ಕಾಲನು ಬಂದು ಬಾ ಎಂದಾಗ ಎಲ್ಲವೂ ಶೂನ್ಯ ಚಿತೆಗೇರುವಾಗ: ಬದುಕೆಷ್ಟು ನಶ್ವರ
'ಕಾಲನು ಬಂದು ಬಾ ಎಂದಾಗ ಎಲ್ಲವೂ ಶೂನ್ಯ ಚಿತೆಗೇರುವಾಗ, ಉಳಿಯುವುದೊಂದೇ ದಾನಧರ್ಮ ತಂದ ಪುಣ್ಯ' ಇದು ದೇವರದುಡ್ಡು ಚಿತ್ರದ ಜನಪ್ರಿಯ ಹಾಡೊಂದರಲ್ಲಿ ಬರುವ ಸಾಹಿತ್ಯ. ಸದ್ಯ ದೇಶ ಎದುರಿಸುತ್ತಿರುವ ಆರೋಗ್ಯ ಎಮರ್ಜೆನ್ಸಿಯ ಈ ಸಮಯದಲ್ಲಿ ಈ ಹಾಡನ್ನು ಸಾರಿಸಾರಿ ಕೇಳುವಂತೆ ಮಾಡುತಿದೆ.
ಬದುಕು ಎಷ್ಟು ನಶ್ವರ ಎನ್ನುವುದನ್ನು ಪ್ರಕೃತಿ ಜಗತ್ತಿಗೆ ಹಲವು ಬಾರಿ ತೋರಿಸಿದೆ. ಇಂದು ಬದುಕಿರುವವ ನಾಳೆ ಬದುಕಿರುತ್ತಾನೆ ಎನ್ನುವ ಯಾವ ಗ್ಯಾರಂಟಿಯೂ ಇಲ್ಲದ ಈ ಸಮಯದಲ್ಲಿ ಕೋವಿಡ್ ನಿಂದ ಮೃತ ಪಟ್ಟವರ ಕುಟುಂಬ ಪಡುತ್ತಿರುವ ನೋವು, ಸಂಕಟ ಅಂತಿಂದಲ್ಲ.
ಮೊದಲೇ ಕೊರೊನಾ ಸುದ್ದಿ ಕೇಳಿಕೇಳಿ ಹೈರಾಣವಾಗಿರುವ ಈ ಸಮಯದಲ್ಲಿ ಮತ್ತೆ ನೆಗೆಟೀವ್ ಸುದ್ದಿ ಹಾಕಿ, ಭಯ ಪಡಿಸುವ ಉದ್ದೇಶವಂತೂ ಖಂಡಿತ ಈ ಲೇಖನದಲ್ಲ. ಆದರೆ, ಮಾನವೀಯತೆಗೆ ಮಿಡಿಯಬೇಕಾಗಿರುವ ಈ ಸಮಯದಲ್ಲಿ ಮೃಗಗಳಂತೆ ಕೆಲವರು ವರ್ತಿಸುತ್ತಿರುವ ರೀತಿ ನಾಗರೀಕ ಸಮುದಾಯವೇ ತಲೆತಗ್ಗಿಸುವಂತದ್ದು.
ಕೂರೊನಾ ಮೊದಲ ಅಲೆ ಬಂದಾಗ ಇದರ ಪ್ರಭಾವ ಯಾವರೀತಿ ಇರುತ್ತದೆ ಎನ್ನುವುದರ ಅರಿವಿಲ್ಲದ ಸರಕಾರ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಆದರೆ, ಎರಡನೇ ಅಲೆಯ ಚೈನ್ ಬ್ರೇಕ್ ಮಾಡುವಲ್ಲೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತ ವಿಫಲವಾಗಿರುವುದು ದುರಂತ. ಇದಕ್ಕೆ ಅತ್ಯಂತ ಸ್ಪಷ್ಟ ಕಾರಣ ಇಚ್ಚಾಶಕ್ತಿಯ ಕೊರತೆ, ಆಡಳಿತ ಯಂತ್ರದ ವೈಫಲ್ಯತೆ.

ಕಾಳಸಂತೆಯಲ್ಲಿ ಮಾರಾಟ ಮಾಡಿದ್ದ ದುರುಳರು, ಎರಡನೇ ಅಲೆಯ ವೇಳೆ ವ್ಯಾಕ್ಸಿನ್ ದಂಧೆಗೆ
ಮೊದಲ ಅಲೆಯ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಮುಂತಾದ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದ ದುರುಳರು, ಎರಡನೇ ಅಲೆಯ ವೇಳೆ ವ್ಯಾಕ್ಸಿನ್ ದಂಧೆಗೆ ಇಳಿದಿದ್ದಾರೆ. ಎಷ್ಟೇ ದುಡ್ಡು ಡಿಮಾಂಡ್ ಮಾಡಿದರೂ, ಸಾರ್ವಜನಿಕರು ಇದನ್ನು ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಇರುವುದರಿಂದ, ರೆಮಿಡಿಸಿಮಿರ್ ಲಸಿಕೆಯನ್ನು 12-18ಸಾವಿರ ರೂಪಾಯಿ ಮಾರಾಟ ಮಾಡುತ್ತಿದ್ದಾರೆ. ಇದರ ಮೂಲ ಬೆಲೆ 2.5-3.5 ಸಾವಿರ ರೂಪಾಯಿ. ಜೊತೆಗೆ, ಕೃತಕ ಅಭಾವವನ್ನು ಸೃಷ್ಟಿಸುತ್ತಿದ್ದಾರೆ. RTPCR ಟೆಸ್ಟ್ ನಲ್ಲೂ ಕಪಟ ನಾಟಕ (ಚಿತ್ರದಲ್ಲಿ: ದೆಹಲಿಯ ನಿಗಮಬೋಧ ಘಾಟ್, ಚಿತ್ರಕೃಪೆ ಪಿಟಿಐ)

ಅಂಬುಲೆನ್ಸ್ ಗಳು ಫುಲ್ ಡಿಮಾಂಡ್ ನಲ್ಲಿ
ದಿನವೊಂದಕ್ಕೆ ಬೆಂಗಳೂರಿನಲ್ಲಿ ಕೊರೊನಾ ಒಂದರಲ್ಲೇ ಸಾವಿನ ಪ್ರಮಾಣ ನೂರಕ್ಕೂ ಹೆಚ್ಚಾಗುತ್ತಿರುವುದರಿಂದ ಅಂಬುಲೆನ್ಸ್ ಗಳು ಫುಲ್ ಡಿಮಾಂಡ್ ನಲ್ಲಿವೆ. ಶವವನ್ನು ಸ್ಮಶಾನಕ್ಕೆ ಸಾಗಿಸುವುದು, ಸುಡುವುದನ್ನೇ ಪ್ಯಾಕೇಜ್ ಮಾಡಿಕೊಂಡಿರುವ ಕೆಲವರಿಗೆ ಮೃತ ಕುಟುಂಬದವರು ಕಣ್ಣೀರು ಹಾಕಿದರೆ, ಗೋಗರೆದರೆ ಏನಂತೆ. ಒಂದು ರೀತಿಯಲ್ಲಿ ಕೊರೊನಾ ಇರುವುದೇ ಆದಷ್ಟು ದುಡ್ಡು ಮಾಡಿಕೊಳ್ಳಲು ಎನ್ನುವ ಇವರನ್ನು ಯಾವ ವರ್ಗಕ್ಕೆ ಸೇರಿಸಬೇಕು? ( ಚಿತ್ರದಲ್ಲಿ : ಮುಂಬೈ ವಿರಾರ್ ಪಶ್ಚಿಮದಲ್ಲಿರುವ ಸ್ಮಶಾನ, ಚಿತ್ರಕೃಪೆ ಪಿಟಿಐ)

ಆಸ್ಪತ್ರೆಯವರಿಗಂತೂ ಕೊರೊನಾ ರೋಗಿಗಳು ಸದ್ಯದ ಮಟ್ಟಿಗೆ ಎಟಿಎಂ ಮೆಷಿನ್
ಇನ್ನು, ಆಸ್ಪತ್ರೆಯವರಿಗಂತೂ (ಎಲ್ಲಾ ಆಸ್ಪತ್ರೆಗಳಲ್ಲ) ಕೊರೊನಾ ರೋಗಿಗಳು ಸದ್ಯದ ಮಟ್ಟಿಗೆ ಎಟಿಎಂ ಮೆಷಿನ್. ಖಾಸಗಿ ಆಸ್ಪತ್ರೆಯವರು ಬೆಡ್ ಅಭಾವ ಸೃಷ್ಟಿಸುವುದು, ಆ ಮೂಲಕ ಒಂದಕ್ಕೆರಡು ದುಡ್ಡು ಪೀಕುವುದನ್ನು ಕಳೆದ ಒಂದು ವರ್ಷದಲ್ಲಿ ಕರಗತ ಮಾಡಿಕೊಂಡಿವೆ. ಒಂದು ರೋಗಿಗೆ ಕನಿಷ್ಟ ಏನಿಲ್ಲದಿದ್ದರೂ ಎರಡು ಲಕ್ಷ ಬಿಲ್ ಮಾಡುವ ಇಂತಹ ಆಸ್ಪತ್ರೆಗಳು, ಎಡ್ಮಿಟ್ ಆದಾಗಲೇ 50% ಮುಂಗಡ ಕಟ್ಟಿಸಿಕೊಳ್ಳುತ್ತಾರೆ. ಕೆಲವೊಂದು ಆಸ್ಪತ್ರೆಗಳಲ್ಲಿ ಎಲ್ಲವೂ ಕ್ಯಾಶ್ ವ್ಯವಹಾರ. ( ಚಿತ್ರದಲ್ಲಿ : ಭೈರವ ಘಾಟ್ ಹಿಂದೂ ರುದ್ರಭೂಮಿ, ಕಾನ್ಪುರ, ಚಿತ್ರಕೃಪೆ ಪಿಟಿಐ)

ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಹಾಡಿದ ರಾಜಕೀಯ ಮುಖಂಡರು
ಕೂರೊನಾ ಅಲೆ ಇಷ್ಟು ವೇಗವಾಗಿ ಹರಡಲು ಏನು ಕಾರಣ ಎಂದಾಗ ರಾಜಕೀಯ ನಾಯಕರನ್ನೂ ಬೊಟ್ಟು ಮಾಡಬೇಕಾಗುತ್ತದೆ. ಐದು ರಾಜ್ಯಗಳ ಚುನಾವಣೆ, ಉಪಚುನಾವಣೆ, ಕುಂಭಮೇಳ, ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಹಾಡಿದ ಇಂತವರೇ, ನಮ್ಮ ದೇಶದ ಕಾನೂನನ್ನು ನಿರೂಪಿಸುವವರು. ನಾಯಕ ಸರಿಯಿದ್ದರೆ ತಾನೇ, ಆತನ ಹಿಂಬಾಲಕರು ಸರಿಯಿರುವುದು ಎನ್ನುವ ಮಾತಿನಂತೆ ದೇಶದೆಲ್ಲಡೆ ಆರೋಗ್ಯ ತುರ್ತು ಪರಿಸ್ಥಿತಿ ಎದುರಾದ ನಂತರ ಕುಂಭಮೇಳ ನಿಲ್ಲಿಸಿದರೆ ಏನು ಪ್ರಯೋಜನ, ಚುನಾವಣಾ ಪ್ರಚಾರವನ್ನು ವೆಬ್ ಮೂಲಕ ಮಾಡಿದರೆ ಏನು ಉಪಯೋಗ? ( ಚಿತ್ರದಲ್ಲಿ: ಪ್ರಯಾಗರಾಜ್ ಸ್ಮಶಾನ, ಚಿತ್ರಕೃಪೆ ಪಿಟಿಐ)

ಸ್ಮಶಾನದಲ್ಲಿ ಹೆಣಗಳು ಸಾಲುಸಾಲು
ಸ್ಮಶಾನದಲ್ಲಿ ಹೆಣಗಳು ಸಾಲುಸಾಲು ನಿಂತಾಗ, ಪರ್ಯಾಯವಾಗಿ ಬೇರೆ ಏನು ಮಾಡಬಹುದು ಎನ್ನುವುದರ ಬಗ್ಗೆ ಪ್ರಯತ್ನವನ್ನೂ ಪಡದ ಸರಕಾರಕ್ಕೆ ವಿರೋಧ ಪಕ್ಷಗಳು ಐಡಿಯಾ ಕೊಟ್ಟ ಮೇಲೆ, ನಗರದ ಹೊರ ವಲಯದಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿತು. ನಗರದ ಕೋವಿಡ್ ಸ್ಮಶಾನದಲ್ಲಿ ಹೆಣ ಸುಡುವುದಕ್ಕೂ ರಾಜಕಾರಣಿಗಳು ಪ್ರಭಾವ ಬೀರಲಾರಂಭಿಸಿದರು. ಕೆಲವು ರಾಜಕಾರಣಿಗಳಿಗೆ ನೊಂದ ಕುಟುಂಬದವರು ಬಿಸಿಯನ್ನು ಮುಟ್ಟಿಸಿದರು. ( ಚಿತ್ರದಲ್ಲಿ: ಹಿಂಡನ್ ನದಿ ಸ್ಮಶಾನ, ಘಾಜಿಯಾಬಾದ್, ಚಿತ್ರಕೃಪೆ ಪಿಟಿಐ)
Recommended Video

ಒಳಿತು ಮಾಡು ಮನುಷ್ಯ, ನೀ ಇರುವುದು ಮೂರು ದಿವಸ
ಏನಾದರೇನಂತೆ, 'ಒಳಿತು ಮಾಡು ಮನುಷ್ಯ, ನೀ ಇರುವುದು ಮೂರು ದಿವಸ' ಎನ್ನುವುದನ್ನು ಇವರೆಲ್ಲಾ ಅರ್ಥ ಮಾಡಿಕೊಂಡರೆ ಸಾಕು, ದೇಶದ ಕೆಲವೊಂದು ಸ್ಮಶಾನದ ಚಿತ್ರಗಳನ್ನು ನೋಡಿಯಾದರೂ, ಇವರಿಗೆ ದೇವರು ಸದ್ಬುದ್ದಿಯನ್ನು ನೀಡಲಿ, ಜನ ಮೆಚ್ಚುವ ಕೆಲಸವನ್ನು ಮಾಡಲಿ ಎನ್ನುವುದಷ್ಟೇ ಈ ಲೇಖನದ ಆಶಯ. (ಚಿತ್ರದಲ್ಲಿ: ಲಕ್ನೋದ ಕೇಂದ್ರ ಸ್ಮಶಾನ, ಚಿತ್ರಕೃಪೆ ಪಿಟಿಐ)












Click it and Unblock the Notifications