ಜುಲೈ 2ನೇ ವಾರದಿಂದ ಮೋಡ ಬಿತ್ತನೆ : ಕೃಷ್ಣ ಬೈರೇಗೌಡ
ಬೆಂಗಳೂರು, ಜೂನ್ 28 : 'ಮುಂಗಾರು ಮರುತಗಳಿಂದ ಮಳೆಯಾಗದ ಕಾರಣ ಹನಿ ನೀರಿಗೂ ಪರದಾಡುವಂತಾಗಿದೆ. ಜುಲೈ 2ನೇ ವಾರದಿಂದ ಮೋಡ ಬಿತ್ತನೆ ಮಾಡಲಾಗುತ್ತದೆ' ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಶುಕ್ರವಾರ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ ಅವರು, 'ಹುಬ್ಬಳ್ಳಿ ಮತ್ತು ಮೈಸೂರನ್ನು ಎರಡು ಕೇಂದ್ರವಾಗಿಟ್ಟುಕೊಂಡು ಮೋಡ ಬಿತ್ತನೆ ಮಾಡಲಾಗುತ್ತದೆ' ಎಂದರು.
ಚೆನ್ನೈನ ಜಲ ಗಂಡಾಂತರ ಬೆಂಗಳೂರಿಗೂ ಕಾದಿದೆಯಾ? ಸಮಗ್ರ ವರದಿ
'ರೆಡಾರ್ ವಿಮಾನದ ವಿನ್ಯಾಸಕ್ಕೆ ಸೂಚನೆ ನೀಡಲಾಗಿದೆ. ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಎರಡೂ ಕೇಂದ್ರದಲ್ಲಿ ಒಟ್ಟಿಗೆ ಮೋಡ ಬಿತ್ತನೆ ಆರಂಭಿಸಲಾಗುತ್ತದೆ. ಕೇಂದ್ರ ಸರ್ಕಾರ ಇದಕ್ಕೆ ಇನ್ನೂ ಅನುಮತಿ ನೀಡಬೇಕಿದೆ' ಎಂದು ಸಚಿವರು ವಿವರಣೆ ನೀಡಿದರು.
ದೇಶದ 80ರಷ್ಟು ಜಲಾಶಯಗಳು ಬರಿದು, ಜನರ ಬವಣೆ ಹೇಳತೀರದು
'ಮೊದಲು ಬೆಂಗಳೂರು, ಹುಬ್ಬಳ್ಳಿ ಎರಡು ಕೇಂದ್ರಗಳನ್ನು ಮಾಡಿಕೊಂಡು ಮೋಡ ಬಿತ್ತನೆ ಮಾಡಲು ಉದ್ದೇಶಿಸಲಾಗಿತ್ತು. ಈಗ ಬೆಂಗಳೂರು ಬಿಟ್ಟು ಮೈಸೂರನ್ನು ಕೇಂದ್ರವಾಗಿ ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಸಚಿವರು ತಿಳಿಸಿದರು.
ದೇಶದಲ್ಲಿ 2030ರ ಹೊತ್ತಿಗೆ ಶೇ.40ರಷ್ಟು ಮಂದಿಗೆ ಕುಡಿಯೋಕು ನೀರಿರೊಲ್ಲ
ಮುಂಗಾರು, ಹಿಂಗಾರು ಮಳೆ ಕೊರತೆ
ರಾಜ್ಯ ಈ ವರ್ಷವೂ ಬರಗಾಲಕ್ಕೆ ತುತ್ತಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜೂನ್ ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಜಿಲ್ಲೆಯಲ್ಲಿ ಸಾಕ್ಷಷ್ಟು ಮಳೆಯಾಗಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿದೆ. ಕುಡಿಯುವ ನೀರು ದೊರೆಯುವುದು ಸಹ ಕಷ್ಟವಾಗಿದೆ. ಪೂರ್ವ ಮುಂಗಾರು ಮಳೆಯಾಗಿಲ್ಲ, ಮುಂಗಾರು ಮಳೆಯೂ ಆಗದೇ ರೈತರು ಆತಂಕಗೊಂಡಿದ್ದಾರೆ.
ಜಲಾಶಯಗಳು ಖಾಲಿ
ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ 31ರಷ್ಟು ಕಡಿಮೆ ಮಳೆಯಾಗಿದೆ. ಪೂರ್ವ ಮುಂಗಾರು ಮಳೆ ಕೊರತೆ ಎದುರಿಸಿದ್ದ ರೈತರು, ಮುಂಗಾರು ಮಳೆ ಉತ್ತಮವಾಗಿ ಸುರಿಯಲಿದೆ ಎಂಬ ನಿರೀಕ್ಷೆ ಹೊಂದಿದ್ದರು. ಆದರೆ, ಮಳೆ ಕೊರತೆ ರೈತರನ್ನು ಕಂಗೆಡಿಸಿದೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲಿಯೂ ಮಳೆ ಕೊರತೆ ಉಂಟಾಗಿದೆ. ಕಾವೇರಿ ಕೊಳ್ಳದಲ್ಲಿಯೂ ಮಳೆ ಕಡಿಮೆಯಾಗಿದ್ದು, ಜಲಾಶಯಗಳು ಭರ್ತಿಯಾಗಲಿವೆಯೇ? ಎಂಬ ಅನುಮಾನ ಉಂಟಾಗಿದೆ. ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟವೂ ಕುಸಿದಿದೆ.
ಮೋಡ ಬಿತ್ತನೆಗೆ ಟೆಂಡರ್ ಅಂತಿಮ
ಒಟ್ಟು 2 ವರ್ಷಗಳಿಗೆ ಮೋಡ ಬಿತ್ತನೆ ಮಾಡಲು 88 ಕೋಟಿ ವೆಚ್ಚ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮೊದಲ ವರ್ಷಕ್ಕೆ 43 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. 'ಕ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್' ಸಂಸ್ಥೆ ಟೆಂಡರ್ ಪಡೆದಿದೆ. ಮೋಡ ಬಿತ್ತನೆ ಮಾಡಲು ವಿಮಾನ ಬಳಕೆ ಮಾಡಬೇಕಿದೆ ಆದ್ದರಿಂದ, ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು.
ಮಳೆಗಾಗಿ ಕಾಯುವುದೊಂದೇ ಪರಿಹಾರ
ಮಂಡ್ಯದಲ್ಲಿ ಬೇಸಿಗೆ ಬೆಳೆಗೆ ನೀರು ಕೇಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಎರಡು ತಿಂಗಳಿನಲ್ಲಿ ಉತ್ತಮ ಮಳೆ ಸುರಿದರೆ ಕುಡಿಯುವ ನೀರಿಗೆ ಕೊರತೆ ಉಂಟಾಗುವುದಿಲ್ಲ. ಆದರೆ, ಬೆಳೆಗಳಿಗೆ ನೀರು ಕೊಡುವ ಕುರಿತು ಆಗಸ್ಟ್ನಲ್ಲಿ ತೀರ್ಮಾನಿಸಲಾಗುತ್ತದೆ.