ಔರಾದ್ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಿನ್ನಮತ ಸ್ಫೋಟ
ಬೀದರ್, ಡಿಸೆಂಬರ್ 7: ಇತ್ತೀಚೆಗೆ ವಿಜಯಪುರದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಿನ್ನಮತ ಸ್ಫೋಟದ ಬಳಿಕ ಇದೀಗ ಬೀದರ್ ಜಿಲ್ಲೆಯ ಔರಾದ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಗುರುವಾರ ಔರಾದ್ ನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ಬಿ.ಎಸ್ ಯಡಿಯೂರಪ್ಪ ಮುಂದೆ ಶಕ್ತಿ ಪ್ರದರ್ಶನ ತೋರಿಸಿ ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಹಾಲಿ ಶಾಸಕ ಪ್ರಭು ಚೌಹಾಣ್ ಹಾಗೂ ಟಿಕೆಟ್ ಆಕಾಂಕ್ಷಿ ತಾನಾಜಿ ಜಾದವ್ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿದೆ.

ಪ್ರಭು ಚೌಹಾಣ್ ಹಾಗೂ ತಾನಾಜಿ ಜಾದವ್ ಇಬ್ಬರು ಪ್ರತ್ಯೇಕ ಟೆಂಟ್ ಹಾಕಿ ಬಿಎಸ್ವೈ ಮುಂದೆ ಶಕ್ತಿ ಪ್ರದರ್ಶನಕ್ಕೆ ಅಣಿಯಾಗಿದ್ದರು. ಈ ವೇಳೆ ಇಬ್ಬರು ಬೆಂಬಲಿಗರ ಮಧ್ಯೆ ಮಾರಾಮಾರಿ ನಡೆದಿದೆ.
ತಾನಾಜಿ ಜಾದವ್ ಕಳೆದ ಚುನಾವಣೆಯಲ್ಲಿ ಕೆಜಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಸಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಹಿನ್ನಲೆಯಲ್ಲಿ ಪ್ರಭು ಚೌಹಾಣ್ ಹಾಗೂ ತಾನಾಜಿ ಜಾದವ್ ಮಧ್ಯೆ ಭಿನ್ನಮತ ಸ್ಪೋಟಗೊಂಡಿದೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುವುದು ಬಿಎಸ್ ವೈಗೆ ತಿಳಿಯದಂತಾಗಿದೆ.

"ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಆರಕ್ಕೆ ಆರೂ ಕ್ಷೇತ್ರದಲ್ಲಿ ಗೆಲ್ಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಯಾವುದೇ ಗೊಂದಲಗಳು, ಭಿನ್ನಾಭಿಪ್ರಾಯಗಳು ಅಡ್ಡಿಯಾಗಲ್ಲ" ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ, ಕಾಂಗ್ರೆಸ್ ಗೆ ಈಗ ಉಳಿಗಾಲಿಲ್ಲ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಕರ್ನಾಟಕದಲ್ಲೂ ಸಹ ಕಾಂಗ್ರೆಸ್ ಸೋಲು ಖಚಿತವಾಗಿದೆ ಎಂದರು. ಇದೇ ವೇಳೆ ಬಿಎಸ್ ವೈ ಮರಾಠ ಸಮಾಜವನ್ನು '2ಎ'ಗೆ ಸೇರಿಸುವ ಭರವಸೆ ನೀಡಿದರು.












Click it and Unblock the Notifications