ಈ ಬಾರಿ ಕರ್ನಾಟಕ ಬಜೆಟ್ ಗಾತ್ರ ₹3.35 ಲಕ್ಷ ಕೋಟಿಗೆ ಏರಿಕೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜೂನ್ 27: ಜುಲೈ 7ರಂದು ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿ ಬಜೆಟ್ 25,000 ಕೋಟಿ ರೂಪಾಯಿ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ. ಈ ಬಾರಿ ಬಜೆಟ್ ಗಾತ್ರ 3,35,000 ಲಕ್ಷ ಕೋಟಿ ರೂಪಾಯಿಗಳಾಗುವ ಸಾಧ್ಯತೆ ಇದೆ.
ಮಾರ್ಚ್ ತಿಂಗಳಿನಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ್ದ ಬಜೆಟ್ಗಿಂತ ಸಿದ್ದರಾಮಯ್ಯ ಅವರು ಜುಲೈನಲ್ಲಿ ಮಂಡಿಸಲಿರುವ ಬಜೆಟ್ ಗಾತ್ರ ದೊಡ್ಡದಾಗಿರಲಿದೆ. ಬೊಮ್ಮಾಯಿ ಅವರು 3.09 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದರೆ, ಸಿದ್ದರಾಮಯ್ಯ ಅವರು 3.35 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲಿದ್ದಾರೆ.

16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಐದು ಘೋಷಣೆಗಳ ಸುಗಮ ಅನುಷ್ಠಾನಕ್ಕೆ ಅಗತ್ಯವಿರುವ ಹೆಚ್ಚುವರಿ ವೆಚ್ಚವನ್ನು ಸರಿಹೊಂದಿಸಲು ಬಜೆಟ್ ಗಾತ್ರವನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ಚುನಾವಣ ಭರವಸೆ ಈಡೇರಿಸಲು ₹ 60,000 ಕೋಟಿ ಬೇಕು
ಚುನಾವಣಾ ಭರವಸೆಗಳನ್ನು ಅಡೆತಡೆಗಳಿಲ್ಲದೆ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ವಾರ್ಷಿಕ ₹ 59,000 ರಿಂದ ₹ 60,000 ಕೋಟಿ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. "ಸ್ವಾತಂತ್ರ್ಯದ ನಂತರದ ಮೊದಲ ಬಜೆಟ್ ಇಪ್ಪತ್ತೊಂದು ಕೋಟಿ ಮೂರು ಲಕ್ಷ ರೂಪಾಯಿಗಳು, ಇಂದು ಅದು ಸುಮಾರು ಮೂರು ಲಕ್ಷದ ಒಂಬತ್ತು ಸಾವಿರ ಕೋಟಿ ರೂಪಾಯಿಗಳು. ನಾನು ಜುಲೈ 7 ರಂದು ಹೊಸ ಬಜೆಟ್ ಅನ್ನು ಮಂಡಿಸುತ್ತೇನೆ. ಅದು (ಗಾತ್ರದ) ಮೂರು ಲಕ್ಷದ ಮೂವತ್ತರಿಂದ ಮೂವತ್ತೈದು ಸಾವಿರ ಕೋಟಿ ರೂ. ಇರಬಹುದು. '' ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
"ಈಗಿನ ಬಜೆಟ್ ಸುಮಾರು ಮೂರು ಲಕ್ಷದ ಒಂಬತ್ತು ಸಾವಿರದ ಎಂಟುನೂರ ತೊಂಬತ್ತಾರು ಕೋಟಿ ರೂಪಾಯಿಗಳು, ನಾನು ಐದು ಖಾತರಿಗಳನ್ನು ಅನುಷ್ಠಾನಗೊಳಿಸುತ್ತಿರುವುದರಿಂದ, ಉಳಿದ ಅವಧಿಗೆ ನಾನು ಅದಕ್ಕೆ ನಲವತ್ತು ಸಾವಿರ ಕೋಟಿ ರೂಪಾಯಿಗಳನ್ನು ನೀಡಬೇಕಾಗಿದೆ. ಐದು ಗ್ಯಾರಂಟಿಗಳಿಗೆ ಒಟ್ಟು ವಾರ್ಷಿಕವಾಗಿ ಐವತ್ತೊಂಬತ್ತು ಸಾವಿರರಿಂದ ಅರವತ್ತು ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ," ಎಂದು ಹೇಳಿದರು. ಆಗಸ್ಟ್ 1ರಿಂದ ಬಜೆಟ್ ಅನುಷ್ಠಾನಕ್ಕೆ ಬರಲಿದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರು ಈಗಾಗಲೇ 13 ಬಾರಿ ರಾಜ್ಯ ಬಜೆಟ್ ಮಂಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಗ 14 ನೇ ಬಾರಿ ಬಜೆಟ್ ಮಂಡಿಸಲಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಅವರ ಪಾಲಾಗಲಿದೆ.












Click it and Unblock the Notifications