ಎಸ್.ಆರ್.ಬೊಮ್ಮಾಯಿ 281ಕ್ಕೆ ಔಟ್; ಬಸವರಾಜ ಬೊಮ್ಮಾಯಿ 358 ನಾಟೌಟ್ !
ಬೆಂಗಳೂರು, ಜು. 22: ಅಪ್ಪನಂತೆ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಿಂದ ಕರ್ನಾಟಕ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ ಬಸವರಾಜ ಎಸ್. ಬೊಮ್ಮಾಯಿ ಅವರು ತನ್ನ ತಂದೆಯ ದಾಖಲೆಯನ್ನು ಮುರಿದಿದ್ದಾರೆ!
ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಬಳಿಕ ಅನಿರೀಕ್ಷಿತವಾಗಿ ಸಿಎಂ ಹುದ್ದೆ ಅಲಂಕರಿಸಿದ ಬಸವರಾಜ ಬೊಮ್ಮಾಯಿ ಆಡಳಿತದ ಅವಧಿ ಒಂದು ವರ್ಷ ಸಮೀಪಿಸುತ್ತಿದೆ. ಜು. 28 ಬಂದ್ರೆ, ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಪೂರ್ಣಗೊಳ್ಳಲಿದೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಜು. 22 ಕ್ಕೆ 358 ದಿನ ಪೂರೈಸಿದ್ದಾರೆ. ವರ್ಷ ಪೂರೈಸುವ ಮೂಲಕ ಅಪ್ಪನಿಗಿಂತಲೂ ಸುದೀರ್ಘ ಅವಧಿ ಆಡಳಿತ ನಡೆಸಿದ ಹಿರಿಮೆಗೆ ಬೊಮ್ಮಾಯಿ ಪಾತ್ರರಾಗಿದ್ದಾರೆ. ಕರ್ನಾಟಕ ಸಿಎಂ ಆಗಿ ಆಳ್ವಿಕೆ ನಡೆಸಿದ ದಿನಗಳಿಗೆ ಹೋಲಿಸಿದರೆ ಅಪ್ಪನನ್ನು ಮಗ ಮೀರಿಸಿದ್ದಾರೆ.
ಎಸ್ ಅರ್ ಬೊಮ್ಮಾಯಿ ಅನಿರೀಕ್ಷಿತ ಸಿಎಂ :
ಕರ್ನಾಟಕ ರಾಜ್ಯದಲ್ಲಿ 1983 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸೇತರ ಸಕಾರ ಅಧಿಕಾರಕ್ಕೆ ಬಂದಿತ್ತು. ಜನತಾ ಪಾರ್ಟಿಯ ದಿ. ರಾಮಕೃಷ್ಣ ಹೆಗಡೆ ಸಿಎಂ ಹುದ್ದೆ ಅಲಂಕರಿಸಿದ್ದರು. 1984 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಾರ್ಟಿ 28 ಸೀಟುಗಳ ಪೈಕಿ ಕೇವಲ ನಾಲ್ಕು ಸೀಟು ಗೆದ್ದಿತ್ತು. ಬೇರೆ ಪಕ್ಷಗಳ ಬಾಹ್ಯ ಬೆಂಬಲ ಪಡೆದಿದ್ದು ರಚಿಸಿದ್ದ ಸರ್ಕಾರ ಆಗಿದ್ದರಿಂದ ನೈತಿಕ ಹೊಣೆ ಹೊತ್ತು ರಾಮಕೃಷ್ಣ ಹೆಗಡೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. 1985 ರ ಬಳಿಕ ಪೂರ್ಣ ಪ್ರಮಾಣದಲ್ಲಿ ಜನತಾ ಪಾರ್ಟಿ ಸರ್ಕಾರ ರಚನೆ ಮಾಡಿತ್ತು. ಎರಡನೇ ಅವಧಿಗೆ ರಾಮಕೃಷ್ಣ ಹೆಗಡೆ ಸಿಎಂ ಕುರ್ಚಿ ಅಲಂಕರಿಸಿದ್ದರು.

ಆದರೆ ರಾಮಕೃಷ್ಣ ಹೆಗಡೆ ಮೇಲೆ ಭ್ರಷ್ಟಾಚಾರ ಅರೋಪ ಕೇಳಿ ಬಂದಿತ್ತು. ಆ ಬಳಿಕ 1988ರಲ್ಲಿ ರಾಮಕೃಷ್ಣ ಹೆಗಡೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಎಸ್. ಅರ್ ಬೊಮ್ಮಾಯಿಗೆ ಅನಿರೀಕ್ಷಿತವಾಗಿ ಸಿಎಂ ಹುದ್ದೆ ಪಟ್ಟ ಒಲಿದು ಬಂದಿತ್ತು. 1988 ಆಗಸ್ಟ್ 13 ರಂದು ಎಸ್.ಆರ್. ಬೊಮ್ಮಾಯಿ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಒಂದು ವರ್ಷ ತುಂಬುವ ಮೊದಲೇ ಬಹುಮತ ಸಾಬೀತು ಮಾಡುವ ಸಂದರ್ಭ ಎದುರಾಯಿತು. 1989 ಏಪ್ರಿಲ್ 21 ರಂದು ಎಸ್.ಆರ್. ಬೊಮ್ಮಾಯಿ ಸರ್ಕಾರವನ್ನು ರಾಜ್ಯಪಾಲರಾದ ಪಿ. ವೆಂಕಟುಬ್ಬಯ್ಯ ವಜಾ ಮಾಡಿದ್ದರು. ಆ ಬಳಿಕ ಬೊಮ್ಮಾಯಿ ಸುಪ್ರೀಂಕೋರ್ಟ್ ಗೆ ಹೋಗಿದ್ದರು. ಎಸ್. ಆರ್. ಬೊಮ್ಮಾಯಿ ಕೇಸ್ ಅಂತಲೇ ರಾಜಕೀಯ ಇತಿಹಾಸದಲ್ಲಿ ಈಗಲೂ ಚರಿತ್ರೆಯ ಪುಟ ಸೇರಿದೆ. ಒಟ್ಟಾರೆ ಎಸ್.ಅರ್. ಬೊಮ್ಮಾಯಿ ಕೇವಲ 281 ದಿನವಷ್ಟೇ ಸಿಎಂ ಖುರ್ಚಿಯಲ್ಲಿ ಕೂತಿದ್ದರು.

ಬೊಮ್ಮಾಯಿ ಅವರ ತಂದೆ ಎಸ್. ಆರ್ ಬೊಮ್ಮಾಯಿ (ಸೋಮಪ್ಪ ರಾಯಪ್ಪ ಬೊಮ್ಮಾಯಿ) ಅವರು ಅನಿರೀಕ್ಷಿತವಾಗಿ ಕರ್ನಾಟಕ ಸಿಎಂ ಪಟ್ಟ ಅಲಂಕರಿಸಿದ್ದರು. ಆದರೆ ವರ್ಷ ತುಂಬುವ ಮೊದಲೇ ಬಹುಮತ ಸಾಬೀತು ಮಾಡಲಾಗದೇ ಎಸ್. ಆರ್. ಬೊಮ್ಮಾಯಿ ಸರ್ಕಾರ ಬಿದ್ದು ಹೋಗಿತ್ತು. ಬಿ.ಎಸ್. ಯಡಿಯೂರಪ್ಪ ಅವರ ಅನಿರೀಕ್ಷಿತ ನಿರ್ಗಮನದಿಂದ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿಎಂ ಪಟ್ಟ ಅಲಂಕರಿಸಿದ್ದರು. ಅಬ್ಬರದ ಆಡಳಿತ ನೀಡದಿದ್ದರೂ ಯಾವುದೇ ಅಡೆ ತಡೆ ಇಲ್ಲದೇ 358 ದಿನ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಅಪ್ಪನ ದಾಖಲೆಯನ್ನು ಬಸವರಾಜ ಬೊಮ್ಮಾಯಿ ಅವರು ಮುರಿದಿದ್ದಾರೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡು ವರ್ಷ ತುಂಬಿದ ಸಂಭ್ರಮದಲ್ಲಿ ಬಸವರಾಜ ಬೊಮ್ಮಾಯಿ ಮುಳುಗಿದ್ದಾರೆ.












Click it and Unblock the Notifications