ಶೀಘ್ರದಲ್ಲೇ ರಾಜ್ಯದ ಜನರಿಗೆ 10 ರೂ.ಲಾಟರಿ ಭಾಗ್ಯ?
ಬೆಂಗಳೂರು, ಫೆ.4 : ಕರ್ನಾಟಕದಲ್ಲಿ ಮತ್ತೆ ಲಾಟರಿ ಜಾರಿಗೆ ಬರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮತ್ತೆ ಲಾಟರಿಗೆ ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು, ರಾಜ್ಯದಲ್ಲಿ ಪುನಃ 10 ರೂ. ಮುಖಬೆಲೆಯ ಲಾಟರಿಯನ್ನು ಆರಂಭಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು. [ಅಮ್ಮಾ ಇಡ್ಲಿ ಮೇಲೆ ಸಿ.ಎಂ.ಇಬ್ರಾಹಿಂ ಕಣ್ಣು]

ದೀರ್ಘಕಾಲೀನ ಮಾರಕ ರೋಗಗಳಿಂದ ಬಳಲುತ್ತಿರುವ ಮಧ್ಯಮ ವರ್ಗ ಹಾಗೂ ಬಡ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿಕೊಡಲು ಸಂಪನ್ಮೂಲ ಕ್ರೋಢೀಕರಣ ಮಾಡುವ ಉದ್ದೇಶದಿಂದ ಲಾಟರಿಯನ್ನು ಪುನಃ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಯ ಬಗ್ಗೆ ಎಂಎಸ್ಐಎಲ್ ವಿವರವಾದ ವರದಿ ತಯಾರಿಸಲಿದೆ ಎಂದರು.
ಕೇರಳ ರಾಜ್ಯದಲ್ಲಿ 'ಕಾರುಣ್ಯ ಬೆನೆವೋಲೆಂಟ್ ಫಂಡ್' ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ 'ಅಣ್ಣಾ ಕಾರುಣ್ಯ ಆರೋಗ್ಯ ಯೋಜನೆ' ಜಾರಿಗೆ ತರಬೇಕು ಎಂದು ಉದ್ದೇಶಿಸಲಾಗಿದೆ. ಆದ್ದರಿಂದ ಲಾಟರಿಗೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
40 ಸಾವಿರ ಜನರಿಗೆ ಉಪಯೋಗ : 'ಅಣ್ಣಾ ಕಾರುಣ್ಯ ಆರೋಗ್ಯ ಯೋಜನೆ' ಜಾರಿಗೆ ಬಂದರೆ ದೀರ್ಘಕಾಲೀನ ಮಾರಕ ರೋಗಗಳಿಂದ ಬಳಲುತ್ತಿರುವ ಸುಮಾರು 40 ಸಾವಿರ ಜನರಿಗೆ ಪ್ರತಿವರ್ಷ ಉಪಯೋಗವಾಗಲಿದೆ. ಯೋಜನೆಗೆ ವಾರ್ಷಿಕ 600 ಕೋಟಿ ರೂ. ಅಗತ್ಯವಿದೆ ಇದನ್ನು ಲಾಟರಿ ಮೂಲಕ ಸಂಗ್ರಹಿಸಲಾಗುತ್ತದೆ ಎಂದರು.
ಲಾಟರಿ ನಿಷೇಧವಾಗಿತ್ತು : ಕರ್ನಾಟಕದಲ್ಲಿ 2006-2007ನೇ ಸಾಲಿನಲ್ಲಿ ಲಾಟರಿಯನ್ನು ನಿಷೇಧಿಸಲಾಗಿತ್ತು. ಪ್ಲೇವಿನ್ ಆನ್ಲೈನ್ ಲಾಟರಿ ಹಾಗೂ ಒಂದಂಕಿ ಲಾಟರಿಗಳ ಹಾವಳಿ ರಾಜ್ಯದಲ್ಲಿ ಮಿತಿ ಮೀರಿದ್ದರಿಂದ ನಿಷೇಧ ಮಾಡಲಾಗಿತ್ತು. ಸದ್ಯ ಸಿದ್ದರಾಮಯ್ಯ ಸರ್ಕಾರ ಲಾಟರಿಗೆ ಪುನಃ ಅವಕಾಶ ನೀಡಲಿದೆಯೇ?












Click it and Unblock the Notifications