ಪ್ರತಾಪ್ ಸಿಂಹರನ್ನ ಲೋಕಸಭೆ ಚುನಾವಣೆ ಕಣದಿಂದ ತಪ್ಪಿಸಲು ಸ್ವತಃ ಸಿಎಂ ಷಡ್ಯಂತ್ರ: ಮಾಜಿ ಸಿಎಂ ಹೇಳಿದ್ದೇನು?
ಬೆಂಗಳೂರು, ಜನವರಿ 06: ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಹಾಗೂ ಅವರನ್ನು ಲೋಕಸಭೆ ಚುನಾವಣೆ ಕಣದಿಂದ ತಪ್ಪಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಷಡ್ಯಂತ್ರ ರೂಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಈ ಕುರಿತು ಮಾತನಾಡಿದ ಅವರು, ಮರ ಕಡಿದ ಆರೋಪಕ್ಕೆ ಗುರಿ ಆಗಿರುವ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಮೇಲೆ ಸರಕಾರ ನಡೆಸುತ್ತಿರುವ ದಬ್ಬಾಳಿಕೆ ಬಗ್ಗೆ ಹಲವಾರು ಅನುಮಾನಗಳು ಇವೆ. ಎ1, ಎ2 ಎಂದು ಜಯಮ್ಮ, ರಾಕೇಶ್ ಶೆಟ್ಟಿ ಹೆಸರು ಉಲ್ಲೇಖ ಮಾಡಿದ್ದಾರೆ.

ಕೇಸ್ ನಲ್ಲಿ ಎ3 ಇರಲಿಲ್ಲ. ಅಲ್ಲಿ ಸ್ಥಳೀಯ ಒಬ್ಬ ಪುಢಾರಿ ಸಿಎಂಗೆ ಮಾಹಿತಿ ಕೊಟ್ಟು ಪ್ರತಾಪ್ ಸಿಂಹ ಗೆ ಪಾಠ ಕಲಸಬೇಕು ಎಂದು ಅಂತ ತಲೆ ತಿಂದ. ವಿವೇಚನೆ ಕಳೆದುಕೊಂಡ ಸಿಎಂ ಸಿದ್ದರಾಮಯ್ಯ ಆಗ ಅಧಿಕಾರಿಗಳಿಗೆ ಕರೆ ಮಾಡಿ ಬೀಟೆ ಮರ ಕಡಿದು ಅ ಜಾಗದಲ್ಲಿ ಹಾಕುವಂತೆ ಹೇಳಿದ್ದರು ಎಂದು ಮುಖ್ಯಮಂತ್ರಿ ಮೇಲೆ ಕುಮಾರಸ್ವಾಮಿ ನೇರ ಆರೋಪ ಮಾಡಿದ ಅವರು, ಸಿಎಂ ಅವರು ಸಾಚಾ ಆಗಿದ್ದರೆ ಹೇಳಲಿ. ಅವರ ಪೋನ್ ಕಾಲ್ ಲೀಸ್ಟ್ ತೆಗೆಯಿರಿ, ಸತ್ಯ ಗೊತ್ತಾಗುತ್ತದೆ ಎಂದು ಆರೋಪಿಸಿದರು.
ಅನಗತ್ಯವಾಗಿ ಪ್ರತಾಪ್ ಸಿಂಹ ಅವರ ಸಹೋದರನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ ಎಂಬುದು ಹೊರಗೆ ಬರಲಿ. ಕಾಂಗ್ರೆಸ್ ನವರು ವಿರೋಧಿಗಳ ದನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಕರ ಸೇವಕರ ಮೇಲೆ ದೌರ್ಜನ್ಯ. ಇದು ನಾಚಿಕೆಗೇಡು. ವಿಕ್ರಂ ಸಿಂಹ ಮೇಲಿನ ಪ್ರಕರಣ ಅಧಿಕಾರ ದುರ್ಬಳಕೆಯ ಪರಮಾವಧಿ ಎಂದು ಅವರು ಕಿಡಿ ಕಾರಿದರು.
ಆ ಭೂಮಿಯನ್ನು ವಿಕ್ರಂಸಿಂಹ ಗುತ್ತಿಗೆಗೆ ತೆಗೆದುಕೊಂಡಿದ್ದರು. ಮರ ಕಡಿದಿದ್ದು ಜಯಮ್ಮ ಹಾಗೂ ಇನ್ನೊಬ್ಬ ವ್ಯಕ್ತಿ. ಬೀಟೆ ಮರವನ್ನು ವಿಕ್ರಂ ಸಿಂಹ ಜಾಗಕ್ಕೆ ತಂದು ಹಾಕಿ ಎಂದು ಅಧಿಕಾರಿಗಳಿಗೆ ಕುಮ್ಮಕ್ಕು ಕೊಟ್ಟಿದ್ದು ಸಿಎಂ. ಸಿಎಂ ಅವರೇ ಮರ ಕಡಿದು ಹಾಕಿ ಅಂತ ಹೇಳಿ ಬೀಟೆ ಮರ ಹಾಕಿಸಿದ್ದಾರೆ.ಮಂಡ್ಯದಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರು ಸರಕಾರಿ ಜಮೀನಿನಲ್ಲಿ ಮರ ಕಡಿದರು. ಅವರ ಮೇಲೆ ಯಾಕೆ ಕ್ರಮ ಆಗಿಲ್ಲ. ಇದಕ್ಕೆ ಸಿಎಂ, ಗೃಹ ಸಚಿವರೇ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಸರಕಾರ ಮಾಡಿದ ತಪ್ಪಿಗೆ ದಲಿತ ಅಧಿಕಾರಿಗೆ ಶಿಕ್ಷೆ ಕೊಡಲಾಗಿದೆ. ಅಮಾನತು ಆಗಿರುವ DFO ದಲಿತ ಸಮುದಾಯದ ಅಧಿಕಾರಿ. ಯಾಕೆ ಈ ಅಧಿಕಾರಿಯನ್ನು ಅಮಾನತು ಮಾಡಿದಿರಿ. ಈತ ಪ್ರಾಮಾಣಿಕ ದಲಿತ ಅಧಿಕಾರಿ. ಅವರ ಮೇಲೆ ಯಾಕೆ ಕ್ರಮ ಆಯಿತು?ಹಾಸನಕ್ಕೆ ಯಾರ ಶಿಫಾರಸು ಮೇರೆಗೆ ಅವರನ್ನು ಪೋಸ್ಟಿಂಗ್ ಮಾಡಿದಿರಿ? ಅವರನ್ನು ಹಾಸನಕ್ಕೆ ಹಾಕಿಸಲು ಯಾವ MLA ಬಂದು ಕೂತಿದ್ದ? ಆ ಶಾಸಕ ಆ ಅಧಿಕಾರಿಯಿಂದ ಎಷ್ಟು ಹಣ ತೆಗೆದುಕೊಂಡ?ಯಶವಂತಪುರದಲ್ಲಿ ಹಣ ವ್ಯವಹಾರ ಆಗಿದೆ. ಯಶವಂತಪುರದಲ್ಲಿ ಹಣದ ಡೀಲ್ ಆಗಿದೆ. ಅದನ್ನು ಹೊರಗೆ ತೆಗೆಯುವಿರಾ? ಎಂದು ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದರು.
ವಿಕ್ರಮ ಸಿಂಹ ಕೇಸ್ ರಾಜಕೀಯ ಪ್ರೇರಿತ ಎನ್ನುವುದಕ್ಕೆ ಎ1,ಎ2 ಗೆ ಅರಣ್ಯ ಇಲಾಖೆಯ ಅಧಿಕಾರಿಗಳೇ ಜಾಮೀನು ಕೊಡುತ್ತಾರೆ. ಆದರೆ,ವಿಕ್ರಂ ಸಿಂಹ ಭೇಟಿ ಆಗಿ ಮಾಹಿತಿ ಕೊಟ್ಟು ಹೋದರೂ ಆ ಹುಡುಗನ್ನ ಬಂಧನ ಮಾಡಿದರು. ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ನ್ಯಾಯಾಧೀಶರು ಇವರ ಮುಖಕ್ಕೆ ಮಂಗಳಾರತಿ ಮಾಡಿದರು. ವಿಕ್ರಮ ಸಿಂಹ ಅವರನ್ನು ಯಾಕೆ ಅರೆಸ್ಟ್ ಮಾಡಿದರು? ಎಂದು ಪ್ರಶ್ನಿಸಿದರು.












Click it and Unblock the Notifications