ಸಮಾರಂಭದಲ್ಲಿ ಸಿದ್ದರಾಮಯ್ಯ ಆಡಿದ ವಿಷಾದದ ಮಾತು
ಬೆಂಗಳೂರು, ಜೂ 7: ರಾಷ್ಟ್ರಪಿತ ಮಹಾತ್ಮ ಗಾಂಧಿ ಪುತ್ಥಳಿ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ರಾಜಕಾರಣದ ಬಗ್ಗೆ ವಿಷಾದದ ಮಾತನ್ನಾಡಿದ್ದಾರೆ.
ಶುಕ್ರವಾರ (ಜೂ 6) ಸಾಲು ಸಾಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಪ್ರಸಕ್ತ ರಾಜಕೀಯ ಗಬ್ಬೆದ್ದು ಹೋಗಿದೆ. ಈಗಿನ ರಾಜಕಾರಣದಲ್ಲಿ ಪ್ರಾಮಾಣಿಕತೆ ಎನ್ನುವುದು ದುರ್ಬಿನ್ ಹಾಕಿ ಹುಡುಕಿದರೂ ಸಿಗುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. (ಕಾವೇರಿ ವಿವಾದ : ಜೂ.9ರಂದು ಸರ್ವಪಕ್ಷ ಸಭೆ)
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಪಶ್ಚಿಮ ಭಾಗದಲ್ಲಿ ಮಹಾತ್ಮ ಗಾಂಧಿಯವರ ಕಂಚಿನ ಪುತ್ಥಳಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಕಲ್ಲಿನ ಪುತ್ಥಳಿ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ಪ್ರಾಮಾಣಿಕ ರಾಜಕಾರಣದಲ್ಲಿ ಗಾಂಧೀಜಿ ಮತ್ತು ಶಾಸ್ತ್ರಿಯವರ ಹೆಸರು ಈಗಲೂ ಚಾಲ್ತಿಯಲ್ಲಿದೆ. ಇವರಿಬ್ಬರು ನಡೆಸಿದ ರಾಜಕಾರಣ, ಈಗಿನ ರಾಜಕಾರಣಿಗಳಿಗೆ ಪಾಠವಾಗಬೇಕೆಂದು ಸಿದ್ದರಾಮಯ್ಯ ಹೇಳಿದರು.

ಲಾಲ್ ಬಹದ್ದೂರ್ ಶಾಸ್ತ್ರಿ
ಮಾಜಿ ಪ್ರಧಾನಿ ಶಾಸ್ತ್ರಿಯವರಿಗೆ ಸ್ವಂತ ಮನೆ ಎನ್ನುವುದೇ ಇರಲಿಲ್ಲ. ಅವರು ರೈಲು ಸಚಿವರಾಗಿದ್ದಾಗ ಒಮ್ಮೆ ರೈಲು ಅಪಘಾತ ಸಂಭವಿಸಿತು. ನೈತಿಕ ಹೊಣೆಹೊತ್ತು ಶಾಸ್ತ್ರಿಯವರು ರಾಜೀನಾಮೆ ನೀಡಿದರು - ಸಿದ್ದರಾಮಯ್ಯ

ಈಗ ಯಾರು ರಾಜೀನಾಮೆ ನೀಡುತ್ತಾರೆ?
ಈಗ ಪ್ರತೀದಿನ ಎನ್ನುವ ಹಾಗೆ ರೈಲು, ರಸ್ತೆ ಮತ್ತು ವಿಮಾನ ಅಪಘಾತ ಸಂಭವಿಸುತ್ತದೆ. ಆದರೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವ ರಾಜಕಾರಣಿಗಳು ನಮ್ಮಲ್ಲಿ ಈಗ ಎಲ್ಲಿದ್ದಾರೆಂದು ಸಿದ್ದು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರ ಹಗರಣಗಳು
ಭ್ರಷ್ಟಾಚಾರ ಹಗರಣಗಳು ದಿನಕ್ಕೊಂದರಂತೆ ಹೊರಬರುತ್ತಿದೆ. ಆದರೂ ಭ್ರಷ್ಟಾಚಾರದಲ್ಲಿ ತೊಡಗಿದ ರಾಜಕಾರಣಿಗಳು ರಾಜೀನಾಮೆ ನೀಡುವ ಗೋಜಿಗೇ ಹೋಗುವುದಿಲ್ಲ. ನ್ಯಾಯಾಲಯ ಹೇಳಿದ ಮೇಲೆ ಮಾತ್ರ ರಾಜೀನಾಮೆ ನೀಡುತ್ತಾರೆ. ಇದು ಆಗಿನ ಮತ್ತು ಈಗಿನ ರಾಜಕೀಯಕ್ಕಿರುವ ವ್ಯತ್ಯಾಸ - ಸಿದ್ದರಾಮಯ್ಯ

ದೇವರಾಜ್ ಅರಸು
ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ 32ನೇ ಪುಣ್ಯತಿಥಿಯ ಸಂದರ್ಭದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿದ್ದರಾಮಯ್ಯ, ಅರಸು ಅವರು ಶೋಷಿತ ವರ್ಗದವರಿಗೆ ನ್ಯಾಯ ಒದಗಿಸಿದ ದಿಟ್ಟ ರಾಜಕಾರಣಿ ಎಂದು ಬಣ್ಣಿಸಿದ್ದಾರೆ.

ಅಕ್ಟೋಬರ್ ಎರಡರಂದು ಅನಾವರಣ
ಗಾಂಧಿ ಜಯಂತಿಯ ದಿನವಾದ ಅಕ್ಟೋಬರ್ ಎರಡರಂದು ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ. 23 ಅಡಿ ಉದ್ದದ ಪೀಠದ ಮೇಲೆ 27 ಅಡಿ ಎತ್ತರದ ಗಾಂಧೀಜಿ ಪ್ರತಿಮೆ ಅನಾವರಣಗೊಳ್ಳಲಿದೆ - ವಿಧಾನ ಪರಿಷತ್ತಿನ ಸಭಾಪತಿ ಡಿ ಎಚ್ ಶಂಕರಮೂರ್ತಿ.












Click it and Unblock the Notifications