ಕೆರೆ ತುಂಬಿದ ಖುಷಿಯಲ್ಲಿ ಜನರಿಗೆ ಬಾಡೂಟ ಹಾಕಿದ ಜೆಡಿಎಸ್ ಶಾಸಕ
ಚಿಕ್ಕಬಳ್ಳಾಪುರ, ಅಕ್ಟೋಬರ್ 24 : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದಂತೆಯೇ ಮತದಾರರನ್ನು ಸೆಳೆಯಲು ರಾಜಕಾರಣಿಗಳು ನಾನಾ ಕಸರತ್ತುಗಳನ್ನು ನಡೆಸಿದ್ದಾರೆ.
ಅದಕ್ಕೆ ಪೂರಕವೆಂಬಂತೆ ಊರಿನ ಕೆರೆ ತುಂಬಿದ ನೆಪದಲ್ಲಿ ಮಂಗಳವಾರ ಚಿತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಜೆಕೆ ಕೃಷ್ಣಾರೆಡ್ಡಿ ಅವರು ಮತದಾರರನ್ನು ಸೆಳೆಯಲು ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.
ಚಿಂತಾಮಣಿ ತಾಲೂಕು ಕನ್ನಂಪಲ್ಲಿ ಕೆರೆ ಬಳಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಹಾಗೂ ಮುದ್ದೆ ಊಟ ಹಾಕಿಸಿದ್ದು, ಸಾವಿರಾರು ಜನರು ಆಗಮಿಸಿ ತಮಗೆ ಏನು ಬೇಕೋ ಅದನ್ನು ಜಬರ್ದಸ್ತ್ ಆಗಿ ಊಟ ಮಾಡಿ ಹೊಟ್ಟೆ ಮೇಲೆ ಕೈಯಾಡಿಸಿಕೊಂಡು ಹೋದರು.
ಬಾಡೂಟದ ನೆಪದಲ್ಲಿ ಜನರ ಓಲೈಕೆಗೆ ಇಳಿದಿದ್ದಾರೆಂದು ಕ್ಷೇತ್ರದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೆ ಶಾಸಕ ಕೃಷ್ಣಾರೆಡ್ಡಿ ಪ್ರತಿಕ್ರಿಯಿಸಿದ್ದು, "ಈ ಬಾರಿ ಉತ್ತಮ ಮಳೆಯಾದ ಹಿನ್ನಲೆ ನಗರದ ಕುಡಿಯುವ ನೀರಿನ ಮೂಲ ಕನ್ನಂಪಲ್ಲಿ ಕೆರೆ ಕೋಡಿ ಹರಿದ ಕಾರಣಕ್ಕೆ ಕನ್ನಂಪಲ್ಲಿ ಕೆರೆಯಂಗಳದಲ್ಲಿ ಕ್ಷೇತ್ರದ ಜನತೆಗೆ ಬಾಡೂಟ ಅಯೋಜನೆ ಮಾಡಿದ್ದೇನೆಂದು ಕೃಷ್ಣಾರೆಡ್ಡಿ ಸ್ಪಷ್ಟಪಡಿಸಿದರು.