ಮಿನಿಸ್ಟರ್ ಅಂದ್ರೆ ದೇವಲೋಕದಿಂದ ಇಳಿದು ಬಂದವರಾ? ನಾವೇನ್ ಬಿಟ್ಟಿ ಬಿದ್ದಿದ್ದೀವಾ?
ಬೆಂಗಳೂರು, ಫೆ. 26: ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಮಧ್ಯದ ಶೀತಲ ಸಮರ ಮತ್ತೆ ವಿಕೋಪಕ್ಕೆ ತಿರುಗಿದೆ. ಇವತ್ತು ವಿಧಾನಸೌಧದಲ್ಲಿ ಮಾತನಾಡಿರುವ ಶಾಸಕ ರೇಣುಕಾಚಾರ್ಯ ಅವರು ಡಾ. ಸುಧಾಕರ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಮಿನಿಸ್ಟರ್ ಅಂದ್ರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಕೆಲವು ಸಚಿವರು ಕೈಗೇನೇ ಸಿಗಲ್ಲ. ಅವರ ಪಿ.ಎ ಗಳು ಹಾಗೂ ಪಿ.ಎಸ್ ಗಳು ಫೋನೇ ರಿಸೀವ್ ಮಾಡಲ್ಲ ಎಂದು ಹರಿಹಾಯ್ದಿದ್ದಾರೆ. ಕಾಂಗ್ರೆಸ್-ಜೆಡಿಎಸ್ನಿಂದ ಬಂದ ಎಲ್ಲ ಸಚಿವರು ಹಾಗೆ ಅಂತ ನಾನು ಹೇಳಲ್ಲ. ಕೆಲವರು ಮಾತ್ರ ನಮಗೆ ಕೈಗೆ ಸಿಗಲ್ಲ. ನಾನು ಹತ್ತಾರು ಭಾರಿ ಭೇಟಿ ಆಗಿದ್ದೇನೆ. ಪತ್ರ ಬರೆದಿದ್ದೇನೆ, ಏನೂ ಪ್ರಯೋಜನ ಆಗಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜೀ ಆಗೋ ಮಾತೇ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಅವರ ಹೆಸರು ಹೇಳದೆ ಕಿಡಿಕಾರಿದ್ದಾರೆ.

Recommended Video
ನಾನು ಧರಣಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ನಿನ್ನೆ ಅವರ ಪಿ.ಎಸ್ ಫೋನ್ ಮಾಡಿದ್ರು. ಕೆಲವು ಕೆಲಸ ಆಗಿದೆ. ನನ್ನ ಕೆಲಸ ಆದ ಮಾತ್ರಕ್ಕೆ ನಾನು ಸುಮ್ಮನಿರಲ್ಲ. ಪಾಪ ಅನೇಕ ನಮ್ಮ ಶಾಸಕರು ಬಾಯಿ ಇಲ್ಲದವರಾಗಿದ್ದಾರೆ. ಅವರ ಕೆಲಸಗಳೂ ಆಗಬೇಕು. ಐದಾರು ಸಚಿವರು ಕೈಗೆ ಸಿಗಲ್ಲ. ನಾನು ಮೂರು ಬಾರಿ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಆಯ್ಕೆ ಆಗಿದ್ದೇನೆ. ನಾವೇನು ಬಿಟ್ಟಿ ಬಿದ್ದಿದ್ದೀವಾ? ಎಂದು ಸಚಿವ ಸುಧಾಕರ್ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications