ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನನ್ನ ಆಪ್ತರು ಎಂದ ರೇಣುಕಾಚಾರ್ಯ
ಬೆಂಗಳೂರು, ಫೆ. 24: ಕುತೂಹಲ ಮೂಡಿಸಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಭೇಟಿಯ ಕುರಿತು ಈಗ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಹಾಗೂ ಸಿಎಂ ಯಡಿಯೂರಪ್ಪ ಆಪ್ತ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟನೆ ಕೊಟ್ಟಿದ್ದಾರೆ.
ಕಳೆದ ವಾರವೇ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಿಎಂ ಆಪ್ತ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾತುಕತೆ ನಡೆಸಿದ್ದರು. ಇಬ್ಬರು ನಾಯಕರ ಭೇಟಿ ಬಗ್ಗೆ ಹಲವು ರೀತಿಯ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿದ್ದವು. ಜೊತೆಗೆ ರೇಣುಕಾಚಾರ್ಯ ಅವರಿಗೆ ಮಂತ್ರಿ ಸ್ಥಾನ ಸಿಗದ ಬಗ್ಗೆ ಅಸಮಾಧಾನಗೊಂಡು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದೀಗ ವಾರದ ಬಳಿಕ ತಮ್ಮ ಭೇಟಿಯ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಅವರ ಬಿಜೆಪಿಯ 32 ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬ ಹೇಳಿಕೆಯ ಬಗ್ಗೆಯೂ ಸಿಎಂ ರಾಜಕೀಯ ಕಾರ್ಯದರ್ಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಡುವುದಿಲ್ಲ ಎಂದೂ ರೇಣುಕಾಚಾರ್ಯ ಹೇಳಿದ್ದಾರೆ.

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನನ್ನ ಆಪ್ತರು
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನನ್ನ ಆಪ್ತರು. ಹೀಗಾಗಿ ಅವರನ್ನು ಭೇಟಿ ಮಾಡಿದ್ದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ಅವರ ಮನೆಗೆ ಹೋಗಿ ರಾಜಕೀಯವನ್ನು ನಾನು ಮಾತನಾಡಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಸಂಸದ ಡಿ.ಕೆ. ಸುರೇಶ್ ಒಂದು ಸಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಮಾತಾಡ್ತಾರೆ, ಮತ್ತೊಮ್ಮೆ ಯಡಿಯೂರಪ್ಪ ಅವರ ವಿರುದ್ಧ ಮಾತಾಡ್ತಾರೆ. ಹೀಗಾಗಿ ಆ ಬಗ್ಗೆ ಹೆಚ್ಚಿಗೆ ಅರ್ಥ ಬೇಡ ಎಂದಿದ್ದಾರೆ.

ಸಿಎಂ ವಿರುದ್ಧ ಅನಾಮಧೇಯ ಪತ್ರ ಬರೆದವರು ಯಾರೆಂದು ಗೊತ್ತು
ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಹರಿದಾಡಿದ್ದ ಅನಾಮಧೇಯ ಪತ್ರ ಬರೆದವರು ಯಾರೆಂದು ಗೊತ್ತಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಅಧಿಕಾರದ ಹುಚ್ಚಿನಿಂದ, ಮಾನಸಿಕ ಅಸ್ವಸ್ಥ ಬರೆದಿರುವ ಪತ್ರವದು. ರಾಜ್ಯ ಸರ್ಕಾರ ಅಸ್ಥಿರವಾಗಲ್ಲ, ಸ್ಥಿರವಾಗಿರುತ್ತದೆ. ಯಡಿಯೂರಪ್ಪ ಅವರು ಮುಂದಿನ ಮೂರೂವರೆ ವರ್ಷಗಳ ಸಿಎಂ ಆಗಿರುತ್ತಾರೆ.
ಸಿಎಂ ಯಡಿಯೂರಪ್ಪ ಅವರ ವಿರುದ್ಧ ಅನಾಮಧೇಯ ಪತ್ರ ಬರೆದವರು ಯಾರು ಅನ್ನೋದು ನನಗೆ ಗೊತ್ತಾಗಿದೆ. ನಮ್ಮ ಶಾಸಕರು ಯಾರೂ ಪತ್ರ ಬರೆದಿಲ್ಲ. ಯಾರು ಬರೆದಿದ್ದರೋ ಅವರಿಗೆ ಈಗಾಗಲೇ ನಾನು 'ನೇರವಾಗಿ ಪತ್ರ ಬರಿ' ಎಂದು ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಯಾರು ಪತ್ರ ಬರೆದವರು ಎಂಬುದನ್ನು ಹೇಳುತ್ತೇನೆ ಎಂದು ರೇಣುಕಾಚಾರ್ಯ ಮಾಹಿತಿ ಕೊಟ್ಟಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಲ್ಲ
ಜಲಸಂಪನ್ಮೂಲ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಲ್ಲ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ, ಮೂಲ ವಲಸಿಗ ಅನ್ನೋದು ಇಲ್ಲವೇ ಇಲ್ಲ. ಎಲ್ಲ ಶಾಸಕರೂ ಒಟ್ಟಾಗಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಇಬ್ರಾಹಿಂ ಒಬ್ಬ ಜೋಕರ್, ಬಾಯಿ ಚಪಲಕ್ಕೆ ಏನೇನೂ ಮಾತಾಡ್ತಾರೆ
ನಾವೆಲ್ಲ 120 ಬಿಜೆಪಿ ಶಾಸಕರು ಒಟ್ಟಿಗಿದ್ದೇವೆ, ಶಾಸಕರಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರು ಬಿಜೆಪಿಯ 32 ಶಾಸಕರು ಶೀಘ್ರದಲ್ಲೇ ರಾಜೀನಾಮೆ ಕೊಡುತ್ತಾರೆ ಎಂಬ ಹೇಳಿಕೆಗೆ ರೇಣುಕಾಚಾರ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಿ.ಎಂ. ಇಬ್ರಾಹಿಂ ಒಬ್ಬ ಜೋಕರ್, ಬಾಯಿ ಚಪಲಕ್ಕೆ ಏನೇನೂ ಮಾತಾಡ್ತಾರೆ. ಬಿಜೆಪಿ ಸರ್ಕಾರ ಅಸ್ಥಿರವಾಗಲ್ಲ, ಸ್ಥಿರವಾಗಿರುತ್ತೆ ಎಂದು ಲೇವಡಿ ಮಾಡಿದ್ದಾರೆ.












Click it and Unblock the Notifications