ನಿರ್ಬಂಧ ಹೇರಲು ಹೊರಟಿರುವ 'ಅದ್ದೂರಿ ಮದುವೆ'ಯಲ್ಲಿ ಸಿದ್ದರಾಮಯ್ಯ
ಅದ್ದೂರಿ ಮದುವೆ ನಿಷೇಧಿಸಿ ಸದನದಲ್ಲಿ ಖಾಸಗಿ ವಿಧೇಯಕ ಮಂಡನೆಯಾಗಿರುವ ಮಧ್ಯೆ, ಚಳ್ಳಕೆರೆಯಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಅದ್ದೂರಿ ಮದುವೆಯಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ಸಾಲಗಾರರಾಗುತ್ತಿದ್ದಾರೆ. ತೋರಿಕೆಗಾಗಿ ಅಡುಗೆ ಮಾಡಿಸಿ ಬೀದಿಗೆ ಚೆಲ್ಲುತ್ತಾರೆ, ಈ ರೀತಿಯ ಹಲವು ಕಾರಣಗಳನ್ನು ನೀಡಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿಧೇಯಕ ಮಂಡಿಸಿದ್ದರು. (ಅದ್ದೂರಿ ಮದುವೆಗೆ ಬ್ರೇಕ್: ಸರಕಾರಕ್ಕೆ 6 ಪ್ರಶ್ನೆಗಳು)
ಜೊತೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಂದ ಈ ಖಾಸಗಿ ಮಂಡನೆ ಚರ್ಚೆಗೆ ಸಮಾಯಾವಕಾಶ ಸಿಗುವ ಭರವಸೆಯೂ ಸಿಕ್ಕಿದೆ. ಈ ಮಧ್ಯೆ, ಸೋಮವಾರ (ನ 30) ಸ್ವಪಕ್ಷೀಯ ಶಾಸಕರ ಮಗಳ ಮದುವೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದಾರೆ.
ಸಿದ್ದರಾಮಯ್ಯ ಜೊತೆ ಪ್ರಮುಖ ಕ್ಯಾಬಿನೆಟ್ ಸಚಿವರು ಮದುವೆಯಲ್ಲಿ ಭಾಗವಹಿಸಿದ್ದು, ಸಿದ್ದರಾಮಯ್ಯ ಸರಕಾರ ನಿಷೇಧಿಸಲು ಹೊರಟಿರುವ ಅದ್ದೂರಿ ಮದುವೆ ಕಾನೂನು ಎಷ್ಟರ ಮಟ್ಟಿಗೆ ಪ್ರಯೋಜನಕ್ಕೆ ಬರಬಹುದು ಎನ್ನುವುದರ ಬಗ್ಗೆ ಅನುಮಾನ ಹುಟ್ಟಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರ ಪ್ರತಿನಿಧಿಸುವ ಹಿರಿಯ ಕಾಂಗ್ರೆಸ್ ಶಾಸಕ ಡಿ ಸುಧಾಕರ್ ಅವರ ಪುತ್ರಿಯ ಅದ್ದೂರಿ ಮದುವೆ/ಆರತಕ್ಷತೆ ಚಳ್ಳಕೆರೆಯಲ್ಲಿ ಸೋಮವಾರ ವೈಭವೋಪಿತವಾಗಿ ನಡೆದಿದೆ.
ಮದುವೆಗೆ ಪಾಲ್ಗೊಂಡಿದ್ದನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಮುಂದೆ ಓದಿ..

ವೇದಿಕೆಗೆ ಕೋಟಿ ಕೋಟಿ
ಚಳ್ಳಕೆರೆಯ ಇತಿಹಾಸದಲ್ಲೇ ಅದ್ದೂರಿ ಮದುವೆಯೆಂದೇ ಹೇಳಲಾಗುತ್ತಿರುವ ಸುಧಾಕರ್ ಪುತ್ರಿಯ ಮದುವೆಯ ವೇದಿಕೆ, ಆಸನ ಮುಂತಾದ ವ್ಯವಸ್ಥೆಗೆ ಮೂರು ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನಲಾಗುತ್ತಿದೆ. ಅರಮನೆ ಮಾದರಿಯಲ್ಲಿ, ಬಂಗಾರದ ಬಣ್ಣದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿತ್ತು.

ಏಳರಿಂದ ಎಂಟು ಕೋಟಿ
ಚಳ್ಳಕೆರೆಯ ಎಚ್ಪಿಪಿಸಿ ಕಾಲೇಜು ಮೈದಾನದಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಸುಧಾಕರ್ ಪುತ್ರಿ ಸ್ಪೂರ್ತಿ ಮತ್ತು ತುಮಕೂರಿನ ನಿತೀಶ್ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಅದ್ದೂರಿ ಮದುವೆ ಸಭಾಂಗಣ ಮಾತ್ರವಲ್ಲದೇ, ಚಳ್ಳಕೆರೆಯ ಪ್ರಮುಖ ಬೀದಿಗಳನ್ನೂ ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು.

ಸಿಎಂ ಸಮರ್ಥನೆ
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಿದ್ದರಾಮಯ್ಯ, ಅದ್ಧೂರಿ ಮದುವೆ ನಿಗ್ರಹಕ್ಕೆ ಖಾಸಗಿ ವಿಧೇಯಕ ಮಂಡಿಸಲಾಗಿದೆ. ಅದಿನ್ನೂ ಚರ್ಚೆಗೆ ಬಂದಿಲ್ಲ ಎಂದು ಅದ್ಧೂರಿ ಮದುವೆಯಲ್ಲಿ ತಾವು ಪಾಲ್ಗೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ನಾನೂ ಸರಳ ಮದುವೆ ಪರ
ಮಗಳ ಅದ್ದೂರಿ ಮದುವೆ ನಡೆಸಿದ ಸುಧಾಕರ್, ನಾನೂ ಕೂಡಾ ಸರಳ ಮದುವೆಯ ಪರ. ಆದರೆ ಊರಿನ ಜನರ ಒತ್ತಾಯದಿಂದಾಗಿ ಅದ್ದೂರಿ ಮದುವೆ ನಡೆಸಬೇಕಾಯಿತು ಎಂದು ಹೇಳಿದ್ದಾರೆ.

ಅದ್ದೂರಿ ಮದುವೆ
ಮುನ್ನೂರು ಜನರಿಗಿಂತ ಹೆಚ್ಚಿನ ಜನರನ್ನು ಮದುವೆಗೆ ಆಮಂತ್ರಿಸಿದರೆ ತೆರಿಗೆ ವಿಧಿಸುವ ಬಗ್ಗೆ, ಕಲ್ಯಾಣ ಮಂಟಪಗಳ ಬಾಡಿಗೆಗಳನ್ನೂ ನಿಯಂತ್ರಿಸುವ ಬಗ್ಗೆ ರಮೇಶ್ ಕುಮಾರ್ ಮಂಡಿಸಿದ್ದ ಖಾಸಗಿ ಮಸೂದೆಯಲ್ಲಿ ಉಲ್ಲೇಖವಾಗಿದೆ.












Click it and Unblock the Notifications