ಸಿದ್ದರಾಮಯ್ಯ ಆಪ್ತ ಜೆಡಿಎಸ್ ಸೇರ್ಪಡೆಗೆ ದಿನಾಂಕ ನಿಗದಿ!
ಬೆಂಗಳೂರು, ಏಪ್ರಿಲ್ 12; ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತೊರೆದಿದ್ದ ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಜೆಡಿಎಸ್ ಸೇರಲು ಮುಹೂರ್ತ ನಿಗದಿಯಾಗಿದೆ. ಏಪ್ರಿಲ್ 17ರ ಭಾನುವಾರ ಅವರು ಪಕ್ಷ ಸೇರಲಿದ್ದಾರೆ.
ರಾಮನಗರದಲ್ಲಿ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಈ ಕುರಿತು ಮಾಹಿತಿ ನೀಡಿದರು. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಿ. ಎಂ. ಇಬ್ರಾಹಿಂ ಭಾನುವಾರ ಜೆಡಿಎಸ್ ಸೇರಲಿದ್ದಾರೆ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ರಾಜಕೀಯ ವಿಶೇಷ: ಜೆಡಿಎಸ್ಗೆ ಶಕ್ತಿ ತುಂಬುತ್ತಾ ಸಿ.ಎಂ. ಇಬ್ರಾಹಿಂ ಸೇರ್ಪಡೆ?
ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಹೆಚ್. ಕೆ. ಕುಮಾರಸ್ವಾಮಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮಾನವಾದ ಹುದ್ದೆ ಸೃಷ್ಟಿ ಮಾಡಲಾಗಿದೆ. ಪಕ್ಷದಲ್ಲಿ ಅವರಿಗೂ ವೇದಿಕೆ ಕಲ್ಪಿಸಲಾಗಿದೆ. ಇಬ್ಬರೂ ಕೂಡ ಸಹೋದರರಂತೆ ಪಕ್ಷವನ್ನು ಮುನ್ನಡೆಸಬೇಕು ಎಂದು ಎಚ್. ಡಿ. ದೇವೇಗೌಡ ಆಶಯ ವ್ಯಕ್ತಪಡಿಸಿದ್ದಾರೆ.
ಅಧಿಕೃತವಾಗಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಸಿ.ಎಂ. ಇಬ್ರಾಹಿಂ; ಮುಂದಿನ ನಡೆ ಏನು?
ಕಾಂಗ್ರೆಸ್ ತೊರೆದಿರುವ ಮತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತರಾದ ಸಿ. ಎಂ. ಇಬ್ರಾಹಿಂ ಮಂಗಳವಾರ ರಾಮನಗರದಲ್ಲಿ ನಡೆದ ಜೆಡಿಎಸ್ ಪಕ್ಷದ 'ಜನತಾ ಜಲಧಾರೆ' ರಥಗಳಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ತಂತ್ರಕ್ಕೆ ಜೆಡಿಎಸ್ ಅತಂತ್ರ!
ದೇವೇಗೌಡರ ಪರ್ವ ಆರಂಭ
ರಾಮನಗರದಲ್ಲಿ ಮಂಗಳವಾರ ಮಾತನಾಡಿದ ಸಿ. ಎಂ. ಇಬ್ರಾಹಿಂ, "1994ರಲ್ಲಿ ದೇವೇಗೌಡರ ಪರ್ವ ಆರಂಭವಾಗಿದ್ದು ರಾಮನಗರದಿಂದಲೇ. ಈಗ ಕುಮಾರಸ್ವಾಮಿ ಪರ್ವ ಕೂಡಾ ಇದೇ ಕ್ಷೇತ್ರದಿಂದ ಆರಂಭವಾಗುತ್ತದೆ" ಎಂದು ಹೇಳಿದರು.
"ರೈತರಿಗೆ ಅನ್ಯಾಯ ಮಾಡೋದಿಲ್ಲ ಬೇಕಾದರೆ ರಾಜೀನಾಮೆ ಕೊಡುತ್ತೇನೆ" ಎಂದು ಎಚ್. ಡಿ. ದೇವೇಗೌಡರು ಹೇಳಿದ್ದರು. "ಈಗ ಅಂತಹ ಒಂದು ಮಾದರಿ ನಾಯಕತ್ವ ಇದೆಯೇ?" ಎಂದು ಪ್ರಶ್ನಿಸಿದರು.
ಅನೇಕರು ಬರುತ್ತೇವೆ ಎಂದಿದ್ದಾರೆ
"ತಮ್ಮ ಮುಂದಿನ ನಡೆ ಎಚ್. ಡಿ. ದೇವೇಗೌಡರ ಮಾರ್ಗದರ್ಶನಕ್ಕೆ ಬಿಟ್ಟಿದ್ದು. ದೇವೇಗೌಡರ ಜೊತೆ ಸಾಗುತ್ತೇವೆ. ಅನೇಕರು ಬರುತ್ತೇವೆ ಎಂದು ಹೇಳಿದ್ದಾರೆ. ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಲಿದೆ. ಮೊದಲ ಸ್ಥಾನ ಜೆಡಿಎಸ್ಗೆ ಆ ಮೇಲೆ ಬಿಜೆಪಿ, ಕೊನೆಗೆ ಕಾಂಗ್ರೆಸ್. ಉತ್ತರ ಪ್ರದೇಶ, ಪಂಜಾಬ್ನಂತೆ ಇಲ್ಲೂ ಕಾಂಗ್ರೆಸ್ ಧೂಳೀಪಟವಾಗಲಿದೆ" ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.
ಮೇ ತಿಂಗಳಿನಿಂದ ರಾಜ್ಯ ಪ್ರವಾಸ
"ಮೇ ತಿಂಗಳಿನಿಂದ ರಾಜ್ಯ ಪ್ರವಾಸ ಆರಂಭ ಮಾಡುತ್ತೇನೆ. ಕುಮಾರಸ್ವಾಮಿ ಸರ್ಕಾರ ಮತ್ತೆ ಮೂರನೇ ಮಹಡಿಯಲ್ಲಿ ಕೂರುವ ತನಕ ಯಾತ್ರೆಯ ಸಂಕಲ್ಪ ಮಾಡಿದ್ದೇನೆ" ಎಂದರು.
"ನಮ್ಮನ್ನು ಅಧಿಕಾರದಿಂದ ತೆಗೆದು 23 ವರ್ಷಗಳು ಆಯಿತು. ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನು ಕೂಡಾ ನೋಡುತ್ತಾರೆ. ಅಂತಹ ಕಾಲ ಕೂಡ ಬರಲಿದೆ" ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.
ನಾವು ಸಿಂಹ ದಾಟಿಸಲು ಬಂದಿದ್ದೇವೆ
ರಾಮನಗರದಲ್ಲಿ ನಡೆದ ಜೆಡಿಎಸ್ ಪಕ್ಷದ 'ಜನತಾ ಜಲಧಾರೆ' ರಥಗಳಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿ. ಎಂ. ಇಬ್ರಾಹಿಂ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ಲೇವಡಿ ಮಾಡಿದರು. "ನಾವು ಸಿಂಹ ದಾಟಿಸಲು ಬಂದಿದ್ದೇವೆ. ಮೇಕೆ ದಾಟಿಸಲು ಅಲ್ಲ" ಎಂದರು.
ಯಾರನ್ನೂ ಟೀಕಿಸುವುದಿಲ್ಲ
"ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಒಳ್ಳೆಯ ಸ್ನೇಹಿತರು ಇದ್ದರು. ಆದರೆ ಏನು ಮಾಡುವುದು ಮುಂದೆ ಸಾಗಲೇ ಬೇಕು. ನಾನು ಯಾರನ್ನೂ ಟೀಕಿಸುವುದಿಲ್ಲ. ಬಯ್ಯುವುದು ಇಲ್ಲ. ಜೆಡಿಎಸ್ ಪಕ್ಷದಲ್ಲಿರುವ ತೊಡಕುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಿದೆ" ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.
ಹಲವು ತಿಂಗಳುಗಳಿಂದ ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಂಡಿದ್ದ ಸಿ. ಎಂ. ಇಬ್ರಾಹಿಂ ಪಕ್ಷ ತೊರೆಯುವುದಾಗಿ ಹೇಳಿದ್ದರು. ಬಳಿಕ ಕಾಂಗ್ರೆಸ್ ನಾಯಕರು ಅವರ ಜೊತೆ ಸಂಧಾನ ಸಭೆ ನಡೆಸಿದ್ದರು. ಆದರೆ ಪಕ್ಷ ತೊರೆದಿದ್ದ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು.