್ ಸೋಂಕು ತಗುಲಿತ್ತು. ನಾಲ್ವರೂ ಚಿಕಿತ್ಸೆ ಪಡೆದೆವು. ಅತ್ತೆ ಸೇರಿ ಮೂವರೂ ಹುಷಾರಾಗಿ ಮನೆಗೆ ಬಂದೆವು. ಆದರೆ ಪತಿ ಸಾವಿಗೀಡಾದರು" ಎಂದು ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸೇರಿದಂತೆ ಎಲ್ಲರ ಕಣ್ಣಾಲಿಗಳು ತುಂಬಿ ಬಂದಿದ್ದವು.
ಗಿರಿಜಾ ಅವರು ಬೆಂಗಳೂರಿನ ಭುವನೇಶ್ವರಿ ನಗರದ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಸೋಂಕಿನಿಂದ ಪತಿಯ ವಿಯೋಗ ಹಾಗೂ ಇತ್ತೀಚೆಗಷ್ಟೇ ಕೋವಿಡ್ನಿಂದ ಮುಕ್ತರಾಗಿರುವ ಅತ್ತೆ ಮತ್ತು ಮಗುವಿನ ನಡುವೆ ಎಲ್ಲವನ್ನೂ ಮರೆತು ಅವರು ಅಂಗನವಾಡಿಯಲ್ಲಿ ಮತ್ತೆ ಕಾರ್ಯನಿರತರಾಗಿದ್ದಾರೆ. ಸ್ವಂತ ಕಷ್ಟದ ಮಧ್ಯಯೂ ಅವರು ಮತ್ತೆ ಸೇವೆಗೆ ಮರಳಿರುವುದನ್ನು ಸಿಎಂ ಯಡಿಯೂರಪ್ಪ ಅವರು ಕೊಂಡಾಡಿದರು.
ಆರೋಗ್ಯದ ಬಗ್ಗೆ ಎಚ್ಚರವಿರಲಿ!
ಇದೇ ಸಂದರ್ಭದಲ್ಲಿ ಗಿರಿಜಾ ಅವರಿಗೆ ಸಾಂತ್ವನ ಮತ್ತು ಧೈರ್ಯ ಹೇಳಿದ ಯಡಿಯೂರಪ್ಪ ಅವರು, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಸಲಹೆ ಮಾಡಿದರು. ಸಂಕಷ್ಟದ ಸಂದರ್ಭದಲ್ಲೂ ಕಾರ್ಯತತ್ಪರತೆ ಮೆರೆದ ಅವರನ್ನು ಸಿಎಂ ಯಡಿಯೂರಪ್ಪ ಅವರು ಅಭಿನಂದಿಸಿದರು. ವಿಡಿಯೋ ಸಂವಾದದಲ್ಲಿ ರಾಜ್ಯದ ಹಲವು ಭಾಗಗಳ ಜನರ ಸಂಕಷ್ಟವನ್ನು ನೇರವಾಗಿ ಅರಿಯುವುದು ಯಡಿಉಯೂರಪ್ಪ ಅವರಿಗೆ ಸಾಧ್ಯವಾಯಿತು.
ವಿಡಿಯೋ ಸಂವಾದದಲ್ಲಿ ಕೋಲಾರ ಜಿಲ್ಲೆಯ ಎರ್ರಂವಾರಿಪಲ್ಲಿಯ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ ಅವರು ತಮ್ಮ ಅನುಭವ ಹಂಚಿಕೊಂಡರು. ""ಜನರಿಗೆ ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ಭಯವಿತ್ತು. ಎರಡನೇ ಅಲೆ ಮೊದಲನೇ ಅಲೆಗಿಂತ ತೀವ್ರವಾಗಿದ್ದರೂ ಕೂಡ ಭಯವೇ ಇಲ್ಲ. ಕೋವಿಡ್ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಸವಾಲಿನ ಕೆಲಸವಾಗಿದೆ. ಆದರೂ ಆಶಾ ಕಾರ್ಯಕರ್ತೆಯರ ಜೊತೆಗೂಡಿ ಈ ದಿಸೆಯಲ್ಲಿ ಪ್ರಯತ್ನಿಸಿ ಯಶಸ್ವಿಯಾಗುತ್ತಿದ್ದೇವೆ"" ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿದರು.
ಗರ್ಭಿಣಿಯರು & ಬಾಣಂತಿಯರ ಆರೋಗ್ಯ ರಕ್ಷಣೆ
ಅಂಗನವಾಡಿ ಕಾರ್ಯಕರ್ತೆಯ ಜವಾಬ್ದಾರಿಗಳ ಜೊತೆ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಇತರ ಸಮೀಕ್ಷೆಗಳಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ಮನೆ ಮನೆಗೆ ಭೇಟಿ ನೀಡಿ ಪೌಷ್ಠಿಕ ಆಹಾರ ವಿತರಣೆ ಮತ್ತು ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸುವುದು ಕಷ್ಟದಾಯಕವಾಗಿದೆ ಎಂದು ಬಳ್ಳಾರಿ ಜಿಲ್ಲೆಯ ಎನ್. ನಾಗರತ್ನ ಅವರು ಹೇಳಿದರು.
ಅತ್ಯಂತ ಕೆಳಸ್ತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು-ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ರಕ್ಷಣೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಯಶಸ್ವಿ ಕಾರ್ಯಾಚರಣೆ ನಡೆಸಿ ಮಾನವೀಯತೆ ಮೆರೆದಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದದ್ದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಮೆಚ್ಚುಗೆ ಸೂಚಿಸಿದರು.
Recommended Video
ಭರವಸೆ ಕೊಟ್ಟ ಯಡಿಯೂರಪ್ಪ ಮಾತು!
ಅಂಗನವಾಡಿ ಕಾರ್ಯಕರ್ತೆಯರನ್ನು ‘ಕರೋನಾ ಸೇನಾನಿ' ಗಳೆಂದು ಘೋಷಿಸಿ 2000 ರೂ.ಗಳ ಪ್ರೋತ್ಸಾಹ ಧನ ಹಾಗೂ ಕಾರ್ಯನಿರತರಾದಾಗ ಮೃತಪಟ್ಟವರಿಗೆ 30 ಲಕ್ಷ ರೂ.ಗಳ ಪರಿಹಾರ ನೀಡುತ್ತಿರುವುದಕ್ಕೆ ಹಲವು ಅಂಗನವಾಡಿ ಕಾರ್ಯಕರ್ತೆಯರು ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ಮೊದಲ ಅಲೆಯ ಸಂದರ್ಭದಲ್ಲಿ ಒಟ್ಟು 20 ಜನ ಕಾಯಕರ್ತೆಯರು ಹಾಗೂ ಸಹಾಯಕಿಯರು ಮೃತಪಟ್ಟಿದ್ದು, ಅವರಿಗೆ ತಲಾ 30 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ಯಡಿಯೂರಪ್ಪ ಅವರು ತಿಳಿಸಿದರು.
ಕುಗ್ರಾಮಗಳಲ್ಲಿ ಸೇವಾ ನಿರತರಾಗಿರುವ ಕಿರಿಯ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮೊಡನೆ, ರಾಜ್ಯದ ಸಿಎಂ ನೇರವಾಗಿ ಮಾತನಾಡಿದ್ದು ಹೆಚ್ಚಿನ ಉತ್ಸಾಹ ನೀಡಿದಂತಾಗಿದೆ ಎಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಂಜುಳಾ ಸಂಗಮೇಶ ಅವರು ಖುಷಿಯಾದರು. ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಬಗ್ಗೆ ಸುಲಲಿತವಾಗಿ ವಿವರಣೆ ನೀಡಿ ಉಪಯುಕ್ತ ಸಲಹೆಗಳನ್ನೂ ನೀಡಿದ ಮಂಜುಳಾ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದಿಸಿ ಬೆಂಗಳೂರಿಗೆ ಭೇಟಿ ನೀಡಿದಾಗ ತಮ್ಮ ಅಧಿಕೃತ ನಿವಾಸಕ್ಕೆ ಬಂದು ಆತಿಥ್ಯ ಸ್ವೀಕರಿಸುವಂತೆ ಆಹ್ವಾನಿಸಿದರು.