ಕರ್ನಾಟಕ ಬಂದ್; ಯಡಿಯೂರಪ್ಪ ಭಾಷಣದ 5 ಪ್ರಮುಖ ಅಂಶಗಳು
ಬೆಂಗಳೂರು, ಸೆಪ್ಟೆಂಬರ್ 28 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ದಲಿತ, ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ಬಂದ್ ನಡೆಯುತ್ತಿದೆ. ಬಂದ್ ದಿನವೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದರು.
ಸೋಮವಾರ ರಾಜ್ಯವನ್ನು ಉದ್ದೇಶಿಸಿ ಗೃಹ ಕಚೇರಿ ಕೃಷ್ಣಾದಿಂದ ಮಾತನಾಡಿದ ಯಡಿಯೂರಪ್ಪ ಅವರು, "ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ನಾನು ರೈತರ ಪರವಾಗಿ ಇದ್ದೇನೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ" ಎಂದು ಹೇಳಿದರು.
"ಇಂದು ಚಳವಳಿ ಮಾಡಿ, ಬಳಿಕ ಚರ್ಚೆಗೆ ಬನ್ನಿ. ಬಿಲ್ನಲ್ಲಿ ಏನಿದ್ದರೂ ಬದಲಾವಣೆ ಬೇಕಾದರೆ ಮಾಡೋಣ" ಎಂದು ರೈತ ಸಂಘಟನೆಗಳ ಮುಖಂಡರಿಗೆ ಕರೆ ನೀಡಿದ ಯಡಿಯೂರಪ್ಪ ಅವರು, "ಕೆಲವರು ರೈತರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಪ್ರತಿಪಕ್ಷಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
"ಕಾಂಗ್ರೆಸ್ನವರು ಈ ಮೊದಲು ಕಾಯ್ದೆ ಜಾರಿಗೆ ಬಾರದಂತೆ ಪ್ರಯತ್ನ ನಡೆಸಿದರು. ಈಗ ನಾವು ಮಾಡಲು ಹೊರಟಿದ್ದಕ್ಕೆ ವಿರೋಧಿಸುತ್ತಿದ್ದಾರೆ. ಎಪಿಎಂಸಿ ಸಿಬ್ಭಂದಿಗೆ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ" ಎಂದು ಯಡಿಯೂರಪ್ಪ ಭರವಸೆ ನೀಡಿದರು.

ನನ್ನಿಂದ ರೈತರಿಗೆ ಅನ್ಯಾಯವಾಗುವುದಿಲ್ಲ
"ರೈತರನ್ನು ಅನಗತ್ಯವಾಗಿ ಗೊಂದಲದಲ್ಲಿ ದೂಡದಂತೆ ಮನವಿ ಮಾಡುವೆ. ನನ್ನಿಂದ ರೈತ ಸಮುದಾಯಕ್ಕೆ ಎಂದಿಗೂ ಅನ್ಯಾಯವಾಗುವುದಿಲ್ಲ. ಪ್ರಧಾನಿ ಮೋದಿ ಒಳ್ಳೆಯ ಉದ್ದೇಶದಿಂದ ಇದನ್ನು ಜಾರಿಗೆ ತಂದಿದ್ದಾರೆ. ರೈತರಿಗೆ ಬೇಕಾದ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಕಿಸಾನ್ ಸಮ್ಮನ್ ಯೋಜನೆಯಡಿ ರೈತರಿಗೆ ಹಣ ನೀಡಲಾಗಿದೆ" ಎಂದು ಯಡಿಯೂರಪ್ಪ ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ
"ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ತಮ್ಮ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಬಹುದು. ಎಪಿಎಂಸಿ ಬಾಗಿಲನ್ನು ನಾವು ಮುಚ್ಚಿಲ್ಲ. ಎಪಿಎಂಸಿಯಲ್ಲಿ ಬೇಕಾದರೂ ರೈತರು ಬೆಳೆಯನ್ನು ಮಾರಾಟ ಮಾಡಲು ಅವಕಾಶವಿದೆ. 1 ವರ್ಷದ ತನಕ ಕಾದು ನೋಡಿ, ಕಾಯ್ದೆಯ ಪ್ರಯೋಜನ ನಿಮಗೆ ತಿಳಿಯಲಿದೆ" ಎಂದು ಯಡಿಯೂರಪ್ಪ ವಿವರಣೆ ನೀಡಿದರು.

ಕೈಗಾರಿಕೆಗಳನ್ನು ಸ್ಥಾಪಿಸೋಣ
"ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದಾಗಿ ಯಾರೂ ಬೇಕಾದರೂ ಕೃಷಿ ಮಾಡಬಹುದು. ಕರ್ನಾಟಕಕ್ಕೆ ಕೈಗಾಗಿಕೆಗಳು ಬರಬೇಕಿದೆ. ಕೃಷಿಗೆ ಯೋಗ್ಯವಲ್ಲದ ಜಮೀನಿನಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬಹುದು. ಆದರೆ, ನೀರಾವರಿ ಜಮೀನಿನಲ್ಲಿ ಕೃಷಿಯನ್ನೇ ಮಾಡಬೇಕು ಎಂಬ ನಿಯಮ ತಿದ್ದುಪಡಿ ಕಾಯ್ದೆಯಲ್ಲಿದೆ" ಎಂದು ಯಡಿಯೂರಪ್ಪ ಹೇಳಿದರು.

ಕಮೀಷನ್ಗೆ ಕಡಿವಾಣ ಹಾಕಿದ್ದೇವೆ
"ದಲ್ಲಾಳಿಗಳು ಪಡೆಯುತ್ತಿದ್ದ ಕಮೀಷನ್ಗೆ ನಾವು ಕಡಿವಾಣವನ್ನು ಹಾಕಿದ್ದೇವೆ. ಸಣ್ಣ ರೈತರ ಭೂಮಿಯನ್ನು ಬಲವಂತದಿಂದ ಕಿತ್ತುಕೊಳ್ಳುವಂತಿಲ್ಲ. 54 ಎಕರೆ ಜಮೀನು ಮಾತ್ರ ಖರೀದಿಗೆ ಅವಕಾಶ ಮಾಡಿದ್ದೇವೆ. 5 ಜನರು ಕುಟುಂಬ 54 ಎಕರೆ ಜಮೀನು ಖರೀದಿ ಮಾಡಬಹುದು. ಹಿಂದೆಯೂ ಈ ನಿಯಮ ಜಾರಿಯಲ್ಲಿತ್ತು" ಎಂದು ಯಡಿಯೂರಪ್ಪ ಹೇಳಿದರು.
Recommended Video

ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ
"ರೈತ ಮುಖಂಡರನ್ನು ಕರೆಸಿ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಕಾಯ್ದೆಗಳಿಂದ ಆಗುವ ಅನುಕೂಲದ ಬಗ್ಗ ವಿವರಣೆ ನೀಡಿದ್ದೇನೆ. ಅವರು ಪ್ರತಿಭಟನೆ ಮಾಡುವ ಉದ್ದೇಶದಿಂದ ಬಂದಿದ್ದಾರೆ. ನಾನು ಅಧಿಕಾರಕ್ಕಾಗಿ ಅಂಟಿಕೊಂಡು ಕುಳಿತಿಲ್ಲ. ರೈತರ ಪರವಾಗಿ ಇದ್ದೇನೆ" ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications