SHOCKING: ಒಂದೇ ಜಿಲ್ಲೆಯಲ್ಲಿ ನೂರಾರು ಬಾಲ ಗರ್ಭಿಣಿಯರು ಪತ್ತೆ!
ಬಾಲ್ಯವಿವಾಹ ಕಾನೂನು ಬಾಹಿರ ಎಂದು ಹೇಳಲಾಗುತ್ತದೆ. ಸರ್ಕಾರ ಕೂಡ ಬಾಲ್ಯವಿವಾಹ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಇಷ್ಟಾದರೂ ರಾಜ್ಯದಲ್ಲಿ ಬಾಲ್ಯವಿವಾಹ ತಡೆಯುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ ಒಂದೇ ಜಿಲ್ಲೆಯಲ್ಲಿ ನೂರಾರು ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ ಎನ್ನುವ ವಿಚಾರ ಜನರನ್ನು ಆತಂಕಕ್ಕೀಡುಮಾಡಿದೆ.
ಹೌದು, ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ 164 ಬಾಲ ಗರ್ಭಿಣಿಯರು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇವರೆಲ್ಲರೂ ಕನಿಷ್ಠ 18 ವರ್ಷವೂ ತುಂಬದ ಬಾಲಕಿಯರು ಎಂದು ಹೇಳಲಾಗಿದೆ. ಈ ಘಟನೆಯು ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿರುವುದಕ್ಕೆ ಹಿಡಿದ ಕನ್ನಡಿ ಎಂದು ಹೇಳಲಾಗುತ್ತಿದೆ.

ಈ ವರ್ಷದ ಏಪ್ರಿಲ್ ತಿಂಗಳಿನಿಂದ ಜುಲೈವರೆಗೆ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನಲ್ಲೇ ಅತಿ ಹೆಚ್ಚು ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಬರೋಬ್ಬರಿ 36 ಮಂದಿ ಬಾಲ ಗರ್ಭಿಣಿಯರು ಹಿರಿಯೂರು ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಉಳಿದಂತೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ 35, ಚಳ್ಳಕೆರೆ ತಾಲ್ಲೂಕಿನಲ್ಲಿ 29, ಚಿತ್ರದುರ್ಗ 28, ಹೊಳಲ್ಕೆರೆ 19 ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ 17 ಮಂದಿ ಬಾಲ ಗರ್ಭಿಣಿಯರು ಇರುವ ಬಗ್ಗೆ ಮಾಹಿತಿ ಹೊರಬಂದಿದೆ.
ಬಾಲಕಿಯರು ನಿಗದಿತ ವಯಸ್ಸಿಗೂ ಮುನ್ನವೇ ಬಾಲ್ಯವಿವಾಹವಾಗಿ ಗರ್ಭಿಣಿಯಾಗುತ್ತಿರುವ ಪ್ರಕರಣಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾ ಮಟ್ಟದಲ್ಲಿ ಒಂದು ಟೀಂ ರಚಿಸುವಂತೆ ಸೂಚನೆಯನ್ನೂ ನೀಡಿದ್ದರು. ಆದರೂ ಆರೋಗ್ಯ ಇಲಾಖೆ, ಪೊಲೀಸರು ಹಾಗೂ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಬಾಲ್ಯ ವಿವಾಹ ಕಂಟ್ರೋಲ್ ಮಾಡಲು ಸಾಧ್ಯವಾಗ್ತಿಲ್ಲ ಅಂತಾರೆ ಜಿಲ್ಲೆಯ ಜನ.

ಜಗತ್ತು ಎಷ್ಟೇ ಮುಂದುವರಿದಿದ್ದರೂ ಸಾಮಾಜಿಕ ಅಥವಾ ಆರ್ಥಿಕ ಕಾರಣಗಳಿಂದ ಬಾಲ್ಯವಿವಾಹಗಳು ಎಗ್ಗಿಲ್ಲದೆ ನಡೆಯುತ್ತಿವೆ. ಹದಿಹರೆಯದ ವಯಸ್ಸಿಗೆ ಮದುವೆಯಾಗುವ ಹೆಣ್ಣುಮಕ್ಕಳು ಮುಂದೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಗುರಿಯಾಗುತ್ತಿದ್ದಾರೆ. ಇವರು ಗರ್ಭಿಣಿಯಾಗಿ ತಪಾಸಣೆಗೆಂದು ಬಂದಾಗಲೇ ಅವರು ಅವಧಿಗೂ ಮುನ್ನ ಮದುವೆಯಾಗಿರುವ ವಿಚಾರ ತಿಳಿಯುತ್ತಿದೆ. ಆಗಲೂ ಅವರನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುವ ಕೆಲಸ ನಡೆಯುತ್ತಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದರೆ ಅಥವಾ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಯ ವಿರುದ್ಧ ಪೋಕ್ಸೊ ಕೇಸ್ ದಾಖಲಿಸುವ ನಿಯಮವೂ ಇದೆ. ಅದೂ ನಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಬಾಲಕಿ ಗರ್ಭಿಣಿ ಎಂದು ಪತ್ತೆಯಾದ ಕೂಡಲೇ ಪೊಲೀಸರಿಗೆ ದೂರು ನೀಡುತ್ತಿಲ್ಲ. ಜಿಲ್ಲೆಯಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆ ಪೋಷಕರು ಎಸ್ಎಸ್ಎಲ್ಸಿ ಮುಗಿದ ಕೂಡಲೇ ತಮ್ಮ ಹೆಣ್ಣುಮಕ್ಕಳಿಗೆ ಮದುವೆ ಮಾಡುತ್ತಿದ್ದಾರೆ. ಮತ್ತೊಂದೆ ಶಾಲೆಯಿಂದ ಹೊರಗುಳಿದ ಮಕ್ಕಳ ಮೇಲೆ ನಿಗಾ ಇಡಲು ಸ್ಥಳೀಯವಾಗಿಯೂ ಒಂದು ಟೀಂ ರಚನೆಯಾಗಿದೆ. ಇಷ್ಟೆಲ್ಲ ಇದ್ದರೂ ಬಾಲ್ಯವಿವಾಹಗಳು ಎಗ್ಗಿಲ್ಲದೆ ನಡೆಯುತ್ತಿವೆ. ಹೆಣ್ಣುಮಗು ಗರ್ಭಿಣಿಯಾದ ನಂತರವೇ ಆಕೆಗೆ ಬಾಲ್ಯವಿವಾಹವಾಗಿರುವುದು ಬೆಳಕಿಗೆ ಬರುತ್ತಿದೆ.
ಈ ಗಂಭೀರ ಸಮಸ್ಯೆ ಬಗ್ಗೆ ಮಾತನಾಡಿರುವ ಚಿತ್ರದುರ್ಗದ ಜಿಲ್ಲಾಧಿಕಾರಿ ವೆಂಕಟೇಶ್, ಬಾಲ ಗರ್ಭಿಣಿಯರ ಸಮಸ್ಯೆ ತಡೆಗಟ್ಟಲು ಜಿಲ್ಲೆಯಲ್ಲಿ ಜನರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಬಾಲ್ಯವಿವಾಹ ಎನ್ನುವ ಅನಿಷ್ಠ ನಿಯಂತ್ರಣಕ್ಕೆ ಬರಲು ಸಾರ್ವಜನಿಕರು ಕೂಡ ಕೈಜೋಡಿಸುವ ಅಗತ್ಯವಿದೆ.












Click it and Unblock the Notifications