ಸಿಎಂ ಸ್ವಾಗತಿಸಲು ಚಾಮರಾಜನಗರ ಸಜ್ಜು
ಚಾಮರಾಜನಗರ, ಅ.7 : ಮುಖ್ಯಮಂತ್ರಿಯಾದವರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ನಡುವೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋಮವಾರ ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದಾರೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಮನಸ್ವಿನಿ' ಮತ್ತು ಮೈತ್ರಿ'ಗೆ ಸಿಎಂ ಚಾಲನೆ ನೀಡಲಿದ್ದಾರೆ, ಸಿಎಂ ಸ್ವಾಗತಕ್ಕಾಗಿ ಚಾಮರಾಜನಗರ ಸಕಲ ರೀತಿಯಲ್ಲಿ ಸಜ್ಜಾಗಿ ನಿಂತಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಸಿಎಂ ನಗರಕ್ಕೆ ಆಗಮಿಸಲಿದ್ದಾರೆ.

11.45ಕ್ಕೆ ಹೆಗ್ಗವಾಡಿಯಲ್ಲಿ ಸಿಎಂ, ಅಂಬೇಡ್ಕರ್ ಭವನ ಉದ್ಘಾಟಿಸಲಿದ್ದಾರೆ. ನಂತರ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 'ಮನಸ್ವಿನಿ, ಮೈತ್ರಿ' ಯೋಜನೆಗೆ ಚಾಲನೆ ನೀಡಲಿದ್ದಾರೆ. ನಂತರ ಅಂಬೇಡ್ಕರ್ ಪ್ರತಿಮೆ ಅನಾವರಣ ಸೇರಿದಂತೆ 17 ವಿವಿಧ ಕಾರ್ಯಕ್ರಮಗಳಿಗೆ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಲಿದ್ದಾರೆ.
ಸಂಜೆ 4 ಗಂಟೆಗೆ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆ ನಡೆಸಿ, ರಾತ್ರಿ 8ಕ್ಕೆ ಸಿದ್ದರಾಮಯ್ಯ ಮೈಸೂರಿಗೆ ಮರಳಲಿದ್ದಾರೆ. ಒಂದು ದಿನವನ್ನು ಸಿಎಂ ಸಂಪೂರ್ಣವಾಗಿ ಚಾಮರಾಜನಗರದಲ್ಲಿ ಕಳೆಯಲಿದ್ದಾರೆ.
ಮನಸ್ವಿನಿ : ಸರ್ಕಾರ ಮನಸ್ವಿನಿ ಯೋಜನೆ ಮೂಲಕ 40 ವರ್ಷ ಮೀರಿದ ಮದುವೆ ಆಗದ ಮಹಿಳೆಯರು, ವಿವಾಹ ವಿಚ್ಛೇದಿತರಿಗೆ ಮಾಸಿಕ 500 ರೂ. ಪಿಂಚಣಿ ನೀಡಲಿದೆ. ಈ ಯೋಜನೆಗೆ ಸೋಮವಾರ ಸಿಎಂ ಚಾಲನೆ ನೀಡಲಿದ್ದಾರೆ.
ಮೈತ್ರಿ : ಮೈತ್ರಿ ಯೋಜನೆಯಡಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ 500 ರೂ. ಪಿಂಚಣಿ ವಿತರಿಸಲಾಗುತ್ತದೆ. ಉದ್ಘಾಟನಾ ಕಾರ್ಯಕ್ರಮದ ವೇಳೆ ಈ ಎರಡೂ ಯೋಜನೆಗಳಡಿ 1,004 ಫಲಾನುಭವಿಗಳಿಗೆ ಪಿಂಚಣಿ ವಿತರಿಸಲಾಗುತ್ತದೆ.
2013ರ ಜನವರಿಯಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಚಾಮರಾಜನಗರಕ್ಕೆ ಆಗಮಿಸಿದ್ದರು. ನಂತರ ಅಧಿಕಾರಾವಧಿ ಮುಗಿದು ತಮ್ಮ ಸ್ಥಾನ ಕಳೆದು ಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಅಧಿಕಾರಿ ಪಡೆದ ಐದು ತಿಂಗಳಿಗೆ ನಗರಕ್ಕೆ ಆಗಮಿಸುತ್ತಿದ್ದಾರೆ.
ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪನಂಬಿಕೆಗೆ ಸಿಎಂ ಸಿದ್ದರಾಮಯ್ಯ ಸೋಮವಾರ ಗುದ್ದು ನೀಡಲಿದ್ದಾರೆ. ಇನ್ನಾದರೂ ಚಾಮರಾಜನಗರದ ಶಾಪ ವಿಮೋಚನೆ ಆಗುತ್ತದೆಯೇ?











Click it and Unblock the Notifications