ಸಿಎಂ ಸಿದ್ದು ಪುತ್ರ ಮರಳು- ವರ್ಗಾವಣೆ ದಂಧೆಯಲ್ಲಿ ಭಾಗಿ
ಟಿ ನರಸೀಪುರ, ಏ. 4: ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಗ್ರಹಗತಿ ಚೆನ್ನಾಗಿದ್ದಂತಿಲ್ಲ. ಸಿದ್ದರಾಮಯ್ಯ ಸರಕಾರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದೆ ಎಂದು ಮತ್ತೊಮ್ಮೆ ಸಂಸದರಾಗಲು ಹೊರಟಿರುವ ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರು ಆರೋಪಿಸಿರುವುದರ ಬೆನ್ನಿಗೆ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರ ಪುತ್ರರು ನಿರಂತರವಾಗಿ ಅಕ್ರಮ ಮರಳು ಹಾಗೂ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸ್ತಿಯ ಬಗ್ಗೆಯೂ ಸಿಬಿಐ ತನಿಖೆಯಾಗಲಿ. ಮುಖ್ಯಮಂತ್ರಿ ಹಾಗೂ ಸಚಿವರೊಬ್ಬರ ಪುತ್ರರತ್ನರು ಮಾಡುತ್ತಿರುವ ವರ್ಗಾವಣೆ ಮತ್ತು ಮರಳು ದಂಧೆಯ ಬಗ್ಗೆಯೂ ತನಿಖೆ ಮಾಡಿಸುವಂತೆ ಸಿದ್ದು ತವರು ಕ್ಷೇತ್ರದಲ್ಲಿಯೇ ಈಶ್ವರಪ್ಪ ಬಹಿರಂಗ ಸವಾಲು ಹಾಕಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಲೋಕಸಭೆ ಚುನಾವಣೆ ನಂತರ ಅಪ್ಪಂದಿರು (ಸಿದ್ದರಾಮಯ್ಯ ಮತ್ತು ಮಹದೇವಪ್ಪ) ಅಧಿಕಾರ ಕಳೆದುಕೊಳ್ಳುವುದರಿಂದ ಈಗಾಗಲೇ ಲೆಕ್ಕವಿಲ್ಲದಷ್ಟು ಕೊಳ್ಳೆ ಹೊಡೆಯಲಾಗುತ್ತಿದೆ. ಅಪ್ಪಂದಿರ ಪರವಾಗಿ ಮಕ್ಕಳೇ ಟ್ರಾನ್ಸಫರ್ ದಂಧೆ ಮತ್ತು ಮರಳಿನ ಲೂಟಿಯಲ್ಲಿ ತೊಡಗಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.












Click it and Unblock the Notifications